ಗ್ರಾಮಸ್ಥರ ನಿದ್ದೆಗೆಡಿಸಿರುವ ಅಕ್ರಮ ಮದ್ಯ ಮಾರಾಟ

KannadaprabhaNewsNetwork |  
Published : Dec 16, 2024, 12:46 AM IST
ಗ್ರಾಮಗಳಲ್ಲಿ ಎಗ್ಗಿದೆ ನಡೆಯುತ್ತಿದೆ ಮದ್ಯ ಮಾರಾಟ | Kannada Prabha

ಸಾರಾಂಶ

ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವ ಪರಿಣಾಮ ಗ್ರಾಮಗಳಲ್ಲಿರುವ ಬಡ ಕೂಲಿ ಕಾರ್ಮಿಕರು ಬೀದಿಗೆ ಬರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ

ಎಚ್.ಎನ್. ನಾಗರಾಜು

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವ ಪರಿಣಾಮ ಗ್ರಾಮಗಳಲ್ಲಿರುವ ಬಡ ಕೂಲಿ ಕಾರ್ಮಿಕರು ಬೀದಿಗೆ ಬರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಕೊರಟಗೆರೆ ತಾಲೂಕಿನಲ್ಲಿ ಒಟ್ಟು ೨೬ ಮದ್ಯದ ಅಂಗಡಿಗಳು ಇದ್ದು, ಮೂರು ವರ್ಷದಲ್ಲಿ ಒಟ್ಟು ೫೩೮ ಪ್ರರಕಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಕೇವಲ ೯೧ ಪ್ರಕರಣಗಳು ಮಾತ್ರ ಮದ್ಯದ ಅಂಗಡಿಗಳ ಮೇಲೆ ದಾಖಲಿಸಿದ್ದಾರೆ, ಉಳಿದ ೪೪೭ ಪ್ರಕರಣ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ೨೦೨೪ ಸಾಲಿನಲ್ಲಿ ವೈನ್ಸ್‌ಗಳ ಮೇಲೆ ಕೇವಲ ೫೧ ಹಾಗೂ ಗ್ರಾಮೀಣ ಭಾಗದ ಅಂಗಡಿಗಳ ಮೇಲೆ ೨೦೮ ಕೇಸ್‌ಗಳು ದಾಖಲಾಗಿವೆ. ಪ್ರತಿನಿತ್ಯ ಸರಬರಾಜು ಮಾಡುವ ಮದ್ಯದ ಅಂಗಡಿಗಿಂತ ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವವರ ಮೇಲೆ ಪ್ರಕರಣಗಳು ಜಾಸ್ತಿ ಆಗಿದೆ.

ಹೊರ ರಾಜ್ಯದಿಂದ ಅಕ್ರಮ ಸೇಂದಿ ಪೂರೈಕೆಪಕ್ಕದ ಆಂಧ್ರ ಪ್ರದೇಶದಿಂದ ಪ್ರತಿದಿನ ನೂರಾರು ಲೀಟರ್‌ನಷ್ಟು ಅಕ್ರಮವಾಗಿ ಸೇಂದಿ ಸರಬರಾಜು ಆಗುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕೇವಲ ೪ ಪ್ರಕರಣವನ್ನು ದಾಖಲಿಸಿರುವುದು ಇವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿನಿತ್ಯ ಅಕ್ರಮವಾಗಿ ಸೇಂದಿ ತಂದು ಹೆಚ್ಚು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದು ಅಬಕಾರಿ ಅಧಿಕಾರಿಗಳ ಗಮನಕ್ಕೆ ಬಂದರೂ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಯುವಕರಿಗೆ ಹೆಣ್ಣು ಕೊಡುತ್ತಿಲ್ಲ

