ಕೊಪ್ಪಳ:
ತಾಲೂಕಿನ ಹಿರೇಸಿಂದೋಗಿ ಬಳಿ ಹಿರೇಹಳ್ಳದ ಉದ್ದಕ್ಕೂ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕೊನೆಗೂ ಬ್ರೇಕ್ ಬಿದ್ದಿದೆ. 20ಕ್ಕೂ ಹೆಚ್ಚು ಮರಳು ಫಿಲ್ಟರ್ ಮಾಡುವ ಯಂತ್ರಗಳನ್ನು ಅಧಿಕಾರಿಗಳು ಪುಡಿಪುಡಿ ಮಾಡಿದ್ದಾರೆ.ಕಳೆದೆರಡು ವರ್ಷಗಳಿಂದ ಇಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿತ್ತು. ರಾಜಕೀಯ ನಾಯಕರ ಬೆಂಬಲ ಮತ್ತು ಅಧಿಕಾರಿಗಳ ಉದಾಸೀನದಿಂದ ಎಷ್ಟೇ ದೂರುಗಳು ಬಂದರೂ ಕ್ರಮವಾಗಿರಲಿಲ್ಲ. ಆದರೆ, ಈಗ ಏಕಾಏಕಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ, ಮರಳು ಫಿಲ್ಟರ್ ಮಾಡುವ ಯಂತ್ರಗಳನ್ನೇ ಪುಡಿ ಮಾಡಿದ್ದಾರೆ.ಅದೊಂದು ವೀಡಿಯೋ:ಮರಳು ದಂಧೆಯನ್ನು ಮಾಡುವುದು ಅಲ್ಲದೆ ಪುಷ್ಪಚಿತ್ರದ ಆಡಿಯೋ ಹಾಕಿ ಹಿರೇಹಳ್ಳದಲ್ಲಿ ಮರಳು ಫೀಲ್ಟರ್ ಮಾಡುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಡಳಿತ ವ್ಯವಸ್ಥೆಗ ಸವಾಲು ಹಾಕಲಾಗಿತ್ತು. ನಮ್ಮನ್ಯಾರು ಏನು ಮಾಡಿಕೊಳ್ಳಲು ಆಗುವುದಿಲ್ಲ ಎನ್ನುವ ಅರ್ಥದಲ್ಲಿನ ವೀಡಿಯೋ ವೈರಲ್ ಆಗಿತ್ತು. ಇದರಿಂದ ರೊಚ್ಚಿಗೆದ್ದ ಅಧಿಕಾರಿಗಳ ತಂಡ ಹಿರೇಸಿಂದೋಗಿ ಹಳ್ಳಕ್ಕೆ ದಾಳಿ ಮಾಡಿ, ಹಳ್ಳದಲ್ಲಿ ಮರಳು ದಂಧೆ ಮಾಡುತ್ತಿದ್ದವರ ಜಾಲಾಡಿದ್ದಾರೆ. ಅಚ್ಚರಿ ಎಂದರೇ ಅಧಿಕಾರಿಗಳ ತಂಡ ದಾಳಿ ಮಾಡುತ್ತಿದ್ದಂತೆ ಮರಳು ದಂಧೆಯಲ್ಲಿ ತೊಡೆಗಿದ್ದವರು ನಾಪತ್ತೆಯಾಗಿದ್ದರು. ಆಗ ಅಲ್ಲಿದ್ದ ಮರಳು ಫಿಲ್ಟರ್ ಮಾಡುವ 20ಕ್ಕೂ ಹೆಚ್ಚು ಯಂತ್ರಗಳನ್ನು ನಾಶ ಮಾಡಿದ್ದಾರೆ.
ಎಫ್ಐಆರ್ ದಾಖಲಾಗಿಲ್ಲ:ಮರಳು ದಂಧೆಗೆ ಬ್ರೇಕ್ ಹಾಕಲು ದಾಳಿ ಮಾಡಿ, ಮರಳು ಫಿಲ್ಟರ್ ಮಾಡುವ ಯಂತ್ರಗಳನ್ನು ನಾಶಪಡಿಸಿರುವ ಅಧಿಕಾರಿಗಳ ತಂಡ ಈ ವರೆಗೂ ಯಾರ ವಿರುದ್ಧವೂ ಎಫ್ಐಆರ್ ದಾಖಲಿಸಿಲ್ಲ. ಜತೆಗೆ ಮರಳು ಫಿಲ್ಟರ್ ಮಾಡುವ ಯಂತ್ರಗಳು ನಮ್ಮವೇ ಎಂದು ಯಾರು ಸಹ ಈ ವರೆಗೂ ಬಂದಿಲ್ಲ. ಯಾರಾದರೂ ಬರುತ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕಾಯುತ್ತಿದ್ದಾರೆ.
ಲೋಕಾಯುಕ್ತಕ್ಕೆ ದೂರು:ಅಕ್ರಮ ಮರಳು ದಂಧೆ ತಡೆಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಯಾರು ಕ್ರಮಕೈಗೊಳ್ಳುತ್ತಿಲ್ಲ ಎಂದು ದಾಖಲೆ, ವೀಡಿಯೋ ಹಾಗೂ ಫೋಟೋ ಸಮೇತ ಲೋಕಾಯುಕ್ತರಿಗೆ ಅಹವಾಲು ಸ್ವೀಕಾರ ಸಭೆಯಲ್ಲಿ ದೂರು ನೀಡಲಾಗಿತ್ತು. ಈ ದೂರು ಆಧರಿಸಿ, ಮರುಳು ದಂಧೆಗೆ ಕಡಿವಾಣ ಹಾಕುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.ಹಿರೇಸಿಂದೋಗಿ ಹಳ್ಳದಲ್ಲಿ ಅಕ್ರಮವಾಗಿ ಮರಳು ದಂಧೆ ಮಾಡುತ್ತಿರುವುದಕ್ಕೆ ಬ್ರೇಕ್ ಹಾಕಲಾಗಿದೆ. 20ಕ್ಕೂ ಹೆಚ್ಚು ಮರಳು ಫಿಲ್ಟರ್ ಯಂತ್ರವನ್ನು ನಾಶಪಡಿಸಲಾಗಿದೆ. ಈ ವರೆಗೆ ಫಿಲ್ಟರ್ ನಮ್ಮದು ಎಂದು ಬರದ ಹಿನ್ನೆಲೆ ಯಾರ ವಿರುದ್ಧವೂ ಎಫ್ಐಆರ್ ದಾಖಲಿಸಿಲ್ಲ.
ಸನ್ನಿತ್ ಅಧಿಕಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಪ್ಪಳ