- ದೊಡ್ಡಪೇಟೆ ವಿರಕ್ತ ಮಠದಲ್ಲಿ ಮಕ್ಕಳಿಗೆ ನೋಟ್ ಬುಕ್- ಹಾಲು ವಿತರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆ
ವ್ಯಕ್ತಿ 100 ವರ್ಷ ಬದುಕುವುದು ಮುಖ್ಯ ಅಲ್ಲ, ಕಡಿಮೆ ವರ್ಷ ಬದುಕಿದ್ದರೂ ನಮ್ಮ ಬದುಕು ಇತರರಿಗೆ ಸ್ಫೂರ್ತಿಯಾಗಬೇಕು. ಒಳ್ಳೆಯ ಕೆಲಸ ಮಾಡುವುರಿಂದ ಮಾನಸಿಕ ತೃಪ್ತಿ ಸಿಗುತ್ತದೆ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಗುರುವಾರ ಸ್ಫೂರ್ತಿ ಸಾಂಸ್ಕೃತಿಕ ಸಂಘದಿಂದ ಆಯೋಜಿಸಿದ್ದ ಉಚಿತ ನೋಟ್ ಬುಕ್ ವಿತರಣೆ ಹಾಗೂ ಬಸವ ಪಂಚಮಿ ಪ್ರಯುಕ್ತ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ದಾನ, ಧರ್ಮ ಮೊದಲಾದ ಸತ್ಕಾರ್ಯಗಳ ಮೂಲಕ ವ್ಯಕ್ತಿ ಅಮರರಾಗಲು ಸಾಧ್ಯವಿದೆ. ಮದರ್ ತೆರೆಸಾ ತಮ್ಮ ಜೀವನದ ಉದ್ದಕ್ಕೂ ಕುಷ್ಠರೋಗಿಗಳ ಸೇವೆ ಮಾಡಿದರು. ಆ ಮೂಲಕ ಸಂತೋಷ ಕಂಡರು. ಈ ರೀತಿಯ ಸೇವಾ ಬದುಕು ನಡೆದಾಗ ನಮಗೆ ಎಲ್ಲಿಲ್ಲದ ಸಂತೋಷ ಆಗುತ್ತದೆ ಎಂದು ತಿಳಿಸಿದರು.
ಸ್ಫೂರ್ತಿ ಸೇವಾ ಸಂಘದ ಅಧ್ಯಕ್ಷ ಎನ್.ಎಸ್.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಸಿದ್ದೇಶ್ ಕುರ್ಕಿ, ಭಜನಾ ಕಲಾವಿದೆ ಚಂದ್ರಮ್ಮ, ವಿರಕ್ತ ಮಠದ ಶಾಲೆ ಪ್ರಾಂಶುಪಾಲ ರೋಷನ್ ಜಮೀರ್ ಮಾತನಾಡಿದರು. ಹಿರಿಯ ಪತ್ರಕರ್ತ ಬಸವರಾಜ ಐರಣಿ, ಪಿ.ಖಾದರ್, ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಎಸ್.ಜೆ.ಎಂ. ಶಾಲೆ ಮಕ್ಕಳಿಗೆ ಬಸವ ಪಂಚಮಿ ಪ್ರಯುಕ್ತ ಹಾಲು ವಿತರಣೆ ಮಾಡಲಾಯಿತು.
-31ಕೆಡಿವಿಜಿ33.ಜೆಪಿಜಿ: