ಕನ್ನಡಪ್ರಭ ವಾರ್ತೆ ಸುರಪುರ
ಸೀನಿಯರ್ ಪ್ಲಟೂನ್ ಕಮಾಂಡರ್, ಗೃಹ ರಕ್ಷಕದಳ, ಸುರಪುರ ಘಟಕದ ವೆಂಕಟೇಶ್ವರ ಡಿ. ಸುರಪುರ ಅವರ ಪ್ರಾಮಾಣಿಕ ಸೇವೆ ಪರಿಗಣಿಸಿ ಬೆಂಗಳೂರಿನ ಜಯನಗರ ಅಗ್ನಿಶಾಮಕ ದಳದ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಗೃಹಮಂತ್ರಿ ಡಾ. ಜಿ.ಪರಮೇಶ್ವರ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದರು.
ಕೃಷ್ಣಾ ನದಿ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಜನರ ಆಸ್ತಿ-ಪಾಸ್ತಿ ಹಾಗೂ ಜಾನುವಾರಗಳನ್ನು ರಕ್ಷಿಸಿದ್ದಾರೆ. ಪಥಸಂಚಲನದ ಪರೇಡ್ ಕಮಾಂಡರಾಗಿ ಕರ್ತವ್ಯ ನಿರ್ವಹಿಸಿದ ಇವರು 2023ರಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸ್ ಅಧೀಕ್ಷಕರಿಂದ ಪ್ರಶಂಸಾ ಪತ್ರ ಪಡೆದಿದ್ದಾರೆ. ಇವರ ಸೇವೆ ಗುರುತಿಸಿ ಕರ್ನಾಟಕ ಸರ್ಕಾರವು 2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ. ವೆಂಕಟೇಶ್ವರಗೆ ಮುಖ್ಯಮಂತ್ರಿ ಚಿನ್ನದ ಪದಕ ಬಂದಿದ್ದು, ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿವೆ.