ಕನಗನಹಳ್ಳಿ ಹೊರವಲಯದಲ್ಲಿ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಪರ-ವಿರೋಧ

KannadaprabhaNewsNetwork |  
Published : Jan 20, 2026, 02:00 AM IST
19ಕೆಎಂಎನ್ ಡಿ20,21,22  | Kannada Prabha

ಸಾರಾಂಶ

ಪಾಂಡವಪುರ ತಾಲೂಕಿನ ಕನಗನಹಳ್ಳಿ ಹೊರವಲಯದಲ್ಲಿ ಸೋಮವಾರ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣ ವಿಚಾರವಾಗಿ ಎರಡು ಗುಂಪುಗಳ ನಡುವೆ ಪರ-ವಿರೋಧ ಪ್ರತಿಭಟನೆ ನಡುವೆಯೂ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಪೊಲೀಸರ ಭದ್ರತೆಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕನಗನಹಳ್ಳಿ ಹೊರವಲಯದಲ್ಲಿ ಸೋಮವಾರ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣ ವಿಚಾರವಾಗಿ ಎರಡು ಗುಂಪುಗಳ ನಡುವೆ ಪರ-ವಿರೋಧ ಪ್ರತಿಭಟನೆ ನಡುವೆಯೂ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಪೊಲೀಸರ ಭದ್ರತೆಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಿಎಂ ಕುಸುಮ್ ಯೋಜನೆಯಿಂದ 4.5 ಮೆಗಾವ್ಯಾಟ್ ಸೋಲಾರ್ ಪ್ಲಾಟ್ ನಿರ್ಮಾಣ ಮಾಡುವ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅಧಿಕಾರಿಗಳೊಂದಿಗೆ ಗುರುತಿಸಲ್ಪಟ್ಟ ಗೋಮಾಳದ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಸ್ಥಳೀಯ ಎರಡು ಗುಂಪುಗಳು ಪವರ್ ಪ್ಲಾಂಟ್ ಪರ-ವಿರೋಧ ವ್ಯಕ್ತಪಡಿಸಿದರು.

ಯೋಜನೆಗೆ ಗುರುತಿಸಿರುವ ಸ್ಥಳ ಗೋಮಾಳ ಪ್ರದೇಶ. ಇದನ್ನು ಗೋಮಾಳವಾಗಿಯೇ ಉಳಿಸಿ ಎಂದು ಗ್ರಾಮಸ್ಥರು ಚಿನಕುರಳಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಈ ಜಾಗವನ್ನು ಗೋಮಾಳವಾಗಿಯೇ ಉಳಿಸಿ ಎಂದು ಡಿಸಿ, ಎಸಿ ಹಾಗೂ ತಹಸೀಲ್ದಾರ್‌ಗೆ ಗ್ರಾಪಂನಿಂದ ಮನವಿ ಸಲ್ಲಿಸಲಾಗಿದೆ ಎಂದರು.

ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಂದ ನಮಗೆ ಸ್ಪಷ್ಟ ಆದೇಶ ಬಂದಿಲ್ಲ. ಜಾನುವಾರಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಮೀಸಲಿರಿಸಬೇಕೆಂದು ಸರ್ಕಾರ ಹಾಗೂ ಹೈಕೋರ್ಟ್ ಆದೇಶ ಇದ್ದರೂ ಸಹ ತಾಲೂಕು ಆಡಳಿತ ಗ್ರಾಮಸ್ಥರ ಗಮನಕ್ಕೆ ತಾರದೆ, ಪ್ರಕಟಣೆ ಹೊರಡಿಸಿ 18 ಎಕರೆ ಗೋಮಾಳ ಪ್ರದೇಶವನ್ನು ಖಾಸಗಿ ವ್ಯಕ್ತಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದಾರೆ. ಸ್ಥಳೀಯ ಗ್ರಾಪಂ ಆಡಳಿತಕ್ಕೂ ಗಮನಕ್ಕೂ ತರದೆ ಕಾರ್ಯಕ್ರಮಕ್ಕೂ ಆಹ್ವಾನ ನೀಡದೆ ಶಿಷ್ಟಾಚಾರ ಉಲ್ಲಂಘಿಸಿ ತರಾತುರಿಯಲ್ಲಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಜೊತೆಗೆ ತಾಲೂಕು ಆಡಳಿತ ಜಿಲ್ಲಾಡಳಿಕ್ಕೆ ತಪ್ಪು ಮಾಹಿತಿ ರವಾನಿಸಿ ಇಲ್ಲಿ ಪವರ್ ಪ್ಲಾಂಟ್ ನಿರ್ಮಾಣ ಮಾಡುತ್ತಿದೆ. ಇಲ್ಲಿಂದ ಹೊಸ ಲೈನ್ ಮೂಲಕ ಚಿನಕುರಳಿಯ ಪವರ್ ಸ್ಟೇಷನ್‌ಗೆ ತೆಗೆದುಕೊಂಡು ಹೋಗಬೇಕು. ಇದರಿಂದ ಆ ರೈತರ ಭೂಮಿಗೂ ಅನಾನೂಕೂಲವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆ ಕೇಂದ್ರ ಸರ್ಕಾರದ ಸಹಕಾರ ಇರುವುದರಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಸ್ಥಳಕ್ಕೆ ಆಗಮಿಸಿ ಮತ್ತೊಮ್ಮೆ ಪರಿಶೀಲನೆ ನಡೆಸಿ ನಂತರ ಜಿಲ್ಲಾಧಿಕಾರಿಗಳು ಇದೇ ಜಾಗ ಸೂಕ್ತವೆಂದು ತಿಳಿಸಿದರೆ ಭೂಮಿ ಪೂಜೆ ನೆರವೇರಿಸಿ ಅಲ್ಲಿಯವರೆಗೆ ಮಾಡಬಾರದು ಎಂದು ಆಗ್ರಹಿಸಿದರು.

ಈ ಕಾರ್ಯಕ್ರಮಕ್ಕೆ ಸ್ಥಳೀಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಶಾಸಕರು ಸಮಸ್ಯೆ ಅಥೈಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ, ಸದಸ್ಯರಾದ ಸಿ.ಶಿವಕುಮಾರ್, ಸಿ.ಎ.ಲೋಕೇಶ್, ಸ್ಥಳೀಯ ಮುಖಂಡ ರಾಮಕೃಷ್ಣೇಗೌಡ ಸೇರಿದಂತೆ ಸ್ಥಳೀಯರು ಮನವಿ ಮಾಡಿದರು.

ಆದರೆ, ಶಾಸಕರ ಪರವಾದ ಇನ್ನೊಂದು ಗುಂಪು ಯಾವುದೇ ಕಾರಣಕ್ಕೂ ಭೂಮಿ ಪೂಜೆ ಮುಂದೂಡಬಾರದು ನೀವು ಭೂಮಿಪೂಜೆ ಮಾಡದೆ ಇಲ್ಲಿಂದ ತೆರಳಿದರೆ ನಾವು ನಿಮ್ಮನ್ನು ಬಿಡೋದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಎರಡು ಗುಂಪುಗಳ ನಡುವೆ ಸಾಕಷ್ಟು ಚರ್ಚೆ, ವಾಗ್ದಾದ ನಡೆದು ತಳ್ಳಾಟ, ನೂಕಾಟ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನಪಡಿಸಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ನಾನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಜೊತೆಗೆ ಎಲ್ಲಾ ದಾಖಲೆಗಳು ಸೂಕ್ತವಾಗಿದೆ. ಇಲ್ಲಿ ಪವರ್ ಪ್ಲಾಂಟ್ ನಿರ್ಮಾಣ ಮಾಡಲು ಸೂಕ್ತ ಜಾಗವೆಂದು ಜಿಲ್ಲಾಧಿಕಾರಿಗಳು ಗುರುತಿಸಿದ್ದಾರೆ. ಎಲ್ಲಾ ಇಲಾಖೆಗಳಿಂದ ಕ್ಲಿಯರೆನ್ಸ್ ಇದೆ. ಹಾಗಾಗಿ ಭೂಮಿ ಪೂಜೆ ಮಾಡದೆ ಹೋದರೆ ಸೂಕ್ತವಲ್ಲ ಎಂದರು.

ಮತ್ತೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸೋಣ ಅಲ್ಲಿಯವರೆಗೆ ಕಾಮಗಾರಿ ಆರಂಭಿಸಲ್ಲ. ಸದ್ಯಕ್ಕೆ ಭೂಮಿ ಪೂಜೆ ಮಾಡುತ್ತೇವೆ, ಚರ್ಚಿಸಿ ತೀರ್ಮಾನಿಸಿದ ಬಳಿಕ ಕಾಮಗಾರಿ ಆರಂಭವಿಸುತ್ತೇವೆ ಎಂದರು. ಈ ವೇಳೆ ಸಾಕಷ್ಟು ತೀವ್ರ ವಿರೋಧ ವ್ಯಕ್ತಪಡಿಸಿದರು. ಬಳಿಕ ಶಾಸಕರು ಯಾವ ವಿರೋಧಕ್ಕೂ ಲೆಕ್ಕಿಸದೆ ಪೊಲೀಸರ ರಕ್ಷಣೆಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಭೂಮಿ ಪೂಜೆ ಮಾಡಿದ್ದನ್ನು ವಿರೋಧಿಸಿ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಎಲ್ಲಾ ಸದಸ್ಯರು, ಸ್ಥಳೀಯ ರೈತರು, ಸಾರ್ವಜನಿಕರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿ ತಾಲೂಕು ಆಡಳಿತ, ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.

ಸರ್ಕಾರ ಹಾಗೂ ಹೈಕೋರ್ಟ್ ಆದೇಶವಿದ್ದರೂ ತಾಲೂಕು ಆಡಳಿತ ಶಾಸಕರು, ಜಿಲ್ಲಾಡಳಿಕ್ಕೆ ತಪ್ಪು ಮಾಹಿತಿ ರವಾನಿಸಿದೆ. ಭೂಮಿ ಪೂಜೆಗೆ ಸ್ಥಳೀಯ ಗ್ರಾಪಂ ಅಧ್ಯಕ್ಷೆ, ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ದಲಿತ ಮಹಿಳೆ ಎಂಬ ಕಾರಣಕ್ಕೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರೋಪಿಸಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟ ಹಿಡಿದು ಸ್ಥಳೀಯರು ಪ್ರತಿಭಟನೆ ನಡೆಸಿದರು.

ಬಳಿಕ ಪೊಲೀಸರ ಮನವಿಗೆ ಸ್ಪಂದಿಸಿ ಪ್ರತಿಭಟನಕಾರರು ಪ್ರತಿಭಟನೆ ವಾಪಸ್ ಪಡೆದು ಮುಂದಿನ ದಿನಗಳಲ್ಲಿ ನಮ್ಮ ನಾಯಕರೊಂದಿಗೆವ ಚರ್ಚಿಸಿ ಹೋರಾಟದ ರೂಪುರೇಷ ರೂಪಿಸಲಾಗುವುದು ಎಂದರು.ಸೋಲಾರ್ ಪ್ಲಾಂಟ್ ಪ್ಲವರ್ ನಿರ್ಮಾಣಕ್ಕೆ ಪಿಎಂ ಕುಸುಮ್ ಯೋಜನೆಯ ಅಧಿಕಾರಿಗಳು ಮೂರು ನಾಲ್ಕು ಕಡೆ ಜಾಗ ಪರಿಶೀಲಿಸಿ ಕನಗನಹಳ್ಳಿ ಜಾಗ ಸೂಕ್ತವೆಂದು ಗುರುತಿಸಿದ್ದಾರೆ. ಅದರ ಪ್ರಕಾರ ದಾಖಲೆ ನಿರ್ಮಿಸಿಕೊಂಡು ಭೂಮಿ ಪೂಜೆ ನೆರವೇರಿಸುತ್ತಿದ್ದೇವೆ. ಈಗ ಭೂಮಿ ಪೂಜೆ ಮಾಡಿ ಡಿಸಿಯಿಂದ ಆದೇಶ ಬರುವವರೆಗೂ ಕಾಮಗಾರಿ ಆರಂಭಿಸಬೇಡಿ ಎಂದು ಗುತ್ತಿಗೆದಾರರು ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿಯೇ ಕಾಮಗಾರಿ ಆರಂಭಿಸುತ್ತೇವೆ.

- ದರ್ಶನ್‌ ಪುಟ್ಟಣ್ಣಯ್ಯ, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ
ಫೆಬ್ರವರಿಯಿಂದ ರಾಜ್ಯದಲ್ಲಿ ಎಸ್‌ಐಆರ್‌?