ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿದರಿಂದ ಸ್ಥಳೀಯರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಈಗಾಗಲೇ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬ್ಯಾರಿಕೇಡ್ ತೆರವಿಗೆ ಮನವಿ ಮಾಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ.
ಈ ಹಿಂದೆ ತೀರಾ ಅವೈಜ್ಞಾನಿಕ ರೀತಿಯಲ್ಲಿ ಭಾರಿ ಗಾತ್ರದ ಟ್ರಾಫಿಕ್ ಸಿಗ್ನಲ್ ಕಂಬಗಳನ್ನು ರಸ್ತೆಪಕ್ಕ ಹಾಕಿ ಪಾದಚಾರಿಗಳಿಗೆ, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಗಜಗಾತ್ರದ ಕಂಬಗಳಿಂದ ತ್ರಿವೇಣಿ ಸರ್ಕಲ್, ಡಯಾನ ಸರ್ಕಲ್ಗಳಲ್ಲಿ ವಾಹನ ಸಂಚಾರಕ್ಕೂ ಕೃತಕ ತಡೆಯಾಗಿತ್ತು. ಖಾಸಗಿಯವರ ಜಾಹೀರಾತು ಪ್ರದರ್ಶನಕ್ಕಾಗಿಯೇ ಹಾಕಿದಂತಿದ್ದ ಈ ಟ್ರಾಫಿಕ್ ಸಿಗ್ನಲ್ ಕಂಬಗಳನ್ನು ತೆರವು ಮಾಡುವ ಬಗ್ಗೆಯೂ ನಗರಸಭೆ ವತಿಯಿಂದ ಕ್ರಮ ವಹಿಸಲಾಗುವುದು.ಈಗಾಗಲೇ ಹಲವು ಬಾರಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಿದ್ದರೂ ಸೂಕ್ತ ನಿರ್ವಹಣೆ ಇಲ್ಲದೆ, ಪರಿಣಾಮಕಾರಿಯಾಗಿ ಬಳಕೆಯಾಗದೆ ಯೋಜನೆ ಫಲಪ್ರದವಾಗದ ಹಿನ್ನೆಲೆ ಈ ಬಾರಿ ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ವೈಜ್ಞಾನಿಕ ರೀತಿಯಲ್ಲಿ ಸಿಗ್ನಲ್ ಅಳವಡಿಕೆ ನಗರಸಭೆ ಮುಂದಾಗಿದೆ ಎಂದು ಪ್ರಭಾಕರ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.