‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಜನಮಾನಸಕ್ಕೆ ಅತ್ಯಂತ ಅವಶ್ಯಕ: : ಕೋಟಾ ಶ್ರೀನಿವಾಸ ಪೂಜಾರಿ

KannadaprabhaNewsNetwork | Published : Jan 17, 2024 1:48 AM

ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿ ಹಾಗೂ ಬ್ಯಾಂಕ್ ಆಪ್ ಬರೋಡ ಸಿದ್ಧಕಟ್ಟೆ ಶಾಖೆಯ ಆಶ್ರಯದಲ್ಲಿ ಮಂಗಳವಾರ ರಾಯಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ದೇಶದ ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಸದುದ್ದೇಶ ಹಾಗೂ 2047 ರ ಹೊತ್ತಿಗೆ ಭಾರತ ಆರ್ಥಿಕವಾಗಿ ಸದೃಢವಾಗಬೇಕೆಂಬ ಸಂಕಲ್ಪದೊಂದಿಗೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಗ್ರಾಮೀಣ ಭಾಗದ ಜನಮಾನಸಕ್ಕೆ ಅತ್ಯಂತ ಅವಶ್ಯಕ ಮತ್ತು ಪ್ರಯೋಜನಕಾರಿಯಾಗಿದೆ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿ ಹಾಗೂ ಬ್ಯಾಂಕ್ ಆಪ್ ಬರೋಡ ಸಿದ್ಧಕಟ್ಟೆ ಶಾಖೆಯ ಆಶ್ರಯದಲ್ಲಿ ಮಂಗಳವಾರ ರಾಯಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು‌ ಮಾತನಾಡಿದರು.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು‌ ಎಲ್ಲಕ್ಕಿಂತ ದೇಶ ಮೊದಲು ಎಂಬ ಪ್ರಧಾನ ಮಂತ್ರಿಗಳ ಕಲ್ಪನೆಯು ಸಾಕಾರಗೊಳ್ಳಲು ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡುವುದರೊಂದಿಗೆ ದೇಶದ ಪ್ರಗತಿಗೆ ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಯಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು ಸಂಕಲ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ವೇಳೆ ಎಸ್.ಎಸ್.ಎಲ್‌.ಸಿ. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅಕ್ಷಯ್ ಕುಮಾರ್, ಮೋಕ್ಷ ಹಾಗೂ ಘನತ್ಯಾಜ್ಯ ಘಟಕದ ಸಿಬ್ಬಂದಿಗಳಾದ ಅಕ್ಷತಾ, ಧನವತಿ, ರಾಯಿ ಅಂಗನವಾಡಿಯ ಆರೋಗ್ಯವಂತ ಮಗು ದೈವಿಕ್ ಅವರನ್ನು ಗೌರವಿಸಲಾಯಿತು.

ಅದೇ ರೀತಿ ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿ ನೇಮಕರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ದ.ಕ.ಜಿಲ್ಲಾ ಬಿಜೆಪಿ‌ ಅಧ್ಯಕ್ಷರಾಗಿ ಆಯ್ಕೆಗೊಂಡ ಸತೀಶ್ ಕುಂಪಲ‌ ಅವರನ್ನು ಅಭಿನಂದಿಸಲಾಯಿತು.

ಅಂಗನವಾಡಿ ಮೇಲ್ವಿಚಾರಕಿ ನೀತಾ ಪೌಷ್ಟಿಕಾಹಾರ, ಮಾತೃವಂದನದ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಕುರಿತು ಅನುಷಾ ಮಾಹಿತಿ ನೀಡಿದರು.

ಗ್ರಾ. ಪಂ. ಉಪಾಧ್ಯಕ್ಷೆ ಗುಣವತಿ, ಬ್ಯಾಂಕ್ ಅಧಿಕಾರಿ ಸುರೇಶ್ ಸಿಂಗ್, ಸಿದ್ದಕಟ್ಟೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಗ್ರಾ.ಪಂ. ಆರೋಗ್ಯ ಸಿಬ್ಬಂದಿ ಸುನೀತಾ, ಗ್ರಾ.ಪಂ. ಸದಸ್ಯರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ, ಉಷಾ, ಯಶೋಧ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧರ್ಮರಾಜ್ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.