ಕನ್ನಡಪ್ರಭ ವಾರ್ತೆ ಚೇಳೂರು
ತಾಲೂಕಿನ ಚಿಲಕಲನೇರ್ಪು ಹೋಬಳಿ ಕೇಂದ್ರವಾಗಿದ್ದು ಇಲ್ಲಿ ನಾಡಕಚೇರಿ ಅಧಿಕಾರಿಗಳು ಹಾಗೂ ಗ್ರಾಂ ಪಂಚಾಯತಿ ಅಧಿಕಾರಿಗಳು ಇದ್ದಾರೆ. ಆದರೂ ಗ್ರಾಮದಿಂದ ಪಾಳ್ಯಕೆರೆ ಹೋಗುವ ಮುಖ್ಯ ರಸ್ತೆಯ ಸನಿಹದಲ್ಲೇ ಇರುವ ನಲ್ಲಗುಟ್ಟ ಗುಡ್ಡ ಕೆಲವು ಭೂಮಿ ಲೂಟಿಕೋರರು ಹಾಗೂ ಮಣ್ಣು ದಂದೆಕೋರರ ಪಾಲಾಗುತ್ತಿದೆ.
ಭೂ ಮಾಫಿಯಾ ಚಟುವಟಿಕೆಕಳೆದ ಒಂದು ತಿಂಗಳಿನಿಂದ ಗುಡ್ಡವನ್ನು ಕೊರೆದು ದಾರಿ ನಿರ್ಮಿಸಿ, ಸುಮಾರು ಎರಡು ಎಕರೆ ನೆಲಸಮ ಮಾಡಿ ಭೂಮಿ ಕಬಳಿಕೆ ಮಾಡಿದ್ದಾರೆ. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ಹಿಂದೆ ಕೂಡ ಚಿಲಕಲನೇರ್ಪು ಗ್ರಾಮದಲ್ಲಿ ನಲ್ಲಗುಟ್ಟ ಗುಡ್ಡವನ್ನು ಹಿಟಾಚಿ ಹಾಗೂ ಟಿಪ್ಪರ್ ಮೂಲಕ ಅಕ್ರಮವಾಗಿ ಮಣ್ಣು ಲೂಟಿ ಮಾಡಿ ಮುಖ್ಯ ರಸ್ತೆಗೆ ಹಾಕಲಾಗುತ್ತಿತ್ತು. ಈಗ ಮತ್ತೆ ಏಕಾಏಕಿ ಭೂ ಮಾಫಿಯಾ ಮಾಲೀಕರ ಕಣ್ಣು ಗುಡ್ಡದ ಮೇಲೆ ಬಿದ್ದಿದೆ.
ಚಿಲಕಲನೇರ್ಪು ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಅಕ್ರಮವಾಗಿ ನಲ್ಲಗುಟ್ಟಾ ಗುಡ್ಡ ಕೊರೆದು ಕಬಲಿಕೆಗೆ ಮುಂದಾಗಿದ್ದು ಈ ಕುರಿತು ಚಿಲಕಲನರ್ಪು ನಾಡಕಛೇರಿ ಆರ್ ಐ ರವರಿಂದ ಸಂಪೂರ್ಣ ಮಾಹಿತಿ ಪಡೆದು ಒತ್ತುವರಿದಾರರ ವಿರುದ್ಧ ಭೂ ಕಬಳಿಕೆ ಕೇಸ್ ದಾಖಲಿಸಲಾಗುವುದು.
- ಶ್ರೀನಿವಾಸಲು ನಾಯ್ಡು, ತಹಸೀಲ್ದಾರ್. ಚೇಳೂರು.