ಹೂವಿನಹಡಗಲಿ: ಪಟ್ಟಣದ ಕುಡಿವ ನೀರಿನ ಯೋಜನೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಕ್ಸ್ಪ್ರೆಸ್ ಫಿಲ್ಡರ್ ಲೈನ್ಗೆ ಜೆಸ್ಕಾಂ ಇಲಾಖೆಯೇ ರೈತರು ಹಾಗೂ ಹಳ್ಳಿಗಳಿಗೆ ಅನಧಿಕೃತ ಸಂಪರ್ಕ ಕಲ್ಪಿಸಿದ್ದೀರಿ. ಕೂಡಲೇ ತೆರವು ಮಾಡಲು ಜೆಸ್ಕಾಂ ಅಧಿಕಾರಿಗಳಿಗೆ ಶಾಸಕ ಕೃಷ್ಣನಾಯ್ಕ ಸೂಚನೆ ನೀಡಿದ್ದಾರೆ.
ಇಷ್ಟೆಲ್ಲ ಸಮಸ್ಯೆಗಳಿದ್ದರೂ ಆ ಭಾಗದ ಲೈನ್ಮನ್ಗಳು ಏನು ಮಾಡುತ್ತಿದ್ದಾರೆ? ಸಭೆ ಇದ್ದರೂ ಪಟ್ಟಣದ 5 ಸಿಬ್ಬಂದಿ ಗೈರಾಗಿದ್ದಾರೆ. ಅವರಿಗೆ ಯಾರು ರಜೆ ನೀಡಿದ್ದಾರೆ? ನಾನು ಯಾರಿಗೆ ಸಭೆ ಮಾಡಬೇಕು? ಗ್ರಾಮೀಣ ಪ್ರದೇಶ ಸೇರಿ 8 ಜನರನ್ನು ಅಮಾನತು ಮಾಡಲು ಜೆಸ್ಕಾಂ ಇಇ ಸತೀಶ ಅವರು ಜೆಸ್ಕಾಂ ಎಇಇ ಕೇದಾರನಾಥಗೆ ಸಭೆಯಲ್ಲೇ ಸೂಚಿಸಿದರು.
ಈಗಾಗಲೇ ಬೇಸಿಗೆ ಬರುತ್ತಿದೆ. ಇದರಿಂದ ಕುಡಿವ ನೀರಿನ ಯೋಜನೆಗಳಿಗೆ ಕರೆಂಟ್ ಕೈಕೊಡದಂತೆ ಎಚ್ಚರಿಕೆ ವಹಿಸಬೇಕು. ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಜಾಕ್ವಾಲ್ಗೆ ನಿರಂತರ ವಿದ್ಯುತ್ ನೀಡಬೇಕು. ಪದೇಪದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ದೊಡ್ಡ ಕುಡಿವ ನೀರಿನ ಯೋಜನೆ ಇದ್ದರೂ ಸಮಯಕ್ಕೆ ಸರಿಯಾಗಿ ಜನರಿಗೆ ನೀರು ಪೂರೈಕೆ ಮಾಡದಿದ್ದರೆ ಹೇಗೆ? ಮೊದಲು ಲೈನ್ಮನ್ ಸರಿಯಾಗಿ ಕೆಲಸ ಮಾಡಲು ಹೇಳಿ ಎಂದು ಶಾಸಕ ಕೃಷ್ಣನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.ಶಾಸಕರು ಜೆಸ್ಕಾಂ ಮತ್ತು ಪುರಸಭೆಯ ಅಧಿಕಾರಿಗಳ ಸಭೆ ಕರೆದಾಗ, ಪಟ್ಟಣದ 5 ಲೈನ್ಮನ್ಗಳು ಮಾಹಿತಿ ನೀಡದೇ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದರು. ಅವರಿಗೆ ನೋಟಿಸ್ ನೀಡುವಂತೆ ತಿಳಿಸಿದ್ದಾರೆ. ಆ ಕುರಿತು ಕ್ರಮ ಕೈಗೊಳ್ಳುತ್ತೇವೆ. ಪಟ್ಟಣದ ಕುಡಿವ ನೀರಿನ ಯೋಜನೆಯ ವಿದ್ಯುತ್ ಲೈನ್ಗೆ ಅಕ್ರಮ ಸಂಪರ್ಕಗಳನ್ನು ತೆರವು ಮಾಡುತ್ತಿದ್ದೇವೆ ಎಂದು ಜೆಸ್ಕಾಂ ಎಇಇ ಕೇದಾರನಾಥ ತಿಳಿಸಿದರು.
ಶಾಸಕರಿಗೆ ಪಟ್ಟಣದ ಕುಡಿವ ನೀರಿನ ಯೋಜನೆಯ ವಿದ್ಯುತ್ ಲೈನ್ಗೆ ಜೆಸ್ಕಾಂನಿಂದಲೇ ಅಕ್ರಮ ಸಂಪರ್ಕದಿಂದ ಪಟ್ಟಣಕ್ಕೆ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಮಾಹಿತಿ ನೀಡಿದ್ದರಿಂದ ಅಧಿಕಾರಿಗಳ ಸಭೆ ಕರೆದು ಕ್ರಮಕ್ಕೆ ಸೂಚಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಹೇಳಿದರು.