ವಿಶೇಷ ವರದಿ
ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ‘ಆಪರೇಷನ್ ಫುಟ್ಪಾತ್’ ಕುಶಾಲನಗರ ಪಟ್ಟಣದಲ್ಲಿ ಕೂಡ ಪಾದಚಾರಿ ರಸ್ತೆಗಳು ಒತ್ತುವರಿ ಬಗ್ಗೆ ಪಾದಚಾರಿಗಳಲ್ಲಿ ತಮ್ಮ ಹಕ್ಕಿನ ಬಗ್ಗೆ ಅರಿವು ಮೂಡುತ್ತಿದೆ.
ಅತಿ ಶೀಘ್ರ ಬೆಳವಣಿಗೆ ಕಂಡ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸಾಗುತ್ತಿದ್ದು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಾಗುತ್ತವೆ. ಈ ನಡುವೆ ದೈನಂದಿನ ಕೆಲಸ ಕಾರ್ಯಗಳಿಗಾಗಿ ಓಡಾಡುವ ಪಾದಚಾರಿಗಳ ಸಂಖ್ಯೆಯು ಕೂಡ ಅಧಿಕಗೊಂಡಿದೆ.ಕುಶಾಲನಗರ ಪುರಸಭೆ ಇದನ್ನು ಮನಗಂಡು ಕಳೆದ ಕೆಲವು ವರ್ಷಗಳ ಹಿಂದೆ ಬೈಚನಹಳ್ಳಿ ಬಳಿಯಿಂದ ಗಣಪತಿ ದೇವಾಲಯ ಮೂಲಕ ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನಕ ಅಂದಾಜು ಒಂದು ಕಿಲೋಮೀಟರ್ ಉದ್ದಕ್ಕೆ 25 ಲಕ್ಷ ರು. ವೆಚ್ಚದಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಾಣ ಮಾಡಿತ್ತು. ಇಂಟರ್ಲಾಕ್ ಅಳವಡಿಸಿ ಕಬ್ಬಿಣದ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿದೆ.
ಕುಶಾಲನಗರ ಹೆದ್ದಾರಿಯ ಐ ಬಿ ಸಂಪರ್ಕ ರಸ್ತೆಯ ಸಮೀಪ ಸಂಚಾರಿ ಪೊಲೀಸ್ ವೃತ್ತದ ಬಳಿ ಕೆಲವರು ಪಾದಚಾರಿ ರಸ್ತೆಗೆ ನಿರ್ಮಿಸಿದ್ದ ಕಬ್ಬಿಣದ ಬ್ಯಾರಿಕೇಡ್ ಗಳನ್ನು ಅಕ್ರಮವಾಗಿ ತೆರವುಗೊಳಿಸಿ ತಮ್ಮ ವಾಹನಗಳ ಪಾರ್ಕಿಂಗ್ ಕೇಂದ್ರವನ್ನಾಗಿಸಿದ್ದಾರೆ. ಇಲ್ಲಿ ದಿನನಿತ್ಯ ಓಡಾಡುವ ನೂರಾರು ಪಾದಚಾರಿಗಳು ಹೆದ್ದಾರಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನಡೆದಾಡಬೇಕಾಗಿದೆ.
ಉತ್ತರ ಭಾರತದ ಹಲವರು ಪಾದಚಾರಿ ಮಾರ್ಗವನ್ನು ತಮ್ಮ ಗೋಲ್ ಗೊಪ್ಪ ಕೇಂದ್ರಗಳನ್ನಾಗಿಸಿದ್ದಾರೆ.
ಮುಂದೆ ಪಾದಚಾರಿ ಪಥದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಮತ್ತು ಸೈಕಲ್ ರಿಪೇರಿ. ಸರ್ಕಾರಿ ಶಾಲೆಯ ಆವರಣದ ಕೆಳಭಾಗದಲ್ಲಿ ಪಾದಚಾರಿಗಳಿಗೆ ಚಪ್ಪಲಿ ಸೇವೆ ಉಚಿತ ಅನ್ನುವ ಸ್ಥಿತಿ ಖಚಿತ ಎನ್ನುವಂತಾಗಿದೆ.
ಕೂಡಲೇ ಕುಶಾಲನಗರ ಪಟ್ಟಣದಲ್ಲಿ ಪಾದಚಾರಿ ಗಳಿಗೆ ಮೀಸಲಾದ ರಸ್ತೆಯ ಒತ್ತುವರಿ ತೆರವುಗೊಳಿಸಿ ನಿರ್ವಹಣೆ ಮಾಡಿ ಸುರಕ್ಷಿತ ಪಾದಾಚಾರಿ ಮಾರ್ಗ ಅಭಿಯಾನ ಮೂಲಕ ಮಕ್ಕಳು ವೃದ್ದರು ಸೇರಿದಂತೆ ನಾಗರಿಕರಿಗೆ ಸುಲಲಿತವಾಗಿ ಓಡಾಡಲು ಪುರಸಭೆ ಅಧಿಕಾರಿಗಳು ಕೂಡಲೇ ಆಪರೇಷನ್ ಫುಟ್ ಪಾತ್ ಮೂಲಕ ಪಾದಚಾರಿಗಳಿಗೆ ನಡೆದಾಡಲು ಅವಕಾಶ ಕಲ್ಪಿಸಬೇಕಾಗಿದೆ ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದರು.
ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ವ್ಯಾಪಾರ ವಹಿವಾಟು ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮತದಾರ ಪಟ್ಟಿ ವಿಶೇಷ ಪರಿಷ್ಕರಣೆಯ ಕಾರ್ಯ ನಡೆಯುತ್ತಿದೆ. ಸಿಬ್ಬಂದಿ ಕೊರತೆ ಇದೆ. ಆದಷ್ಟು ಶೀಘ್ರದಲ್ಲಿ ಪಟ್ಟಣದಲ್ಲಿ ಪಾದಚಾರಿ ಮಾರ್ಗ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುವುದು.
। ಟಿ ಎಸ್ ಗಿರೀಶ್ ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