ಕನ್ನಡಪ್ರಭವಾರ್ತೆ ಚಿತ್ರದುರ್ಗ
ಕನ್ನಡ ಗೀತೆಗಳೊಂದಿಗೆ ಯೋಗಾಸನ ಮಾಡಿದರೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮನಸ್ಸು ಏಕಾಗ್ರತೆಯ ಕೇಂದ್ರೀಕರಣದಿಂದ ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಶಾಲಾಶಿಕ್ಷಣ ಇಲಾಖೆ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ವಿವೇಕಾನಂದನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯವಾಕ್ಯದೊಂದಿಗೆ ಕನ್ನಡಗೀತೆಗಳೊಂದಿಗೆ ಯೋಗ ತರಬೇತಿ ಕಾರ್ಯಾಗಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಪ್ರತಿವರ್ಷ ನಿಗದಿಪಡಿಸುತ್ತಿರುವ ಕನ್ನಡ ಗೀತೆಗಳನ್ನು ಪ್ರತಿಯೊಂದೂ ಶಾಲಾಕಾಲೇಜುಗಳಲ್ಲಿ ಪರಿಚಯಿಸಬೇಕು. ಪುಸ್ತಕಗಳಲ್ಲಿ ಬರುವ ಪ್ರತಿ ಅಧ್ಯಾಯಗಳ ವಿಷಯಗಳನ್ನು ಗೀತೆಗಳ ರೂಪದಲ್ಲಿ ಪರಿಚಯಿಸಿದರೆ ಸಾಂಸ್ಕೃತಿಕ ವಾತಾವರಣ ಮುದನೀಡುತ್ತದೆ ಮತ್ತು ಬೇಗ ಮನದಟ್ಟಾಗುತ್ತದೆ. ಮನರಂಜನೆ ಜೊತೆಗೆ ಪಾಠ ಓದಿದ ಅನುಭವವಾಗುತ್ತದೆ. ಸಂಗೀತ, ನೃತ್ಯ, ನಾಟಕಗಳಿಂದ ಕೂಡಿದ ಬೋಧನೆ ಮಕ್ಕಳಿಗೆ ಪರಿಣಾಮಕಾರಿಯಾಗುತ್ತದೆ ಎಂದರು.ಶಾಲೆಯ ಮುಖ್ಯಶಿಕ್ಷಕ ಟಿ.ಷಣ್ಮುಖಪ್ಪ ಮಾತನಾಡಿ, ಸಾಂಸ್ಕೃತಿಕ ಮಾಧ್ಯಮಗಳು ಬಡವ ಬಲ್ಲಿದರೆಂಬ ಭೇದ ತೋರದೆ ಎಲ್ಲಾ ವರ್ಗದವರನ್ನು ಒಟ್ಟುಮಾಡುವ ಶಕ್ತಿಯನ್ನು ತುಂಬಿವೆ. ಇಂತಹ ಅಪರೂಪದ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆಗಳಲ್ಲಿ ಹಮ್ಮಿಕೊಂಡಿರುವುದು ಸಂತಸದ ವಿಷಯವಾಗಿದೆ ಎಂದರು. ನಗರಸಭೆ ಮಾಜಿಸದಸ್ಯ ಜೆ.ಮಹೇಶ್ ಮಾತನಾಡಿ ಮಕ್ಕಳ ಮನಸ್ಸನ್ನು ತಲುಪುವಲ್ಲಿ ಇಂಥ ಕಾರ್ಯಕ್ರಮಗಳು ಸಾರ್ಥಕತೆಯನ್ನು ಪಡೆದುಕೊಳ್ಳುತ್ತವೆ. ಸರಳತೆಯಲ್ಲೂ ಅದ್ದೂರಿತನದ ಸಂಪನ್ಮೂಲಗಳನ್ನು ಕನ್ನಡ ಗೀತೆಗಳ ಮೂಲಕ ಬಿತ್ತುವ ಕಾರ್ಯ ಶ್ಲಾಘನೀಯವಾದುದು ಎಂದರು. ಶಿಕ್ಷಣ ಸಂಯೋಜಕ ಜೆ.ಬಿ.ರವೀಂದ್ರನಾಥ್, ಎಸ್ಡಿಎಂಸಿ ಅಧ್ಯಕ್ಷ ಕೆ.ಕುಮಾರ್, ಸಹಶಿಕ್ಷಕರಾದ ಬಿ.ವಿಮಲಾಕ್ಷಿ, ಟಿ.ಎನ್.ಶೋಭ, ಬಾದರದಿನ್ನಿ ಆಟ್ರ್ಸ್ ಅಕಾಡೆಮಿಯ ಪ್ರಕಾಶ್ ಬಾದರದಿನ್ನಿ ಮಾತನಾಡಿದರು.ನೀನಾಸಂ ಪದವೀಧರ ಹಾಗೂ ಕಸಾಪ ಜಿಲ್ಲಾ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ ಕನ್ನಡ ಗೀತಗಾಯನ ಹಾಗೂ ಯೋಗಶಿಕ್ಷಕ ಎಂ.ಬಿ.ಮುರಳಿ ಇವರು ಯೋಗ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಹುಯಿಲುಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಕುವೆಂಪು ವಿರಚಿತ ಎಲ್ಲಾದರು ಇರು ಎಂತಾದರು ಇರು, ದ.ರಾ ಬೇಂದ್ರೆಯವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ಧಯ್ಯ ಪುರಾಣಿಕ ಬರೆದ ಹೊತ್ತಿತೋ ಹೊತ್ತಿತೂ ಕನ್ನಡದ ದೀಪ, ಚನ್ನವೀರ ಕಣವಿಯವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡದ ಧ್ವನಿಮುದ್ರಿತ ಗೀತೆಗಳನ್ನು ಹಾಡುವುದ ರೊಂದಿಗೆ ಯೋಗ ತರಬೇತಿ ಕಾರ್ಯಾಗಾರ ನಡೆಯಿತು.