ಕೃಷಿ ಆಸಕ್ತಿಯಿಂದ ಪರಿಸರ ನಿರ್ಮಾಣ, ಆರೋಗ್ಯ ಸುಧಾರಣೆ: ರಾಜೇಂದ್ರ ಕುಮಾರ್

KannadaprabhaNewsNetwork |  
Published : Dec 04, 2024, 12:34 AM IST
32 | Kannada Prabha

ಸಾರಾಂಶ

ಮಂಗಳೂರಿನ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಅವರು ‘ಅಡಿಕೆ ಮರಕ್ಕೆ ತಗಲುವ ರೋಗಗಳ ಬಗ್ಗೆ ವಿಶೇಷ ಪರಿಹಾರ’ ಎಂಬ ಬಗ್ಗೆ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ನಮ್ಮ ಮಕ್ಕಳು ವಿದ್ಯೆ ಕಲಿತು ಒಳ್ಳೆಯ ಉದ್ಯೋಗ ದೊರಕಿಸಿಕೊಳ್ಳುವುದು ತಪ್ಪಲ್ಲ. ಅದರ ಜೊತೆಗೆ ಅವರಲ್ಲಿ ಕೃಷಿಯ ಬಗ್ಗೆ ಆಸಕ್ತಿಯನ್ನು ಬೆಳೆಸಿ ಅದನ್ನೊಂದು ಹವ್ಯಾಸವನ್ನಾಗಿ ಮಾಡಿಕೊಳ್ಳುವಂತೆ ಅವರಿಗೆ ಪ್ರೇರಣೆ ನೀಡುವುದರಿಂದ ಒಳ್ಳೆಯ ಪರಿಸರ ನಿರ್ಮಾಣಕ್ಕೆ ಮಹತ್ತರ ಕೊಡುಗೆ ಸಲ್ಲಿಸಿದಂತಾಗುತ್ತದೆ. ಮತ್ತು ನಮ್ಮ ಆರೋಗ್ಯ ಸುಧಾರಣೆಗೂ ಇದು ನೆರವಾಗಬಲ್ಲುದು ಎಂದು ಸ್ಥಳೀಯ ಮಯೂರಿ ಜವುಳಿ ಮಳಿಗೆಯ ಮಾಲೀಕರು ಹಾಗೂ ಸ್ವತಃ ಪ್ರಗತಿಪರ ಸಾವಯವ ಕೃಷಿಕರಾಗಿಯೂ ಗುರುತಿಸಿಕೊಂಡಿರುವ ರಾಜೇಂದ್ರ ಕುಮಾರ್ ತಿಳಿಸಿದರು. ಸಮಾಜ ಮಂದಿರದಲ್ಲಿ ನಡೆದ ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಇದರ ನವೆಂಬರ್ ತಿಂಗಳ ಮಾಸಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಿರಿಯರಿಂದ ಬಂದ ಕೃಷಿಯನ್ನು ಮುಂದುವರಿಸಿಕೊಂಡು ಹೋಗುವುದೇ ಒಂದು ಸವಾಲಾಗಿರುವ ಈ ಕಾಲಘಟ್ಟದಲ್ಲಿ ನಮ್ಮ ನಮ್ಮ ವೃತ್ತಿಯ ಜೊತೆ ಕೃಷಿಯನ್ನೂ ಜೋಡಿಸಿಕೊಂಡು ಇದಕ್ಕೆ ಪೂರಕವಾಗಿ ಕನಿಷ್ಠ ಒಂದು ಹಸುವನ್ನಾದರೂ ಸಾಕುವುದರಿಂದ ಕೃಷಿಯಲ್ಲಿ ಖುಷಿಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು. ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವಿಶ್ವನಾಥ ಎಸ್.ಪಿ.ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರಿನ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಅವರು ‘ಅಡಿಕೆ ಮರಕ್ಕೆ ತಗಲುವ ರೋಗಗಳ ಬಗ್ಗೆ ವಿಶೇಷ ಪರಿಹಾರ’ ಎಂಬ ಬಗ್ಗೆ ಉಪನ್ಯಾಸ ನೀಡಿದರು.

ಆಳ್ವಾಸ್ ಇಂಜಿನಿಯರಿಂಗ್‌ ಕಾಲೇಜಿನ ಕೃಷಿ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಹುಲ್ ಪಾಠಕ್ ಅವರು ಡಿ. 10 ರಿಂದ 16 ರ ತನಕ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ವಿರಾಸತ್ ಜೊತೆಗೆ ನಡೆಯಲಿರುವ ಕೃಷಿ ಸಿರಿ ಹಾಗೂ ರೈತರ ಕೃಷಿ ಸಂತೆಯ ಬಗ್ಗೆಯೂ ವಿವರಗಳನ್ನಿತ್ತರು. ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾಜೇಂದ್ರ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷರಾದ ಬಿ.ಅಭಯ ಕುಮಾರ್ ಅಧ್ಯಕ್ಷತೆ ವಹಿಸಿದ್ದು ಕಾರ್ಯದರ್ಶಿ ಹರೀಶ್ ಕೋಟ್ಯಾನ್ ವರದಿ ವಾಚಿಸಿದರು. ಗುಣಪಾಲ ಮುದ್ಯ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ರಾಜವರ್ಮ ಬೈಲಂಗಡಿ ವಂದಿಸಿದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