ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಜನ ಸಾಮಾನ್ಯರಿಗೆ ಗ್ಯಾರಂಟಿಗಳ ಭಾಗ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿ, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರವು ಅವುಗಳ ಅನುಷ್ಠಾನದ ವಿಚಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಳಜಿ ತೋರದ ಹಿನ್ನಲೆ, ಅಭಿವೃದ್ಧಿ ಯೋಜನೆಗಳ ಜಾರಿಯಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ.ಐದು ಗ್ಯಾರಂಟಿಗಳ ಯೋಜನೆ ಅನುಷ್ಠಾನ ವಿಚಾರವಾಗಿ ಜಿಲ್ಲೆ ಸೇರಿದಂತೆ ತಾಲೂಕುಗಳಲ್ಲಿ ಅನುಷ್ಠಾನ ಸಮಿತಿ ರಚನೆಯಾಗಿದ್ದರೂ ಸಹ ಯೋಜನೆಗಳ ಜಾರಿ ಹಾಗೂ ಹೊಸಬರ ಸೇರ್ಪಡೆ ಮತ್ತು ಪ್ರತಿ ತಿಂಗಳು ಹಣ ಜಮಾಗೊಳ್ಳುವ ಕಾರ್ಯದಲ್ಲಿ ಶೇ.100 ರಷ್ಟು ಪ್ರಗತಿ ಕಾಣಲಾಗದ ಕಾರಣಕ್ಕೆ ಅರ್ಹ ಫಲಾನುಭವಿಗಳು ಸಮಸ್ಯೆ ಅನುಭವಿಸುವಂತಾಗಿದೆ.₹1600 ಕೋಟಿ ಖರ್ಚು: ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಐದು ಗ್ಯಾರಂಟಿಗಳಿಗೆ ಸುಮಾರು ₹1600 ಕೋಟಿ ಖರ್ಚಾಗಿದ್ದು, ಕಳೆದ ಸೆಪ್ಟಂಬರ್ನಲ್ಲಿ ಗೃಹಲಕ್ಷ್ಮೀ ಯೋಜನೆಗೆ ₹84 ಕೋಟಿ, ಯುವನಿಧಿಗೆ ₹1.75 ಕೋಟಿ, ಶಕ್ತಿ ಯೋಜನೆಗೆ ₹12 ಕೋಟಿ, ₹ಗೃಹ ಜ್ಯೋತಿಗೆ ₹14 ಕೋಟಿ ಮತ್ತು ಅನ್ನಭಾಗ್ಯ ಯೋಜನೆಗೆ ₹22 ಕೋಟಿ ವ್ಯಯಿಸಲಾಗಿದೆ. ಗಮನ ಹರಿಸಬೇಕು : ಜಿಲ್ಲೆಯಲ್ಲಿ ಐದು ಗ್ಯಾರಂಟಿಗಳ ಅನುಷ್ಠಾನ ವಿಚಾರದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅನುಷ್ಠಾನ ಸಮಿತಿಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಆಧಾರ್ ಕಾರ್ಡ್ಗಳ ಲಿಂಕ್ ಆಗಿಲ್ಲ, ಎನ್ಪಿಸಿಐ ಆಧಾರ್ ಸೀಡಿಂಗ್ ಆಗಬೇಕಾಗಿರುವುದರಿಂದ ಅಂತ್ಯೋದಯ ಕಾರ್ಡ್ ದಾರರಿಗೆ ಹಣ ಬರುತ್ತಿಲ್ಲ.
ಗೃಹ ಜ್ಯೋತಿ ಯೋಜನೆಯಡಿ ಸ್ವಂತ ಮತ್ತು ಬಾಡಿಗೆ ಮನೆಗಳ ಮಾಲೀಕರುಗಳು ನೋಂದಣಿ ಮಾಡಿಕೊಂಡರೂ ಯೋಜನೆ ವ್ಯಾಪ್ತಿಗೆ ಬರುತ್ತಿಲ್ಲ. ಈ ಕುರಿತು ಕಾರಣ ಕೇಳಿದರೆ ತಂತ್ರಾಂಶದ ಮೇಲೆ ಹಾಕಲಾಗುತ್ತಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗೃಹಜ್ಯೋತಿಯ ಫಲಾನುಭವಿಗಳನ್ನು ಹುಡುಕುವುದೇ ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ.ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ಗಳ ನೋಂದಣಿ ಕಾರ್ಯಕ್ಕೆ ಸರ್ವರ್ ಸಮಸ್ಯೆಯು ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭ ಸಿಗದಂತೆ ಮಾಡುತಿದೆ. ಯುವನಿಧಿ ನೋಂದಣಿ ಪ್ರಮಾಣವು ತೀರಾ ಕಡಿಮೆಯಾಗಿದ್ದು, ಈ ಕುರಿತು ಪದವೀಧರರಲ್ಲಿ ಜಾಗೃತಿಯ ಕೊರತೆ ಇರುವುದು ಎದ್ದು ಕಾಣುತಿದೆ.ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣದ ಅಗತ್ಯವಿದೆ. ಆದರೆ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಮಜಾಗೊಂಡಿಲ್ಲ. ಇದರಿಂದಾಗಿ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಅಧಿಕಾರಿಗಳನ್ನು ಕೇಳಿದರೆ ಇಷ್ಟರಲ್ಲಿಯೇ ರೊಕ್ಕ ಬರುತ್ತದೆ ಎಂದು ಹೇಳುತ್ತಾರೆ.
ಗೀತಾ ಆರ್ ನಾಯ್ಕ್ ಲಂಬಾಣಿ ತಾಂಡ ಸಿಂಧನೂರುಜಿಲ್ಲೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಯಾವುದೇ ಯೋಜನೆಗಳು ಎಲ್ಲಿಯೂ ಸ್ಥಗಿತಗೊಂಡಿಲ್ಲ. ಅರ್ಹ ಫಲಾನುಭವಿಗಳಿಗೆ ಯೋಜನೆಯನ್ನು ಮುಟ್ಟಿಸುವ ಕೆಲಸ ಮಾಡಲಾಗಿದ್ದು, ವಿವಿಧ ಕಾರಣಗಳಿಂದಾಗಿ ಕೆಲ ಫಲಾನುಭವಿಗಳಿಗೆ ಯೋಜನೆ ತಲುಪದೇ ಇದ್ದರೆ ಪರಿಗಣನೆಗೆ ತೆಗೆದುಕೊಂಡು ಸಮಸ್ಯೆ ಸರಿಪಡಿಸುವ ಕೆಲಸ ಮಾಡಲಾಗುತ್ತದೆ.ಎನ್.ಎಸ್. ಬೋಸರಾಜು, ಸಣ್ಣ ನೀರಾವರಿ, ಮಾಹಿತಿ, ತಂತ್ರಜ್ಞಾನ ಸಚಿವ ರಾಯಚೂರು