ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲೆಯ ಒಟ್ಟಾರೆ ಮಳೆ ಪ್ರಮಾಣದ ಗಮನಿಸಿದರೆ, ಉತ್ತಮ ಮಳೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಬಯಲು ಸೀಮೆಯ ತಾಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಕೊರತೆ ಎದುರಿಸುತ್ತಿದೆ. ಕೊಳವೆ ಬಾವಿಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿಯುತ್ತಿದ್ದು, ರೈತರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ನೀರಿನ ಪ್ರಮಾಣ ಕುಸಿತ । ಆರು ತಾಲೂಕುಗಳಲ್ಲಿ ನಿರೀಕ್ಷೆಗೂ ಮೀರಿದ ಮಳೆ । ಮೂರಲ್ಲಿ ಬರದ ಪರಿಸ್ಥಿತಿ। ಕುಡಿಯುವ ನೀರಿಗೂ ಪರದಾಟ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯ ಒಟ್ಟಾರೆ ಮಳೆ ಪ್ರಮಾಣದ ಗಮನಿಸಿದರೆ, ಉತ್ತಮ ಮಳೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಬಯಲು ಸೀಮೆಯ ತಾಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಕೊರತೆ ಎದುರಿಸುತ್ತಿದೆ. ಕೊಳವೆ ಬಾವಿಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿಯುತ್ತಿದ್ದು, ರೈತರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಸಾಮಾನ್ಯವಾಗಿ ಚಿಕ್ಕಮಗಳೂರು ಜಿಲ್ಲೆಯನ್ನು ಮಲೆನಾಡು ಜಿಲ್ಲೆ ಎಂದು ಪರಿಗಣಿಸಲಾದರೂ, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಜಿಲ್ಲೆ ಭೌಗೋಳಿಕವಾಗಿ ಅತ್ಯಂತ ವಿಭಿನ್ನವಾಗಿದೆ.
ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಭಾಗಶಃ ಚಿಕ್ಕಮಗಳೂರು ತಾಲೂಕುಗಳು ದಟ್ಟಾರಣ್ಯದಿಂದ ತಪ್ಪಲಿ ನಲ್ಲಿ ಕಂಡು ಬಂದರೆ, ತರೀಕೆರೆ, ಕಡೂರು, ಅಜ್ಜಂಪುರ ತಾಲೂಕುಗಳು ಬಯಲು ಸೀಮೆಯ ತಾಲೂಕುಗಳಾಗಿವೆ.
ಆರು ತಾಲೂಕುಗಳಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾದರೆ, ಮೂರು ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಉಂಟಾಗಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇರಲಿದೆ. ಇದೀಗ ಆದೇ ರೀತಿ ಪರಿಸ್ಥಿತಿ ಪೂರ್ವ ಮುಂಗಾರಿನ ಅವಧಿಯಲ್ಲಿ ಉಂಟಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.19ರಷ್ಟು ಹೆಚ್ಚಿನ ಮಳೆ ಮಾರ್ಚ್ 1 ರಿಂದ ಏ.24ರ ಅವಧಿಯಲ್ಲಿ ಆಗಿದೆ ಎಂದು ಅಂಕಿ ಅಂಶಗಳು ತಿಳಿಸಿದರೂ, ಚಿಕ್ಕಮಗಳೂರು, ಮೂಡಿಗೆರೆ ಸೇರಿದಂತೆ ಕೊಡರೂ, ಅಜ್ಜಂಪುರ ತಾಲೂಕಿನಲ್ಲಿ ಮಳೆ ಕೊರತೆ ಉಂಟಾಗಿದೆ.
25 ದಿನದಲ್ಲಿ ಶೇ.20 ರಷ್ಟು ಮಳೆ ಕೊರತೆ
ಮಾರ್ಚ್ನಿಂದ ಮೇ ಅಂತ್ಯದ ವರೆಗೆ ಪೂರ್ವ ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಬೇಸಿಗೆ ಆಗಿರುವುದರಿಂದ ಸಾಮಾನ್ಯ ಮಳೆ ಪ್ರಮಾಣವೇ ಕಡಿಮೆ ಆದರೂ, ಮಾರ್ಚ್ ತಿಂಗಳಿನಲ್ಲಿ ಇಡೀ ಜಿಲ್ಲೆಯಲ್ಲಿ ಶೇ.125 ರಷ್ಟು ಹೆಚ್ಚಿನ ಮಳೆ ಯಾಗಿದೆ. ಅಂದರೆ, ವಾಡಿಕೆ ಪ್ರಕಾರ 14.06 ಮಿ.ಮೀ ನಷ್ಟು ಮಳೆ ನಿರೀಕ್ಷೆ ಮಾಡಲಾಗುತ್ತದೆ, ಆದರೆ, ಈ ಬಾರಿ, 32.9 ಮಿ.ಮೀ ನಷ್ಟು ಮಳೆಯಾಗಿದೆ.
