ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದ ಶ್ರೀ ಬಂಕನಾಥ ದೇವಾಲಯದ ಲೋಕಾರ್ಪಣೆ, ಶಿವಲಿಂಗ ಹಾಗೂ ನಂದಿಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣದ ಪ್ರಥಮ ಪ್ರಕಟಣೆಯನ್ನು ಹಿರಿಯ ಸಾಹಿತಿ ಅಂದಾನಸ್ವಾಮಿ ಆದವಾನಿಮಠ ಬಿಡುಗಡೆಗೊಳಿಸಿದರು.
೧೯೩೩ರಲ್ಲಿ ಬಂಕಾಪುರ ಇತಿಹಾಸಕ್ಕೆ ಮೆರಗು ನೀಡುವ ಬಂಕನಾಥಸ್ವಾಮಿ ದೇವಸ್ಥಾನ ನಶಿಸಿಹೋಗುತ್ತಿರುವುದನ್ನು ಅರಿತ ಆಗಿನ ಸಜ್ಜನಗೌಡ್ರ ಮನೆತನದ ಹಿರಿಯರು ತಕ್ಕಮಟ್ಟಿಗೆ ದೇವಸ್ಥಾನವನ್ನು ನಿರ್ಮಾಣ ಮಾಡಿ, ಅದರ ಪೂಜೆಗಾಗಿ ದೇವಸ್ಥಾನದ ಎದುರಿಗೆ ಕಲ್ಯಾಣಿ ನಿರ್ಮಿಸಿ, ಪ್ರತಿದಿನ ಅದರ ಜಲದಿಂದ ಅಭಿಷೇಕ, ಪೂಜೆಯನ್ನು ಮಾಡಿಕೊಂಡು ಬಂದಿದ್ದರು. ಶ್ರೀ ಬಂಕನಾಥ ಸ್ವಾಮಿಯ ಪೂಜೆಗೆಂದು ನಿರ್ಮಿಸಿದ ಫವಿತ್ರ ಕಲ್ಯಾಣಿಯಲ್ಲಿ ಈಗ ಕೊಳಚೆ ನೀರು ತುಂಬಿಕೊಂಡಿದೆ ಎಂದರು.
ಈಗ ನಿರ್ಮಾಣಗೊಂಡ ಬಂಕನಾಥಸ್ವಾಮಿ ದೇವಸ್ಥಾನದ ಲೋಕಾರ್ಪಣೆಯನ್ನು ಫೆ. ೭ರಿಂದ ಫೆ. ೧೦ರ ವರೆಗೆ ವಿಜೃಂಭಣೆಯಿಂದ ಮಾಡಲು ತೀರ್ಮಾನಿಸಲಾಗಿದೆ. ಈ ಒಂದು ಐತಿಹಾಸಿಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಮಸ್ತ ಬಂಕಾಪುರದ ಜನತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ವಕೀಲ ಜಿ.ಐ. ಸಜ್ಜನಗೌಡ್ರ, ಎಸ್.ಬಿ. ಆದವಾನಿಮಠ, ಸುರೇಶ ಮುರಿಗೆಣ್ಣವರ, ಮಾಲತೇಶ ಕೊಣನಕೇರಿ, ಬಸವರಾಜ ಉಳ್ಳಾಗಡ್ಡಿ, ಚನ್ನಪ್ಪ ಮಾ.ಪ. ಶೆಟ್ಟರ, ಅನಿಲ ಮುರಿಗೆಣ್ಣವರ, ಸಂಗಪ್ಪ ಮುರಿಗೆಣ್ಣವರ, ರೇಣುಕಪ್ಪ ಕೋಟಿಗೌಡ್ರ, ಸದಾನಂದ ಶೆಟ್ಟರ, ಕೆಂಪಯ್ಯ ಆದವಾನಿಮಠ, ಅಭಿಷೇಕ ಛಬ್ಬಿ ಉಪಸ್ಥಿತರಿದ್ದರು.ಕಾರ್ಯಕ್ರಮದ ರೂಪುರೇಷೆ ಹಾಕಿಕೊಳ್ಳಲು ಡಿ. ೩೦ರಂದು ಸಂಜೆ ೬ ಗಂಟೆಗೆ ಶ್ರೀ ಬಂಕನಾಥಸ್ವಾಮಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಮಸ್ತ ಪಟ್ಟಣದ ಜನತೆ ಆಗಮಿಸಿ, ತಮ್ಮ ಸಲಹೆ-ಸೂಚನೆ ನೀಡಬೇಕು ಎಂದು ವಕೀಲ ಜಿ.ಐ. ಸಜ್ಜನಗೌಡ್ರ ಹೇಳಿದರು.