ಕನ್ನಡಪ್ರಭ ವಾರ್ತೆ ತಿಕೋಟಾ
ತಾಲೂಕಿನ ಹೊನವಾಡ, ಬಿಜ್ಜರಗಿ ಹಾಗೂ ಬಾಬಾನಗರ ಗ್ರಾಮ ಪಂಚಾಯತಿಗಳಿಗೆ ತೋಟಿಗಾರಿಕೆ ಜಂಟಿ ನಿರ್ದೇಶಕ ಶ್ರೀಶೈಲ್ ದಿಡ್ಡಿಮನಿ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ಹಾಗೂ ಅರಣ್ಯ ಇಲಾಖೆಯಿಂದ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಮೊದಲು ಹೊನವಾಡ ಗ್ರಾಮದ ಅಮೃತ ಸರೋವರದ ದಡದಲ್ಲಿ ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ ನಾಟಿ ಮಾಡಿರುವ ಸಸಿಗಳನ್ನು ವೀಕ್ಷಣೆ ಮಾಡಿದರು. ಸದರಿ ಸರೋವರದ ದಡದ ಮೇಲೆ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೂಡದೇ ಕೇವಲ ಜನರ ಸಂಚಾರಕ್ಕೆ ಅನುವು ಮಾಡಿ ಕೂಡಲು ಸೂಚಿಸಿದರು. ಸಸಿಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡಿದ್ದು ನಿರ್ವಹಣೆ ಸಹಾ ಉತ್ತಮ ರೀತಿಯಲ್ಲಿ ಆಗಬೇಕು ಎಂದರು.
ನಂತರ ಗ್ರಾಮ ಪಂಚಾಯತಿ ವತಿಯಿಂದ ಅನುಷ್ಠಾನಗೊಂಡ ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಬೋರ್ವೆಲ್ ರಿಚಾರ್ಜ್ ಫಿಟ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಬೋರ್ವೆಲ್ ರಿಚಾರ್ಜ್ ಫಿಟ್ ಹತ್ತಿರ ಜನರಿಗೆ ಮತ್ತು ಜಾನುವಾರುಗಳಿಗೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸಲು ಸ್ಥಳದಲ್ಲಿದ್ದ ಪಿಡಿಒಗೆ ಸೂಚಿಸಿದರು. ಜೊತೆಗೆ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆಯನ್ನು ನೀಡಿದ್ದಾರೆ.ತದನಂತರ ಬಿಜ್ಜರಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಸಿ ನಾಟಿ ಮಾಡಿರುವದನ್ನು "ೀಕ್ಷಣೆ ಮಾಡಿ, ಸಸಿ ನಾಟಿ ಮಾಡುವುದು ಒಳ್ಳೆಯ ಕಾರ್ಯವಾಗಿದ್ದು ಸಸಿಗಳನ್ನು ಪೋಷಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಂತರ, ಬಾಬಾನಗರ ಗ್ರಾಮದಲ್ಲಿ ಕಳ್ಳಕವಟಗಿ ರಸ್ತೆ ಪಕ್ಕದಲ್ಲಿ ಕೈಗೊಂಡ ಸಸಿ ನಾಟಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಸಸಿಗಳ ನಾಟಿ ಮಾಡುವದರ ಜೊತೆಗೆ ನೀರಿನ ಹೊಂಡವನ್ನು ವೀಕ್ಷಣೆ ಮಾಡಿದ್ದು, ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಂತರ ಗ್ರಾಮ ಪಂಚಾಯತಿ ವತಿಯಿಂದ ಸಿಡಿ ನಿರ್ಮಾಣ ಮಾಡಿರುವ ಕಾಮಗಾರಿಯನ್ನು ಪರಿಶೀಲಿಸಿದರು. ಮತ್ತು ಬಾಕಿ ಉಳಿದಿರುವ ಕೆಲಸವನ್ನು ನಿಯಮಾನುಸಾರ ಕೈಗೊಂಡು ಶೀಘ್ರ ಪೂರ್ಣಗೊಳಿಸಲು ತಿಳಿಸಿದರು.ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಆಜೂರ, ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಜಿಪಂ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜನಾಧಿಕಾರಿ ಪಿ.ಎಸ್.ಪಾಟೀಲ, ಪಿಡಿಒಗಳಾದ ಎಂ.ಬಿ.ಮನಗೂಳಿ, ಸುರೇಶ ಕಳ್ಳಿಮನಿ, ರೇಣುಕಾ ಸೋಲಾಪುರ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಅರಣ್ಯ ಇಲಾಖೆಯ ಚಂದ್ರಶೇಖರ ಪಟ್ಟಣಶೆಟ್ಟಿ, ರವಿ ರಾಠೋಡ ಸೇರಿದಂತೆ ನರೇಗಾ ಯೋಜನೆಯ ಸಿಬ್ಬಂದಿ ಹಾಗೂ ಗ್ರಾಪಂ ಸದಸ್ಯರು, ಸಿಬ್ಬಂದಿ ಇದ್ದರು.