ಕಬ್ಬಿನಲ್ಲಿ ಸುಧಾರಿತ ಕ್ರಮದಿಂದ ಆರ್ಥಿಕ ಸಬಲತೆ ಸಾಧ್ಯ

KannadaprabhaNewsNetwork |  
Published : Jan 20, 2026, 03:15 AM IST
ಕೃಷಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ನಿಸರ್ಗದಲ್ಲಿನ ಸಮತೋಲನ ಕಾಪಾಡಿಕೊಂಡು ಹಂಗಾಮಿಗೆ ತಕ್ಕಂತೆ ರೈತರು ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಕಬ್ಬಿನಲ್ಲಿ ಸುಧಾರಿತ ಕ್ರಮಗಳನ್ನು ಅನುಸರಿಸಿ ಆರ್ಥಿಕವಾಗಿ ಸಬಲರಾಗಬೇಕೆಂದು ಬೆಳಗಾವಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ.ಕೊಳೇಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಿಸರ್ಗದಲ್ಲಿನ ಸಮತೋಲನ ಕಾಪಾಡಿಕೊಂಡು ಹಂಗಾಮಿಗೆ ತಕ್ಕಂತೆ ರೈತರು ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಕಬ್ಬಿನಲ್ಲಿ ಸುಧಾರಿತ ಕ್ರಮಗಳನ್ನು ಅನುಸರಿಸಿ ಆರ್ಥಿಕವಾಗಿ ಸಬಲರಾಗಬೇಕೆಂದು ಬೆಳಗಾವಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ.ಕೊಳೇಕರ ಹೇಳಿದರು.

ತಾಪಂ ಸಭಾಭವನದಲ್ಲಿ ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ(ಆತ್ಮಾ), ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜಗಳ ಸಹಯೋಗದೊಂದಿಗೆ ರೈತ ದಿನಾಚರಣೆ ಅಂಗವಾಗಿ ಕಬ್ಬಿನ ಬೆಳೆಯಲ್ಲಿ ಸಮಗ್ರ ನೀರು ಮತ್ತು ಮಣ್ಣು ನಿರ್ವಹಣೆ ವಿಚಾರ ಸಂಕೀರ್ಣ ಉದ್ಘಾ ಟಿಸಿ ಮಾತನಾಡಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಗುರು ಮೆಟ್ಟಗುಡ್ಡ್ಡ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಶ್ರೇಯೋಭಿವೃದ್ದಿಗಾಗಿ ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ರಾಜ್ಯ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಾಳಪ್ಪ ಬೆಳಕೊಡ ಮಾತನಾಡಿ, ಕಬ್ಬಿನಲ್ಲಿ ಎಕರೆಗೆ 130 ಟನ್ ಇಳುವರಿ ಪಡೆದ ತಮ್ಮ ಯಶೋಗಾಥೆಯನ್ನು ತಿಳಿಸಿದರು. ಅಲ್ಲದೇ, ರೈತರು ಭೂಮಿಯಲ್ಲಿ ಸಾವಯವ ಇಂಗಾಲ ಪ್ರಮಾಣವನ್ನು ಹೆಚ್ಚಿಸಿಕೊಂಡು, ಕಬ್ಬಿನ ರವದಿಯನ್ನು ಸುಡದೆ ಗೊಬ್ಬರವಾಗಿ ಮಾರ್ಪಡಿಸಿ, ಕಡಿಮೆ ಖರ್ಚಿನಲ್ಲಿ ವಿಷಮುಕ್ತ ಆಹಾರವನ್ನು ಸಮಾಜಕ್ಕೆ ಒದಗಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕು. ಪ್ರಯತ್ನ ಹಾಗೂ ಸ್ವತಃ ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಕೃಷಿಯಲ್ಲಿ ಖುಷಿಯನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಕೆ.ವಿ.ಕೆ ಮತ್ತಿಕೊಪ್ಪ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ, ಕಬ್ಬು ನಾಟಿಗೆ ಜುಲೈದಿಂದ ಜನೆವರಿವರಗೆ ತಳಿಗಳಿಗೆ ಅನುಗುಣವಾಗಿ ಉತ್ತಮ ಬೀಜ ಆಯ್ಕೆ ಮಾಡಿಕೊಂಡು ನಾಟಿ ಮಾಡಬಹುದಾಗಿದೆ. ಆಳವಾದ ಮಾಗಿ ಉಳುಮೆ(ಮಾರ್ಚ-ಎಪ್ರಿಲ್) ಮಾಡಿ ಜೋಡು ಸಾಲು ಹಾಗೂ ಅಂತರ ಸಾಲು ಪದ್ಧತಿಗಳನ್ನು ಅನುಸರಿಸಿ, ಸರಿಯಾಗಿ ಬದುಗಳನ್ನು ಏರಿಸಿ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಾಗುವಳಿ ಮಾಡಿದಲ್ಲಿ ಕಬ್ಬಿನಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಸಲಹೆ ನೀಡಿದರು.

ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಅಭಿವೃಧ್ಧಿ ಅಧಿಕಾರಿ ಅನಿಲಕುಮಾರ ಮುಗಳಖೋಡ ಮಾತನಾಡಿ, ಕಬ್ಬಿನ ಬೆಳೆಯಲ್ಲಿ ಮಣ್ಣಿನ ಆರೋಗ್ಯ ಹಾಗೂ ನೀರಿನ ಸದ್ಬಳಕೆ ಕುರಿತು ಮಾರ್ಮಿಕವಾಗಿ ವಿವರಿಸಿದರು.

ಉಪ ಕೃಷಿ ನಿರ್ದೇಶಕ ಸಲೀಮ ಸಂಗತ್ರಾಸ, ಕೃಷಿಕ ಸಮಾಜದ ಉಪಾಧ್ಯಕ್ಷ ಶಂಕರಗೌಡ ದೊಡ್ಡಗೌಡ್ರ, ಜಿಲ್ಲಾ ಪ್ರತಿನಿಧಿ ನಾಗನಗೌಡ ಭರಮಗೌಡ್ರ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ತುರಮರಿ, ಖಜಾಂಚಿ ಶಿವಪುತ್ರಪ್ಪ ತಟವಟಿ, ಸದಸ್ಯರಾದ ಬಸವರಾಜ ಶಿಂತ್ರಿ, ಶರಣಬಸಪ್ಪ ಮೆಟಗುಡ್ಡ, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ರೈತರು, ಕೃಷಿ ಸಖಿಯರು ಹಾಗೂ ಬೆಳೆ ಸಮೀಕ್ಷೆದಾರರು ಇದ್ದರು.

ಇದೇ ಸಂಧರ್ಭದಲ್ಲಿ ಆತ್ಮಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಹಾಗೂ ತಾಲ್ಲೂಕಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳನ್ನು ಸನ್ಮಾನಿಸಲಾಯಿತು. ಆಯ್ದ ರೈತರಿಗೆ ಕೃಷಿ ಭಾಗ್ಯ ಯೋಜನೆಯ ಕಾರ್ಯಾದೇಶ ಹಾಗೂ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಮರಡಿ ನಿರೂಪಿಸಿದರು. ಯಮನಪ್ಪ ಮಾದಿಗರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ
ಫೆಬ್ರವರಿಯಿಂದ ರಾಜ್ಯದಲ್ಲಿ ಎಸ್‌ಐಆರ್‌?