ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ಪಕ್ಷದ ವರಿಷ್ಠರ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.ಪಕ್ಷದ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಯಾರ್ಯಾರಿಗೆ ಏನು ಹೇಳಬೇಕೋ ಅದನ್ನು ಹೇಳಿ ಹೋಗಬೇಕು. ಕೇಂದ್ರದಿಂದ ತಂಡವೊಂದು ಆಗಮಿಸಿ ಈಗ ಬೇಸರಗೊಂಡಿರುವ ಮುಖಂಡರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಕ್ಷದಲ್ಲಿ ಸಮಾಲೋಚನೆಗೆ ಆದ್ಯತೆ ನೀಡಬೇಕಾಗಿದೆ. ಆದರೆ, ಕರ್ನಾಟಕಲ್ಲಿ ಬಿಜೆಪಿಗೆ ಹೇಳುವವರು ಕೇಳುವವರು ಯಾರೂ ಇಲ್ಲ. ಸರ್ವಾಧಿಕಾರಿ ಮನೋಭಾವ ಬಿಜೆಪಿಯಲ್ಲಿ ಬಂದಿದೆ ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಹೀಗಾಗಿ ಸರ್ವಾಧಿಕಾರಿ ಧೋರಣೆ ದೂರ ಆಗಬೇಕು ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.ಬುಧವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ತುಂಬಾ ಬೇಸರದಿಂದ ಈ ಪತ್ರಿಕಾಗೋಷ್ಠಿ ಮಾಡುತ್ತಿದ್ದೇನೆ. ಬಿಜೆಪಿ ಹಿತದೃಷ್ಟಿಯಿಂದ ಮಾಡುತ್ತಿದ್ದೇನೆ. ಅನಿವಾರ್ಯ ಸಮಯದಲ್ಲಿ ಇಂಥ ಪತ್ರಿಕಾಗೋಷ್ಠಿ ಅವಶ್ಯಕತೆ ಇದೆ ಎಂದು ಸಮರ್ಥಿಸಿಕೊಂಡರು.
ಪಕ್ಷದಲ್ಲಿ ಕೆಲವೊಂದು ತೀರ್ಮಾನಗಳು ಏಕಪಕ್ಷೀಯವಾಗಿ ನಡೆಯುತ್ತಿವೆ. ಇದು ಸರಿಯಲ್ಲ ಕ್ರಮವಲ್ಲ. ಸಮಾಲೋಚನೆ ನಡೆಸಬೇಕಾಗಿದೆ. ಪಕ್ಷದ ಕೆಲವರಿಗೆ ಚರ್ಚೆ ಮಾಡದೆ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಭಾವನೆ ಬಂದಿದೆ. ಇದನ್ನು ಹೋಗಲಾಡಿಸಬೇಕಾಗಿದೆ. ಸರ್ವಾಧಿಕಾರಿ ಧೋರಣೆ ಅನುಸರಿಸಿದರೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಎಂತಹ ಸನ್ನಿವೇಶಗಳನ್ನು ಎದುರಿಸಿದರು ಎಂಬುದನ್ನು ಗಮನಿಸಿದ್ದೇವೆ. ಇದಕ್ಕೆ ಆಸ್ಪದ ನೀಡಬಾರದು ಎಂದು ಹೇಳಿದರು.