ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹುಬ್ಬಳ್ಳಿಯಲ್ಲಿ ಮಹಾ ವ್ಯವಸ್ಥಾಪಕ ಪಿ.ಅನಂತ್ ಅವರೊಂದಿಗೆ ಉತ್ತರ ಕರ್ನಾಟಕದ ರೈಲು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೊಸ ರೈಲು ಸೇವೆಗಳ ವಿಸ್ತರಣೆ ಕುರಿತು ಮಹತ್ವದ ಚರ್ಚೆ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯ ಇಂಜಿನಿಯರ್ ಹಾಗೂ ಹೆಚ್ಚುವರಿ ಮುಖ್ಯ ಎಂಜಿನಿಯರ್ ಉಪಸ್ಥಿತರಿದ್ದರು.
ರಾಜ್ಯಸಭಾ ಸಂಸದರಾದ ನಾರಾಯಣಸಾ ಭಾಂಡಗೆ ಅವರು ಉತ್ತರ ಕರ್ನಾಟಕದ ಪ್ರಮುಖ ರೈಲು ಯೋಜನೆಗಳು ಮತ್ತು ಸಾರ್ವಜನಿಕ ಬೇಡಿಕೆಗಳಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಮಂಡಿಸಿದರು.ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು, ಗದಗ-ಮುಂಬೈ ನಡುವೆ ಬಾಗಲಕೋಟೆ-ಸೊಲ್ಲಾಪುರ ಮಾರ್ಗವಾಗಿ ಹೊಸ ವಂದೇ ಭಾರತ್ ಎಕ್ಸಪ್ರೆಸ್ ಆರಂಭಿಸುವುದು, ವಿಜಯಪುರ-ತಿರುಪತಿ ನೇರ ರೈಲು ಸೇವೆ ಆರಂಭಿಸುವ ಕುರಿತು ಗೋಲ್ ಗುಂಬಜ್ ಎಕ್ಸ್ಪ್ರೆಸ್ (16535/16536) ರೈಲಿನ ವೇಗ ಹೆಚ್ಚಿಸುವುದು, ಸವದತ್ತಿ ಮಾರ್ಗವಾಗಿ ಲೋಕಾಪುರ-ಧಾರವಾಡ ಹೊಸ ರೈಲು ಮಾರ್ಗ ನಿರ್ಮಾಣ, ಹುಬ್ಬಳ್ಳಿ-ಹಜ್ರತ್ ನಿಜಾಮುದ್ದೀನ್ ಎಕ್ಸಪ್ರೆಸ್ (20647) ಸೇವೆಯನ್ನು ವಾರಕ್ಕೆ ಎರಡು ಬಾರಿ ವಿಸ್ತರಿಸುವುದು, ಬಸವ ಎಕ್ಸಪ್ರೆಸ್ ರೈಲನ್ನು ಲೋಕಾಪುರವರೆಗೆ ವಿಸ್ತರಿಸುವುದು, ಬಾಗಲಕೋಟೆ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 2 ಮತ್ತು 3ರಲ್ಲಿ ಲಿಫ್ಟ್ ಅಳವಡಿಸುವ ಕುರಿತು ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ ಅವರು ಮಾತನಾಡಿದರು.
ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕ ಪಿ. ಅನಂತ್ ಅವರು ಮಂಡಿಸಲಾದ ಪ್ರಸ್ತಾವನೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.