ಕನ್ನಡಪ್ರಭ ವಾರ್ತೆ ಶಿರಾ ಬಯಲು ಸೀಮೆ ಸೇರಿದಂತೆ ಶಿರಾ ತಾಲೂಕಿಗೆ ನೀರು ಹರಿಸಬೇಕೆಂಬ ದೃಢ ಸಂಕಲ್ಪದೊಂದಿಗೆ ಬೆಂಗಳೂರು ನಗರದ ಕೋಟ್ಯಾಂತರ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ಮೇಕೆದಾಟು ನೀರಾವರಿ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಬೇಕು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ಆಯೋಜಿಸಿದ್ದ ಮಧ್ಯ ಕರ್ನಾಟಕ ನೀರಾವರಿ ಹಕ್ಕೋತ್ತಾಯ ದಿನ ಹಾಗೂ ಶ್ರೀಗಳ ೪೭ನೇ ವರ್ಧಂತಿ ಮಹೋತ್ಸವದಲ್ಲಿ ದಿವ್ಯ ನೇತೃತ್ವ ವಹಿಸಿ ಭಕ್ತರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ೬೪ ಟಿಎಂಸಿ ನೀರು ಲಭ್ಯವಾಗಲಿದ್ದು, ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆಯಾಗಿ, ಉಳಿಕೆ ನೀರು ಜಿಲ್ಲೆಗಳಿಗೆ ನೀಡಿ ರೈತರ ಹಿತ ಕಾಪಾಡಬಹುದು. ನಮ್ಮ ಹಕ್ಕುಗಳನ್ನು ಕೇಳಲಿಕ್ಕೆ ನೀರಾವರಿ ಹಕ್ಕುತ್ತಾಯ ದಿನ ಆಂದೋಲನವಾಗಿ ರೂಪುಗೊಂಡಿದೆ. ಹೇಮಾವತಿ ನೀರು ಶಿರಾ ಭಾಗದ ಕೆರೆಗಳಿಗೆ ಹರಿದ ಕಾರಣ ಶಿರಾ ಸೇರಿದಂತೆ ಪಕ್ಕದ ಆಂಧ್ರಪ್ರದೇಶದಲ್ಲೂ ಕೂಡ ಅಂತರ್ಜಲ ಹೆಚ್ಚಳವಾಗಿ ರೈತರಿಗೆ ಅನುಕೂಲವಾಗಿದೆ ಎಂದರು. ನಿವೃತ್ತ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ ನಂಜಾವಧೂತ ಶ್ರೀಗಳು ನೀರಾವರಿ ಹೋರಾಟ ಪ್ರಾರಂಭಿಸಿದ ಪರಿಣಾಮ ಹಲವಾರು ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲು ಸಹಕಾರಿಯಾಗಿದೆ ಎಂದರು. ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ಶ್ರೀ ನಂಜಾವಧೂತ ಸ್ವಾಮೀಜಿಗಳು ಪ್ರತಿ ವರ್ಷವೂ ತಮ್ಮ ಹುಟ್ಟು ಹಬ್ಬದ ದಿನವನ್ನು ನೀರಾವರಿ ಹಕ್ಕೊತ್ತಾಯ ದಿನವನ್ನಾಗಿ ಮಾಡಿದ್ದರಿಂದ ಮಧ್ಯ ಕರ್ನಾಟಕದ ಹಲವಾರು ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಂತರ, ರಾಮನಗರ, ಕೋಲಾರ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಹೇಮಾವತಿ, ಅಪ್ಪರ್ಭದ್ರ, ಎತ್ತಿಹೊಳೆ, ಯೋಜನೆಗಳ ಮೂಲಕ ನೀರನ್ನು ಹರಿಸಲು ಯೋಜನೆಗಳು ರೂಪಿತವಾಗಿವೆ. ಈ ಭಾಗದ ಜನರ ನೀರಿನ ದಾಹವನ್ನು ನೀಗಿಸಲು ಶ್ರೀಗಳು ಅವಿರತ ಶ್ರಮಿಸುತ್ತಿದ್ದಾರೆ. ಅವರ ನೀರಾವರಿ ತರಬೇಕೆಂಬ ಉದ್ದೇಶವನ್ನು ಸರ್ಕಾರ ಸಾಕಾರಗೊಳಿಸಬೇಕು ಎಂದರು.ಶಿರಾ ಜೆಡಿಎಸ್ ಮುಖಂಡ ಆರ್. ಉಗ್ರೇಶ್ ಮಾತನಾಡಿ, ಶಿರಾ ಭಾಗದ ಕೆರೆಗಳಿಗೆ ಹೇಮಾವತಿ ನೀರು ಹರಿಯಲು ಶ್ರೀಗಳ ನೀರಾವರಿ ಹಕ್ಕೂತ್ತಾಯ ದಿನ ಪ್ರೇರಣೆಯಾಯಿತು. ಅತ್ಯಂತ ಕಿರಿಯವಯಸ್ಸಿನಲ್ಲಿ ನಂಜಾವಧೂತ ಶ್ರೀಗಳು ರೈತ ಮತ್ತು ನೀರಾವರಿ ಯೋಜನೆಗಳ ಬಗ್ಗೆ ಇರುವ ಕಾಳಜಿ ಸಮಾಜ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.೪೭ನೇ ವರ್ಧಂತಿ ಮಹೋತ್ಸವದ ಅಂಗವಾಗಿ ಲೋಕಕಲ್ಯಾಣ ಅರ್ಥ ಹೋಮ ಹವನ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿಗಳಿಗೆ ಭಕ್ತರು ಗುರುವಂದನೆ ಸಮರ್ಪಿಸಿದರು. ಈ ವೇಳೆ ಕಳ್ಳಿಪಾಳ್ಯ ರಂಗನಾಥ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್, ಶಿರಾ ಜೆಡಿಎಸ್ ನಾಯಕ ಆರ್. ಉಗ್ರೇಶ್, ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ರಾಜ್ಯ ಕಾಡುಗೊಲ್ಲ ಸಂಘದ ಅಧ್ಯಕ್ಷ ರಾಜಣ್ಣ, ನಿವೃತ್ತ ಐಎಎಸ್ ಅಧಿಕಾರಿ ಗೋವಿಂದರಾಜು, ಜೆಡಿಎಸ್ ಮುಖಂಡ ರವೀಂದ್ರಪ್ಪ, ಯಶೋಧರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ರಾಮಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.