ಗ್ರಾಮೀಣ ಭಾಗದಲ್ಲಿ ಮನೆಗಳು ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಪ್ರತಿನಿತ್ಯ ಅಕ್ರಮ ಮದ್ಯ ಮಾರಾಟದಿಂದ ಚಿಕ್ಕ ವಯಸ್ಸಿನ ಹುಡುಗರು ಕುಡಿತದ ಚಟಕ್ಕೆ ಬಿದ್ದು, ಬೆಳಿಗ್ಗೆ ೬ ಗಂಟೆಗೆ ಪ್ರತಿ ಗ್ರಾಮದ ಕೆಲವು ಅಂಗಡಿಗಳಲ್ಲಿ ಸಿಗುವ ಮದ್ಯ ಕುಡಿದು ಕೆಲಸಕ್ಕೆ ಹೋಗದೆ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಕುಡಿತಕ್ಕೆ ದಾಸರಾಗಿರುವ ಕಾರಣ ಹೆಣ್ಣು ನೀಡಲು ನಿರಾಕರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಮಾತನಾಡಿದ ಗ್ರಾಮಸ್ಥರೊಬ್ಬರು. ಗ್ರಾಮಗಳಲ್ಲಿ ಬೇಕಾಬಿಟ್ಟಿಯಾಗಿ ಮದ್ಯ ಮಾರಾಟವಾಗುತ್ತಿದೆ. ಇದರಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಯುವಕರು ಮದ್ಯದ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಗಾರರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಗ್ರಾಮಗಳಲ್ಲಿ ಹೈನುಗಾರಿಕೆ, ವ್ಯವಸಾಯ ಮಾಡಲು ಸಹ ಕೂಲಿ ಆಳುಗಳ ಸಹ ಸಿಗದೆ ಈಗಾಗಲೇ ಸಾಕಷ್ಟು ರೈತರು ಹೊಲ ಗದ್ದೆಗಳನ್ನು ಬೀಡು ಬಿಟ್ಟಿದ್ದಾರೆ. ಇನ್ನೂ ಕೆಲವರು ಕೈ ಸಿಕ್ಕ ಬೆಲೆಗೆ ಜಮೀನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಗ್ರಾಮೀಣರ ಜೀವನ ದಿನದಿಂದ ದಿನಕ್ಕೆ ಹಾಳಾಗುತ್ತಿದೆ.

ಕೋಟ್ ಬಳಸಿ;-ಕಾದಿಲಾಪುರ ಗ್ರಾಮದಲ್ಲಿ ಎರಡು ಅಂಗಡಿಗಳಲ್ಲಿ ಪ್ರತಿದಿನ ಬೆಳಿಗ್ಗೆ ೬ ಗಂಟೆಗೆ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಹುಡುಗರು ಕುಡಿತದ ಚಟಕ್ಕೆ ಬಿದ್ದಿದ್ದಾರೆ. ಕುಡಿತದಿಂದ ಎಷ್ಟೂ ಸಂಸಾರಗಳು ಬೀದಿಗೆ ಬರುತ್ತಿವೆ. ಎಷ್ಟು ಸಾರಿ ಹೇಳಿದರೂ ಇಲ್ಲಿ ಮದ್ಯ ಮಾರಾಟ ಮಾಡುವುದು ನಿಲ್ಲಿಸಿಲ್ಲ. ಇದು ಹೀಗೆ ಮುಂದುವರೆದರೆ ಮಹಿಳೆಯರೇ ತಕ್ಕ ಬುದ್ದಿ ಕಲಿಸಬೇಕಾಗುತ್ತದೆ. - ಗೀತಾ ಕಾದಿಲಾಪುರ ಗ್ರಾಮದ ಮಹಿಳೆ.ನಮ್ಮ ತಿಮ್ಮನಹಳ್ಳಿ ಗ್ರಾಮದಲ್ಲಿ ಎರಡು ಚಿಲ್ಲರೆ ಅಂಗಡಿಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆಯಿಂದ ರಾತ್ರಿ ೯ ಗಂಟೆವರೆಗೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಅಧಿಕಾರಿಗಳಿಗೆ ತಿಳಿಸಿದರೆ ಬಂದು ಒಂದು ಅಂಗಡಿಗೆ ಬೇಟಿ ನೀಡಿ ಹೋಗಿದ್ದಾರೆ ಇನ್ನೊಂದು ಅಂಗಡಿಯಲ್ಲಿ ಮತ್ತೆ ಮದ್ಯ ಮಾರಾಟ ಮಾಡುತ್ತಿದ್ದಾರೆ, ತಕ್ಷಣ ನಮ್ಮ ಗ್ರಾಮದಲ್ಲಿ ಮದ್ಯ ಮಾರಾಟ ನಿಲ್ಲಿಸಬೇಕು

-ಕೆಂಪಣ್ಣ. ಗ್ರಾಮಸ್ಥ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಕೆ: ಮುನಿಯಪ್ಪ
ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