ರಾಜ್ಯದಲ್ಲಿ ಹೊಸ ಘಟಕ ರಚನೆಯಾಗಿದೆ. ಪಕ್ಷದ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ, ಪದಾಧಿಕಾರಿಗಳ ನೇಮಕ ಎಲ್ಲವೂ ನಡೆದಿದೆ. ಆದರೂ ಪಕ್ಷದ ಆಂತರಿಕ ವ್ಯವಸ್ಥೆ ಸರಿಹೋಗಿಲ್ಲ. ಡಜನ್ಗಟ್ಟಲೇ ವ್ಯಕ್ತಿಗಳು ಪಕ್ಷದ ಪ್ರಮುಖ ಸ್ಥಾನದಲ್ಲಿರುವವರ ಕುರಿತು ನಿರಂತವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ಪ್ರಮುಖರು ಯಾರೂ ಪ್ರಶ್ನಿಸುತ್ತಿಲ್ಲ. ಚುನಾವಣೆಯಲ್ಲಿ ಹೊಂದಾಣಿಕೆ ಆಗಿದೆ ಎನ್ನುವ ಆರೋಪದ ಬಗ್ಗೆಯೂ ಚರ್ಚೆ ಆಗಬೇಕಿತ್ತು. ಅದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮನಬಂದಂತೆ ಹೇಳಿಕೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯತೆ ಇದೆ. ಇದಕ್ಕಾಗಿ ಕೇಂದ್ರದ ತಂಡದವರು ರಾಜ್ಯಕ್ಕೆ ಆಗಮಿಸಿ ಅಸಮಾಧಾನಿತರ ಅಭಿಪ್ರಾಯಗಳನ್ನು ಕೇಳಲು ವೇದಿಕೆ ಕಲ್ಪಿಸಬೇಕು. ಈ ಬಗ್ಗೆ ರಾಜ್ಯಾಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಗುರುವಾರದ ಪಕ್ಷದ ಪ್ರಮುಖರ ಸಭೆ ನಡೆಯಲಿದ್ದು, ಸಭೆಯಲ್ಲಿ ಪಕ್ಷದಲ್ಲಿನ ಬೆಳವಣಿಗೆ ಕುರಿತು ಪ್ರಸ್ತಾಪಿಸಲಾಗುವುದು. ವಿಭಜಿತ ಬಿಜೆಪಿಗೆ ಜನರು ಆಶೀರ್ವಾದ ಮಾಡುವುದಿಲ್ಲ. ಪಕ್ಷದಲ್ಲಿ ಅಶಿಸ್ತು ಮೂಡಿದರೆ ಅದು ಕೆಳಹಂತದಲ್ಲಿ ಪರಿಣಾಮ ಬೀರಲಿದೆ. ಕಾರ್ಯಕರ್ತರಿಗೆ ಕಷ್ಟವಾಗಲಿದ್ದು, ಎದುರಾಳಿಗೆ ತಕ್ಕ ಉತ್ತರ ನೀಡಲಾಗುವುದಿಲ್ಲ. ಪಕ್ಷದ ಪ್ರಮುಖರು ಸುಮ್ಮನೆ ಕುಳಿತರೆ ಅದು ಬಂಡಾಯ ಮಾಡಲು ಬೇರೆಯವರಿಗೆ ಪ್ರೇರಣೆಯಾಗಲಿದೆ. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕೆಲವರು ಮಾಧ್ಯಮದ ಮೂಲಕ ಹೇಳಿಕೆಗಳನ್ನು ನೀಡಿ ತಾವೇ ನಾಯಕರು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮನಬಂದಂತೆ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ನ ಆಡಳಿತವು ಸಂಪೂರ್ಣ ವಿಫಲಗೊಂಡಿದೆ. ಇದರ ವಿರುದ್ಧ ಬಿಜೆಪಿಯಲ್ಲಿ ಒಂದೇ ಧ್ವನಿಯಲ್ಲಿ ಹೋರಾಟ ನಡೆಸಿದರೆ ಮನೆಯಿಂದ ಹೊರಬರಲು ಸಚಿವರಿಗೆ ನಡುಕ ಉಂಟಾಗುತ್ತದೆ. ಅಶಿಸ್ತು ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ಧ ಕಾರ್ಯಾಚರಣೆ ಮಾಡುವ ತಾಕತ್ತೇ ಇಲ್ಲ ಎಂಬ ವ್ಯವಸ್ಥೆ ಬಿಂಬಿಸಲಾಗುತ್ತದೆ. ಇದು ಪಕ್ಷದ ಮೇಲೆ ದೊಡ್ಡಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ತಿಳಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರ ಸಂಘಟನೆ ಬಲವಾಗಿರುವ ಕ್ಷೇತ್ರ. ನಾನು ಅಲ್ಲಿ ಕಾರ್ಯಕ್ರಮವೊಂದರ ನಿಮಿತ್ತ ಹೋಗಿದ್ದೆ. ಅಲ್ಲಿದ್ದ ಕಾರ್ಯಕರ್ತರ ದಂಡು ಬಿಜೆಪಿ ಪರಿಸ್ಥಿತಿ ಇಂದು ಹೇಗಾಗಿದೆ? ಬಿಜೆಪಿ ಹೊಸ ಘಟಕ ಆಗಿದೆ. ಪದಾಧಿಕಾರಿಗಳ ಪಟ್ಟಿ ಕೂಡ ಆಗಿದೆ. ಆದರೆ ಪಾರ್ಟಿಯ ಆಂತರಿಕ ವ್ಯವಸ್ಥೆ ಸರಿ ಯಾಕೆ ಸರಿ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಪಕ್ಷದಲ್ಲಿ ಜವಾಬ್ದಾರಿ ಇರುವ ನಾಯಕರು ಮಾತಾಡುತ್ತಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ಯಾಕೆ ಮಾತಾಡುತ್ತಿಲ್ಲ. ಇದರಿಂದ ಕಾರ್ಯಕರ್ತರು ಮಾತನಾಡುವುದಕ್ಕೆ ಆಗುತ್ತಿಲ್ಲ. ಬಿಜೆಪಿಯನ್ನು ಕುಲಗೆಡಿಸುವುದಕ್ಕೆ ಬೇರೆ ಪಕ್ಷದಿಂದ ಸಾಧ್ಯವಿಲ್ಲ. ಹತ್ತು ಹಲವು ಪಕ್ಷ ವಿರೋಧ ಮಾಡುತ್ತಿರುವವರೇ ಸಾಕು ಎಂದು ಗೌಡರು ಮಾರ್ಮಿಕವಾಗಿ ಹೇಳಿದರು.ನಾನು ಯಾರ ಹೆಸರರನ್ನೂ ಹೇಳುವುದಿಲ್ಲ. ರಾಜ್ಯಾಧ್ಯಕ್ಷರ ಆಯ್ಕೆ ಆದ ಮೇಲೂ ಸರಿಯಾಗಿಲ್ಲ. ಕೇಂದ್ರ ನಾಯಕರು ಕೂಡ ಸುಮ್ಮನೆ ಕುಳಿತಿದ್ದಾರೆ. ಕೇಂದ್ರ ನಾಯಕರು ನಿಮ್ಮನ್ನೆಲ್ಲ ಕೂರಿಸಿ ಮಾತನಾಡಿದ್ದಾರಾ ಎಂದು ಕಾರ್ಯಕರ್ತರು ಕೇಳುತ್ತಾರೆ. ಹೊಸ ತಂಡ ಮಾಡುವಾಗ ನಿಮ್ಮ ಜೊತೆ ಸಮಾಲೋಚನೆ ಸಮಾಲೋಚನೆ ಮಾಡಬೇಕಿತ್ತು ಎಂದಿದ್ದಾರೆ. ಅದೆಲ್ಲಾ ಆಗಿಲ್ಲ. ನನಗೆ ತೀರಾ ನೋವಾಗುತ್ತದೆ. ಇನ್ನೂ ಕೂಡ ಕೇಂದ್ರ ನಾಯಕರು ಮಾತನಾಡುತ್ತಿಲ್ಲ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸದಾನಂದಗೌಡರು, ಯತ್ನಾಳ್ ಅವರನ್ನು ಹಿಂದೆ ಅಮಾನತು ಮಾಡಿದ್ದೇವೆ. ಆದರೆ ಯಡಿಯೂರಪ್ಪ ಒತ್ತಡದಿಂದ ಮತ್ತೆ ಸೇರಿಸಿಕೊಂಡಿದ್ದೇವೆ. ಅದಕ್ಕಾಗಿ ಈಗ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದರು.ಜಿಲ್ಲಾಧ್ಯಕ್ಷರ ಆಯ್ಕೆ: 60 ಜನರ ತಂಡ ರಚಿಸಿದ ವಿಜಯೇಂದ್ರಪಕ್ಷದ ನೂತನ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿಯ 60 ಜನರ ತಂಡ ರಚಿಸಲಾಗಿದೆ.
