ಕರ್ತವ್ಯ ನಿರ್ವಹಿಸುತ್ತಿದ್ದ ಪಶು ವೈದ್ಯೆ ನೀರಾನೆ ದಾಳಿಯಿಂದ ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ನಡೆದಿದೆ. ಬೆಂಗಳೂರಿನ ಸಕಲವಾರ ಗ್ರಾಮದ ನಿವಾಸಿ ಡಾ। ಸಮೀಕ್ಷಾ ರೆಡ್ಡಿ (27) ಮೃತರು. ಡಾ। ಸಮೀಕ್ಷಾ ರೆಡ್ಡಿ ಅವರು ಫೆ.1ರಂದು ನೇಮಕಗೊಂಡು ಮೃಗಾಲಯದ ಪಶುವೈದ್ಯರಿಂದ ತರಬೇತಿ ಪಡೆಯುತ್ತಿದ್ದರು

ಶಿವಮೊಗ್ಗ : ಕರ್ತವ್ಯ ನಿರ್ವಹಿಸುತ್ತಿದ್ದ ಪಶು ವೈದ್ಯೆ ನೀರಾನೆ ದಾಳಿಯಿಂದ ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ನಡೆದಿದೆ.

ಬೆಂಗಳೂರಿನ ಸಕಲವಾರ ಗ್ರಾಮದ ನಿವಾಸಿ ಡಾ। ಸಮೀಕ್ಷಾ ರೆಡ್ಡಿ (27) ಮೃತರು. ಡಾ। ಸಮೀಕ್ಷಾ ರೆಡ್ಡಿ ಅವರು ಫೆ.1ರಂದು ನೇಮಕಗೊಂಡು ಮೃಗಾಲಯದ ಪಶುವೈದ್ಯರಿಂದ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ 10.30ರ ಸುಮಾರಿಗೆ ಅವರು ಸನ್ ಕಾನರ್‌ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ಬಳಿಕ ರಾತ್ರಿ 11.45ರ ಸುಮಾರಿಗೆ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಅದರ ಆವರಣದ ಒಳಗೆ ಹೋದಾಗ, ನೀರಾನೆ ಹಠಾತ್ತಾಗಿ ಅವರ ಮೇಲೆ ದಾಳಿ ಮಾಡಿದೆ.

ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉನ್ನತ ಮಟ್ಟದ ತನಿಖೆಗೆ ಖಂಡ್ರೆ ಆದೇಶ

ನೀರಾನೆ ದಾಳಿಯಿಂದ ಸಮೀಕ್ಷಾ ಮೃತಪಟ್ಟ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ದುರಂತದ ಕುರಿತು ಹಿರಿಯ ಪಶುವೈದ್ಯರು ಹಾಗೂ ಉನ್ನತಾಧಿಕಾರಿಗಳ ತಂಡವು ಕೂಲಂಕಷವಾಗಿ ತನಿಖೆ ನಡೆಸಿ, ಘಟನೆ ಸಂಭವಿಸಲು ಕಾರಣಗಳೇನು ಮತ್ತು ಸುರಕ್ಷತಾ ಲೋಪಗಳಿವೆಯೇ ಎಂಬ ಬಗ್ಗೆ ಪರಾಮರ್ಶಿಸಿ, ಮುಂದಿನ 7 ದಿನಗಳಲ್ಲಿ ವರದಿ ಸಲ್ಲಿಸಬೇಕು ಸಚಿವರು ಸೂಚಿಸಿದ್ದಾರೆ.

ಪಕ್ಷಿ ಸಮೀಕ್ಷೆಗೆ ಅನುಮತಿ

ಡಾ। ಸಮೀಕ್ಷಾ ರೆಡ್ಡಿ ಅವರಿಗೆ ಪಕ್ಷಿ ಸಮೀಕ್ಷೆಗೆ ಅನುಮತಿ ನೀಡಲಾಗಿತ್ತು. ನೀರಾನೆ ಮರಿಹಾಕುವ ಸಂದರ್ಭದಲ್ಲಿ ಊಟ ಬಿಟ್ಟಿತ್ತು. ನಾವು ನೀರಾನೆ ಕೇಜ್‌ಗೆ ಇಳಿಯಲು ಸಮೀಕ್ಷಾ ಅವರಿಗೆ ಅನುಮತಿ ನೀಡಿರಲಿಲ್ಲ. ಪ್ರೋಟೋಕಾಲ್ ಇರುತ್ತೆ. ನಾನು ಡ್ಯೂಟಿ ಮುಗಿಸಿ ಊರಿಗೆ ಹೋಗಿದ್ದೆ.

-ಮುರುಳಿಧರ್, ವೈದ್ಯಾಧಿಕಾರಿ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ.