ಕನ್ನಡಪ್ರಭವಾರ್ತೆ ಚಿತ್ರದುರ್ಗಕರುಳಿನ ಹುಳುಗಳು ನಮ್ಮೊಳಗೆ ವಾಸಿಸುವ ಮೂಕ ಅಕ್ರಮಣಕಾರರು. ಬಯಲು ಮಲವಿಸರ್ಜನೆ ನಿಲ್ಲಿಸಿದರೆ ಮಾತ್ರ ಜಂತುಹುಳು ಬಾಧೆಯಿಂದ ನಿವಾರಣೆ ಪಡೆಯಬಹುದೆಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಹೇಳಿದರು.ನಗರದ ಐಯುಡಿಪಿ ಬಡಾವಣೆಯ 11ನೇ ಕ್ರಾಸ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮದಕರಿಪುರ ಭಾರತಿ ಪ್ರೌಢಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಜಂತುಹುಳು ದಿನದ ಅಂಗವಾಗಿ ಜಂತು ನಿವಾರಕ ಮಾತ್ರೆ ನುಂಗಿಸುವ ಮತ್ತು ಶೌಚಾಲಯ ಬಳಕೆಯ ಮಹತ್ವ ಕುರಿತ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಾವ್ಯ ಮಾತನಾಡಿ, ವೈಯಕ್ತಿಕ ನೈರ್ಮಲ್ಯದ ಕೊರತೆ, ಬೇಯಿಸದ ಮತ್ತು ಕಲುಷಿತ ಆಹಾರ ಮತ್ತು ಅತಿಯಾದ ಸಿಹಿ ತಿಂಡಿಗಳು ಮತ್ತು ಜಂಕ್ ಫುಡ್ ಸೇವನೆಯಿಂದ ಮಕ್ಕಳಲ್ಲಿ ಜಂತುಹುಳು ಬಾಧೆ ಉಂಟಾಗಬಹುದು ಎಂದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜನಾಥ ಮಾತನಾಡಿ, ನೈರ್ಮಲ್ಯ ಶೌಚಾಲಯ ಬಳಸಬೇಕು. ಹೊರಗೆ ಮಲವಿಸರ್ಜನೆ ಮಾಡಬಾರದು. ಮುಖ್ಯವಾಗಿ ತಿನ್ನುವ ಮೊದಲು ಮತ್ತು ಶೌಚಾಲಯಗಳನ್ನು ಬಳಸಿದ ನಂತರ ಕೈಗಳನ್ನು ಸರಿಯಾಗಿ ತೊಳೆಯಬೇಕು. ಚಪ್ಪಲಿ ಮತ್ತು ಬೂಟುಗಳನ್ನು ಧರಿಸಬೇಕು. ಸುರಕ್ಷಿತ ಮತ್ತು ಶುದ್ಧ ನೀರಿನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾಗಿ ತೊಳೆದು ಸರಿಯಾಗಿ ಬೇಯಿಸಿದ ಆಹಾರ ಸೇವಿಸಿ ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ 19 ವರ್ಷದ ಒಳಗಿನ 325 ಮಕ್ಕಳಿಗೆ ಸಾಂಕೇತಿಕವಾಗಿ ಜಂತುಹುಳ ನಿವಾರಕ ಮಾತ್ರೆ ನುಂಗಿಸಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ಸುರೇಂದ್ರ, ಡಾ. ಕಾವ್ಯ, ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಕಾತ್ಯಾಯನಮ್ಮ, ಉಷಾ, ಪವಿತ್ರ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಪ್ರವೀಣ್ ಕುಮಾರ್, ಶಾಲಾ ಶಿಕ್ಷಕರಾದ ಉಮೇಶ್, ದ್ಯಾಮಣ್ಣ, ಆಶಾ ಕಾರ್ಯಕರ್ತೆಯರು, ಮಕ್ಕಳು, ಪೋಷಕರು ಇದ್ದರು.