ಕನ್ನಡಪ್ರಭ ವಾರ್ತೆ ತ್ಯಾಗರ್ತಿ
ಸಂಘ ಪರಿವಾರದ ಹಿರಿಯರ ನಿರೀಕ್ಷೆಯನ್ನು ನರೇಂದ್ರ ಮೋದಿ ಚುನಾವಣೆಯಲ್ಲಿ ಆಯ್ಕೆಯಾಗಿ 12 ವರ್ಷಗಳ ಕಾಲ ನಿರ್ವಹಿಸುತ್ತಾ ಬಂದಿದ್ದು ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.ಸಾಗರ ತಾಲೂಕಿನ ತೆಂಗಿನಮಠ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿ ಭಾನುವಾರ ಜಿಗಳೇಮನೆ, ನೀಚಡಿ ಗ್ರಾಮಕ್ಕೆ ಬೇಟಿ ನೀಡಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ 12 ವರ್ಷ ತುಂಬಿದ ಸಂದರ್ಭದಲ್ಲಿ ಆರ್ಎಸ್ಎಸ್ನ ಹಿರಿಯ ಕಾರ್ಯಕರ್ತರಾದ ಎನ್.ಟಿ.ಮಹಾಬಲೇಶ್ವರ ಇವರನ್ನು ಸನ್ಮಾನಿಸಿ ಮಾತನಾಡಿ, ದೇಶದ ಅಭಿವೃದ್ಧಿಯಾಗಬೇಕೆಂಬ ಕನಸು ಕಂಡ ಸಂಘ ಪರಿವಾರವು ಸಾಮಾನ್ಯ ಜನರ ಆರ್ಥಿಕ ಅಭಿವೃದ್ಧಿ, ಸಂಪರ್ಕ ವ್ಯವಸ್ಥೆ, ದೇಶದ ಭದ್ರತೆ, ಕಾಶ್ಮೀರ ನಮ್ಮದಾಗಬೇಕು ಎಂಬ ಕಲ್ಪನೆಯೊಂದಿಗೆ ಭಾರತೀಯ ಜನತಾ ಪಾರ್ಟಿಯನ್ನು ಸ್ಥಾಪಿಸಿ 12 ವರ್ಷಗಳಿಂದ ಅಧಿಕಾರದಲ್ಲಿದ್ದು ಪರಿವಾರದ ಹಿರಿಯರ ಕನಸಿನಂತೆ ಎಲ್ಲರ ಸಹಕಾರದಿಂದ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಯತ್ತ ಕೊಡೊಯ್ಯುತ್ತಿದ್ದಾರೆ ಎಂದು ಹೇಳಿದರು.
2047ಕ್ಕೆ ಸ್ವತಂತ್ರ ಬಂದು 100 ವರ್ಷ ತುಂಬುತ್ತಿರುವಾಗ ನಮ್ಮ ದೇಶ ಹೇಗಿರಬೇಕೆಂಬ ಕಲ್ಪನೆಯನ್ನು ನೀಡಿದ್ದು ಕನಸು ಕಂಡವರು ಇರುವುದು ಕಷ್ಟ ಆದರೆ ಅವರ ಕನಸನ್ನು ನಾವೆಲ್ಲರೂ ಸಾಕಾರಗೊಳಿಸಬೇಕಾಗಿದೆ. ದೀನ್ ದಯಾಳ್ ಉಪಾಧ್ಯಾಯರವರ ಕನಸಿನಂತೆ ಬಡವರ ಮನೆಯಲ್ಲಿ ಅನ್ನ ಇಲ್ಲದಂತಾಗದೇ ಅಂತವರ ಅಭಿವೃದ್ದಿಯಾಗಬೇಕು. ಅಟಲ್ಬಿಹಾರಿ ವಾಜಿಪೇಯಿಯವರ ಕನಸಿನಂತೆ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಹಿಂದಿನ ದಿನಗಳಲ್ಲಿ ದುಡಿಮೆಗಿಂತ ಖರ್ಚು ಹೆಚ್ಚಿದ್ದು ಇಂದು ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿದೆ. ಹಿಂದೆ ಸೈಕಲ್ ತೆಗೆದುಕೊಳ್ಳಲು ಶಕ್ತಿ ಇಲ್ಲದವನೂ ಸಹ ಇಂದು ಕಾರು, ಬೈಕ್ಗಳನ್ನು ಇಟ್ಟುಕೊಂಡಿದ್ದಾರೆ. ಇದು ಅಭಿವೃಧ್ಧಿಯ ಸಂಕೇತ. ನ್ಯಾಯಯುತ ದುಡಿಮೆಗೆ ಹಲವು ಮಾರ್ಗಗಳಿದ್ದು ದುಡಿಮೆ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಆಧ್ಯತೆ ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚ ಮುಕ್ತವಾಗಿಸಿದರು. ರೈಲ್ವೇ ಯೋಜನೆಗಳನ್ನು ಅನುಷ್ಠಾನಗೊಳಿಸಿ 120ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಪ್ರಾರಂಭಿಸಲಾಗಿದೆ. ಧಾರ್ಮಿಕವಾಗಿ 500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣ, ಚಂದ್ರಯಾನ, ಗಂಗಾ ನದಿ ಸ್ವಚ್ಛತೆ, ಹೀಗೆ ಹಲವಾರು ಯೋಜನೆಗಳನ್ನು ಬಿಜೆಪಿ ಕೈಗೆತ್ತಿಕೊಂಡು ಸಂಘ ಪರಿವಾರದವರ ಕನಸನ್ನು ನನಸಾಗಿಸುತ್ತಿದ್ದಾರೆ ಎಂದರು.
ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದೇವಂದ್ರಪ್ಪ ಯಲಕುಂದ್ಲಿ, ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಹಾರೇಗೊಪ್ಪ ಮತ್ತು ನಾಗರಾಜ ಬೊಬ್ಬಿಗೆ, ತಾ.ಪಂ.ಮಾಜಿ ಅಧ್ಯಕ್ಷರಾದ ಬಿ.ಸಿ.ಲಕ್ಷ್ಮೀನಾರಾಯಣ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಧರ ಸಂಪಳ್ಳಿ, ಮಂಡಲ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಹೊಸಂತೆ, ತಾಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ.ಬಿ.ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಮೋದ ಎನ್.ಟಿ, ಕಾರ್ಯಕ್ರಮದ ಸಂಯೋಜಕ ಪ್ರಶಾಂತ್ ಹೆಗಡೆ, ಸಂಘದ ಪಧಾಧಿಕಾರಿಗಳು ಹಾಜರಿದ್ದರು.