- 3 ಜಿಲ್ಲೆಯಲ್ಲಿ ಈಗಾಗಲೇ ಗಣತಿ ಕಾರ್ಯ ಆರಂಭ । ಇನ್ನು ರಾಜ್ಯಾದ್ಯಂತ ವಿಸ್ತರಣೆ
- 2 ತಿಂಗಳಲ್ಲಿ ಗಣತಿ ಪೂರ್ಣಗೊಳಿಸಿ ವರದಿ । ಪೊಲೀಸರಿಗೆ ಸಚಿವ ಪರಂ ಸೂಚನೆ--
- ಹಾಸನ, ಕೊಡಗು, ಚಿಕ್ಕಮಗಳೂರು ಕಾಫಿ ತೋಟದಲ್ಲಿ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು- ಬೆಂಗಳೂರು ಹಾಗೂ ಸುತ್ತಮುತ್ತ ಕೂಡ ಬಾಂಗ್ಲನ್ನರು ಸೇರಿ 3 ದೇಶಗಳ ವಲಸಿಗರು ಹೆಚ್ಚು
- ಈ ಹಿಂದೆ 200 ಬಾಂಗ್ಲನ್ನರು ಗಡೀಪಾರು, ಇನ್ನೂ ಹಲವರು ಇಲ್ಲೇ ಅಕ್ರಮವಾಗಿ ವಾಸ- ಅಪರಾಧ ಎಸಗಿ ಇಲ್ಲೇ ಉಳಿಯುವ ಯತ್ನ, ಈ ಬಗ್ಗೆ ವರದಿ ಬಂದ ನಂತರ ಮುಂದಿನ ನಡೆ
-- ಕನ್ನಡಪ್ರಭ ವಾರ್ತೆ ಬೆಂಗಳೂರುಅಕ್ರಮ ಬಾಂಗ್ಲಾದೇಶಿ ವಲಸಿಗರ ಮೇಲೆ ರಾಜ್ಯ ಸರ್ಕಾರ ಮತ್ತೊಂದು ಪ್ರಹಾರಕ್ಕೆ ಸಜ್ಜಾಗಿದೆ. ‘ಅಕ್ರಮ ಬಾಂಗ್ಲಾ ವಲಸಿಗರು ಸೇರಿದಂತೆ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಗಣತಿ ನಡೆಸಿ ತ್ವರಿತವಾಗಿ ವರದಿ ಸಲ್ಲಿಸಿ’ ಎಂದು ಪೊಲೀಸರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.
ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿ ಪ್ರಜೆಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಬಹಿರಂಗಪಡಿಸಲಾಗುತ್ತದೆ ಎಂದರು.ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಕಾರ್ಮಿಕರಾಗಿದ್ದಾರೆ ಎಂಬ ಮಾಹಿತಿ ಇದೆ. ಅದೇ ರೀತಿ ಬೆಂಗಳೂರಿನ ಆನೇಕಲ್ ಸೇರಿ ಕೆಲ ಪ್ರದೇಶಗಳಲ್ಲಿ ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೆ. ಇನ್ನು ಡ್ರಗ್ಸ್ ದಂಧೆಯಲ್ಲಿ ಎರಡ್ಮೂರು ದೇಶದ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿರತರಾಗಿದ್ದು, ಬೆಂಗಳೂರಿನ ಬಾಣಸವಾಡಿ ಹಾಗೂ ಹೆಣ್ಣೂರು ಭಾಗದಲ್ಲಿ ಆ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.
ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಪಾಕಿಸ್ತಾನ ಹೀಗೆ ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗುರುತಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿಯರ ಗಣತಿ ನಡೆಸುವಂತೆ ಸೂಚಿಸಲಾಗಿದ್ದು, ಎರಡು ತಿಂಗಳಲ್ಲಿ ಈ ಗಣತಿ ಪೂರ್ಣಗೊಳ್ಳಬಹುದು. ಆದರೆ ಶೀಘ್ರ ವರದಿಗೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ ಎಂದು ತಿಳಿಸಿದರು.ಈಗಾಗಲೇ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಕಾಫಿ ತೋಟಗಳಲ್ಲಿರುವ ಬಾಂಗ್ಲಾ ಪ್ರಜೆಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ. ಮುಂದಿನ ಹಂತಗಳಲ್ಲಿ ರಾಜ್ಯವ್ಯಾಪಿ ವಿದೇಶಿಯರ ಗಣತಿ ಶುರುವಾಗಲಿದೆ ಎಂದು ನುಡಿದರು.
ಡ್ರಗ್ಸ್ ಸೇರಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಸ್ವದೇಶಕ್ಕೆ ನಿರಂತರವಾಗಿ ಗಡಿಪಾರು ಮಾಡಲಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ 200 ವಿದೇಶಿ ಪ್ರಜೆಗಳು ಬಂಧಿಸಿ ಅವರ ದೇಶಕ್ಕೆ ಕಳುಹಿಸಲಾಗಿದೆ. ಆದರೆ ಕೆಲವರು ಇಲ್ಲೇ ಉಳಿದುಕೊಳ್ಳುವ ಸಲುವಾಗಿ ದುರುದ್ದೇಶ ಪೂರ್ವಕವಾಗಿಯೇ ಅಪರಾಧ ಕೃತ್ಯ ಎಸಗುತ್ತಿದ್ದಾರೆ ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದರು.ವಿದೇಶಿ ಪ್ರಜೆಗಳ ಮೇಲೆ ಕಣ್ಗಾವಲು ಬಿಗಿಗೊಳಿಸುವಂತೆ ಸಹ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿದೇಶಿಯರ ಎಷ್ಟು ಜನರಿದ್ದಾರೆ ಎಂಬುದು ಖಚಿತವಾದ ಕೂಡಲೇ ಮತ್ತಷ್ಟು ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.