ಏಪ್ರಿಲ್ 1 ರಿಂದ 24ರ ಅವಧಿಯಲ್ಲಿ ವಾಡಿಕೆ ಪ್ರಕಾರ 39.6 ಮಿ.ಮೀ ಮಳೆ ನಿರೀಕ್ಷೆ ಇರಲಿದ್ದು, ಕೇವಲ 31.8 ಮಿ.ಮೀ ನಷ್ಟು ಮಾತ್ರ ಮಳೆ ಸುರಿದಿದೆ. ಹೀಗಾಗಿ, ಶೇ.20 ರಷ್ಟು ಮಳೆ ಕೊರತೆ ಉಂಟಾಗಿದೆ.
ಏಪ್ರಿಲ್ನಲ್ಲಿ ಮಲೆನಾಡು ತಾಲೂಕಿನಲ್ಲೂ ಮಳೆ ಇಲ್ಲ
ಚಿಕ್ಕಮಗಳೂರು ತಾಲೂಕಿನಲ್ಲೂ ಶೇ.50 ರಷ್ಟು ಮಳೆ ಕೊರತೆ ಆಗಿದೆ. ಅದೇ ರೀತಿ ಕಡೂರಿನಲ್ಲಿ ಶೇ.54 ರಷ್ಟು, ಮೂಡಿಗೆರೆ ಯಲ್ಲಿ 52 ರಷ್ಟು, ಶೃಂಗೇರಿಯಲ್ಲಿ ಶೇ.26 ರಷ್ಟು ಕಳಸದಲ್ಲಿ ಶೇ.5 ರಷ್ಟು, ಅಜ್ಜಂಪುರದಲ್ಲಿ ಶೇ.37 ರಷ್ಟು ಹಾಗೂ ತರಿಕೆರೆಯಲ್ಲಿ ಶೇ.26 ರಷ್ಟು ಮಳೆ ಕೊರತೆ ಉಂಟಾಗಿದೆ.
ಎನ್.ಆರ್.ಪುರ ಮತ್ತು ಕೊಪ್ಪದಲ್ಲಿ ಮಾತ್ರ ಸೋಮವಾರದ ಸ್ವಲ್ಪ ಹೆಚ್ಚಿನ ಪ್ರಮಾಣ ಮಳೆದ ಹಿನ್ನೆಲೆಯಲ್ಲಿ ಕೊರತೆ ನೀಗಿ, ವಾಡಿಕೆಗಿಂತ ಹೆಚ್ಚಿನ ಪ್ರಮಾಣ ಮಳೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
---ಬಾಕ್ಸ್---
ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿತಬಿಸಿಲ ಪ್ರಮಾಣ ಹೆಚ್ಚಾಗಿರುವುದರಿಂದ ಅಡಕೆ, ತೆಂಗು, ಕಾಫಿ ಸೇರಿದಂತೆ ಮೊದಲಾದ ತೋಟಗಾರಿಕೆ ಮತ್ತು ದೀರ್ಘಾವಧಿ ಬೆಳೆಗಳಿಗೆ ಅತ್ಯವಿರುವಷ್ಟು ನೀರು ಪೂರೈಕೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ. ಈ ನಡುವೆ ವಿದ್ಯುತ್ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ರೈತರು ಪ್ರತಿ ದಿನ ಮುಗಿಲು ನೋಡಿ ಮಳೆ ನಿರೀಕ್ಷೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ತಿಂಗಳು ಬೇಸಿಗೆ ಕಳೆದು ಮಳೆಗಾಲ ಆರಂಭವಾದರೆ ಸಾಕು ಎನ್ನುತ್ತಿದ್ದಾರೆ. -- ಬಾಕ್ಸ್--
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.