ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಹಿರೀಸಾವೆ ಗ್ರಾಮದ ಜ್ಞಾನಪ್ರಭ ಇಂಟರ್ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಸುಧಾರಣೆ ಹೊಂದಿದ್ದಲ್ಲಿ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದರು. ಮಕ್ಕಳಿಗೆ ಮೊಬೈಲ್ ನೀಡುವುದನ್ನು ನಿಲ್ಲಿಸಬೇಕು. ಪಾಲಕರು ತಮ್ಮ ಮಕ್ಕಳ ಶಿಕ್ಷಣ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಚಿಂತನೆಯೊಂದಿಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳ ಶೈಕ್ಷಣಿಕ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಪಾಲಕರು ಗಮನ ಹರಿಸಬೇಕು. ಇದರಿಂದ ಅವರ ಬದುಕನ್ನು ಸುಂದರವಾಗಿ ಕಟ್ಟಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ವಿಭಕ್ತ ಕುಟುಂಬಗಳು ಇರಲಿ ಹೆತ್ತವರು ಹಾಗೂ ಮಕ್ಕಳೇ ಬೇರೆ ಬೇರೆ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಣದ ವ್ಯವಸ್ಥೆ ಹಾಗೂ ಆಧುನಿಕತೆ ಬೆಳೆದಂತೆಲ್ಲ ಸಂಬಂಧಗಳ ಕೊಂಡಿ ಸಡಿಲವಾಗುತ್ತಿದೆ. ಅನಾಥಾಶ್ರಮ ಹಾಗೂ ವೃದ್ಧಾಶ್ರಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಹಾಸ್ಯ ನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಕೆ.ಆರ್. ಪೇಟೆ ಶಿವರಾಜು ಮಾತನಾಡಿ, ಆಧುನೀಕತೆ ಸಾಕಷ್ಟು ಮುಂದುವರಿದಿದ್ದು ಮೊಬೈಲ್ ಬಳಕೆ ಬಂದ ಮೇಲೆ ಪೌರಾಣಿಕ ನಾಟಕ ಪ್ರದರ್ಶನ, ಯಕ್ಷಗಾನ, ಜಾನಪದ, ಕೋಲಾಟ ಹಾಗೂ ಗ್ರಾಮೀಣ ಕ್ರೀಡೆಗಳು ಕಣ್ಮರೆಗೆ ಸರಿದಿವೆ. ಇಂದಿನ ಮಕ್ಕಳಿಗೆ ಯಾವುದು ತಿಳಿದಿಲ್ಲ. ಇದರಿಂದ ಗ್ರಾಮೀಣ ಸೊಗಡು ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಹೆತ್ತವರ ವಿವಾಹ ವಾರ್ಷಿಕೋತ್ಸವ ಇಲ್ಲವೇ ಹುಟ್ಟುಹಬ್ಬ ಕುರಿತು ಮೊಬೈಲ್ನಲ್ಲಿ ಸ್ಟೇಟಸ್ ಹಾಕಿದರೆ ಏನು ಸಿಗುವುದಿಲ್ಲ. ಬದಲಿಗೆ ಅವರೊಂದಿಗೆ ಬೆರೆತು ಮಾತನಾಡಿ, ಅವರು ನಡೆದು ಬಂದ ಬದುಕಿನ ಹಾದಿಯ ಬಗ್ಗೆ ತಿಳಿದುಕೊಳ್ಳಿ. ಅದನ್ನು ಅನುಸರಿಸಿದರೆ ಬದುಕು ಬಂಗಾರವಾಗಲಿದೆ. ಯಾವಾಗಲೂ ಮೊಬೈಲ್ ಸ್ಕ್ರೀನ್ ಟಚ್ನಲ್ಲಿ ಇರಬೇಡಿ ಬದಲಿಗೆ ಒಬ್ಬರಿಗೊಬ್ಬರು ಟಚ್ಚಲ್ಲಿ ಇರಿ ಎಂದು ಸಲಹೆ ನೀಡಿದರು. ಮೊಬೈಲ್ ಬಳಕೆಯೇ ಬದುಕಾಗಬಾರದು. ಬಳಕೆ ಹೆಚ್ಚಿದಂತೆಲ್ಲ ಟೆಲಿಗ್ರಾಂ, ರೇಡಿಯೋ, ಟೇಪ್ರೆಕಾರ್ಡರ್ ವಿಸಿಪಿ ಹಾಗೂ ಕಾಗದ ಬರೆಯುವ ಕಲೆ ಸೇರಿದಂತೆ ಸಂಬಂಧಗಳನ್ನು ಕಳೆದುಕೊಂಡಿದ್ದೇವೆ. ಸಂಬಂಧಗಳ ಮೌಲ್ಯ ಕುಸಿದಂತೆಲ್ಲ ಸಹಬಾಳ್ವೆಯ ಬದುಕು ನೆಲ ಹಿಡಿಯುತ್ತಿದೆ ಎಂದರು. ಇನ್ನು ಮಕ್ಕಳು ಓದಿ ಏನಾಗಬೇಕು ಅಥವಾ ಬೆಳೆದು ಯಾವ ವೃತ್ತಿ ಪಡೆಯಬೇಕು ಎಂದುಕೊಂಡಿರುತ್ತಾರೆಯೋ ಅದನ್ನು ಗಮನಿಸಿ ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ಇಲ್ಲವೇ ನಿಮಗಿಷ್ಟ ಬಂದಂತೆ ಒತ್ತಡ ಏರಿದರೆ ಮಕ್ಕಳು ಹಾದಿ ತಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಪಾಲಕರಿಗೆ ಎಚ್ಚರಿಸಿದರು. ಶಾಲೆ ವತಿಯಿಂದ ಕಳೆದ ತಿಂಗಳು ನಡೆಸಿದ್ದ ಪಾಲಕರ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ್ದ ಪಾಲಕರಿಗೆ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.