- ಹಲ್ಲರೆ ಗ್ರಾಮದ ಪ್ರಕರಣ ಖಂಡನೆಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರವಾಗಿ ದಲಿತರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.ಪಟ್ಟಣದ ಮಿನಿವಿಧಾನಸೌಧದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ತಾಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ ವಿವಿಧ ದಲಿತಪರ ಸಂಘಟನೆಯ ಕಾರ್ಯಕರ್ತರು, ಮಹಿಳೆಯರು, ಸುತ್ತಮುತ್ತಲಿನ ತಾಲೂಕಿನ ದಲಿತರು ತಾಲೂಕು ಆಡಳಿತ ವೈಫಲ್ಯದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪ್ರತಿಭಟನಕಾರರು ಪಾಲ್ಗೊಂಡು ತಮ್ಮ ಆಕ್ರೋಶ ಹೊರ ಹಾಕುವ ಮೂಲಕ ಘಟನೆಗೆ ಕಾರಣರಾದ ಪೊಲೀಸರು ಮತ್ತು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಹಲ್ಲರೆ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸಲು ವಿರೋಧ ವ್ಯಕ್ತಪಡಿಸುವ ಜತೆಗೆ ಪರಿಶಿಷ್ಟ ಜಾತಿಯವರ ಬಡಾವಣೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಮಹಿಳೆಯರು, ವೃದ್ಧರ ಮೇಲೂ ಹಲ್ಲೆ ನಡೆಸಿದ್ದಾರೆ. ಹಲವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಬೈಕ್ ಗಳು ಹಾಗೂ ಮನೆಯ ಛಾವಣಿಗಳನ್ನು ಹಾಳುಗೆಡುವ ಮೂಲಕ ವಿಕೃತಿ ತೋರಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಂಬೇಡ್ಕರ್ ನೀಡಿರುವ ಮೀಸಲಾತಿ ಪಡೆಯುವ ಪ. ಪಂಗಡದವರು ಅಂಬೇಡ್ಕರ್ ಅವಮಾನಿಸಿರುವುದು ಅವರ ಹೇಡಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹರಿಹಾಯ್ದರು.
ಇನ್ನು ನಾಮಫಲಕ ಅಳವಡಿಸುವ ಸಂಬಂಧ ಗಲಭೆ ನಡೆಯುವ ಮುನ್ನಾ 5 ದಿನಗಳ ಮುಂಚಿತವಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿರುವುದು ಪೊಲೀಸರು ಹಾಗೂ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸಹ ಪರಿಸ್ಥಿತಿಯನ್ನು ತಹಬದಿಗೆ ತರುವಲ್ಲಿ ಅಲ್ಲಿನ ಗ್ರಾಪಂ ಪಿಡಿಒ ಮಹೇಶ್ ಹಾಗೂ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ವಿಫಲರಾಗಿದ್ದಾರೆ. ಕೂಡಲೇ ಈ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದರು.ಗಲಭೆಯಿಂದಾಗಿ ಪ. ಜಾತಿಯ ಬಡಾವಣೆಗಳಲ್ಲಿ ಹಲವರ ಮನೆಗಳು ಹಾಗೂ ಬೈಕ್ ಗಳು ಜಖಂಗೊಂಡಿವೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸರ್ಕಾರದ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಪ್ರಕರಣದಲ್ಲಿ ಪ. ಜಾತಿಗೆ ಸೇರಿದ ಅಮಾಯಕರ ಮೇಲೂ ಕೇಸ್ ದಾಖಲಿಸಲಾಗಿದ್ದು, ಕೂಡಲೇ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ನಂದಿನಿ ಆಗಮಿಸಿದ್ದರು. ಆದರೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಖುದ್ದು ಆಗಮಿಸಿ ನಮ್ಮ ಅಹವಾಲು ಆಲಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.ಈ ವೇಳೆ ಮಾತನಾಡಿದ ಎಎಸ್ಪಿ ಡಾ.ನಂದಿನಿ ಹಲ್ಲರೆ ಗ್ರಾಮದಲ್ಲಿ ಗಲಭೆ ನಡೆದ ಅರ್ಧ ಗಂಟೆಯಲ್ಲೇ ಗಲಾಟೆಗೆ ಕಾರಣರಾದ ಹಲವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾನೂನು ರೀತ್ಯಾ ಯಾವೆಲ್ಲ ಕ್ರಮ ಜರುಗಿಸಬಹುದೋ ಎಲ್ಲವನ್ನು ಇಲಾಖೆಯು ಮಾಡಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಮಾತನಾಡಿ, ನಿಮ್ಮೆಲ್ಲರ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ನಮ್ಮ ಬೇಡಿಕೆಗಳನ್ನು ಮೂರು ದಿನಗಳ ಗುಡುವಿನೊಳಗೆ ಇತ್ಯರ್ಥ ಮಾಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಮಲ್ಲೇಶ್, ನಾರಾಯಣ, ಸುರೇಶ್, ಬಸವಣ್ಣ, ಮಂಜು, ಮಾಜಿ ಮೇಯರ್ ಪುರುಷೋತ್ತಮ್, ತಾಪಂ ಮಾಜಿ ಅಧ್ಯಕ್ಷ ಬಿ.ಎಂ. ನಾಗೇಶ್ ರಾಜ್, ಬಿ.ಎಸ್. ರಾಮು, ಚಂದ್ರು, ಚಿಕ್ಕಣ್ಣ, ರಾಜೇಶ್, ನಾಗೇಂದ್ರ, ರಾಮಣ್ಣ, ಸಂದೇಶ್ ಸೇರಿದಂತೆ ಸಾವಿರಾರು ದಲಿತರು ಮತ್ತು ಹಲ್ಲರೆ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಇದ್ದರು.