ಈ ತಂಡ ಎರಡು ದಿನಗಳ ಕಾಲ ಆಯಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಈಗಿನ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಸಂಸದರು, ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಲಿದೆ. ಆ ಅಭಿಪ್ರಾಯವನ್ನು ಆಧರಿಸಿ ನೇಮಕ ಮಾಡಲಾಗುತ್ತದೆ.ಬುಧವಾರ ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಈ 60 ಜನರ ತಂಡಗಳು ಏಕಕಾಲಕ್ಕೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿವೆ ಎಂದು ತಿಳಿಸಿದರು.ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೂತನ ರಾಜ್ಯ ಪದಾಧಿಕಾರಿಗಳ ಮೊದಲ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ನೇಮಕ ಸಂಬಂಧ ಸಮಾಲೋಚನೆ ನಡೆಸಲಾಗಿದೆ. ಬಳಿಕ ನೇಮಕಾತಿ ಮಾಡಲಾಗುವುದು. ಶೀಘ್ರದಲ್ಲಿಯೇ ಈ ಕಾರ್ಯವನ್ನು ಪೂರೈಸಲಾಗುವುದು ಎಂದರು.ವಿಜಯೇಂದ್ರ ಅವರು ಮೊದಲ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆ ಕುರಿತು ಚರ್ಚಿಸಿದರು. ಚುನಾವಣೆ ಮುಗಿಯುವವರೆಗೆ ಯಾವೊಬ್ಬ ಪದಾಧಿಕಾರಿಯೂ ವಿಶ್ರಾಂತಿ ಪಡೆಯುವಂತಿಲ್ಲ. ಚುನಾವಣೆಯ ಗೆಲುವಿನೊಂದಿಗೆ ಮನೆಗೆ ವಾಪಸ್ ಬರುವಂತೆ ತಿಳಿಸಿದ್ದಾರೆ. ಅಲ್ಲಿಯವರೆಗೆ ನಿರಂತರ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸಲು ಸೂಚಿಸಿದ್ದಾರೆ. ಹಿರಿಯರು, ಬೂತ್ ಕಾರ್ಯಕರ್ತರು, ವರಿಷ್ಠರನ್ನು ಸಮಾನವಾಗಿ ನೋಡುವ ಮನಸ್ಥಿತಿ ಹೊಂದಿರಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಮಾಡದೆ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎಂದಿದ್ದಾರೆ ಎಂದು ಹೇಳಿದರು.ಪದಾಧಿಕಾರಿಗಳಿಗೆ ನಿಗದಿತ ಟಾಸ್ಕ್ವಿಕಸಿತ ಭಾರತ ಸಂಕಲ್ಪ ಯಾತ್ರೆ ಮತ್ತು ನಮೋ ಆ್ಯಪ್ನಲ್ಲಿ ಪ್ರತಿಯೊಬ್ಬ ಪದಾಧಿಕಾರಿಗೆ ನಿಗದಿತ ಟಾಸ್ಕ್ ಕೊಡಲಾಗಿದೆ. ತಳಮಟ್ಟದಲ್ಲಿ ಸಂಘಟನೆ ಬಲಪಡಿಸುವ ಕುರಿತು ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಫಲಾನುಭವಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಬೇಕು. ಕೇಂದ್ರದ ಯೋಜನೆಗಳಿಂದ ವಂಚಿತರಾದವರನ್ನು ಯೋಜನೆಗಳ ವ್ಯಾಪ್ತಿಯೊಳಗೆ ತರುವ ಕೆಲಸ ಮಾಡಬೇಕು ಎಂದು ರಾಜೀವ್ ತಿಳಿಸಿದರು.