ಗದಗ: ಸಿರಿಧಾನ್ಯಗಳು ಭವಿಷ್ಯದ ಆಹಾರವಾದಲ್ಲಿ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ. ಈ ನೆಲೆಯಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಯೋಜನೆಯ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿ ಸಿರಿಧಾನ್ಯಗಳನ್ನು ಬೆಳೆಸಿ ಆಹಾರವಾಗಿ ನೀಡುವ ಕಾರ್ಯ ಶ್ಲಾಘನೀಯ ಎಂದು ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಎಂ. ಮಾತನಾಡಿ, ಡಾ. ಹೆಗ್ಗಡೆ ಹಾಗೂ ಮಾತೃಶ್ರೀ ಅಮ್ಮನವರ ಆಶಯ ಪೌಷ್ಟಿಕಾಂಶಭರಿತ ಸಿರಿಧಾನ್ಯಗಳನ್ನು ರೈತರಲ್ಲಿ ಬೆಳೆಸುವಲ್ಲಿ ಪ್ರೋತ್ಸಾಹ ನೀಡುವುದು, ರೈತರಿಗೆ ಯೋಗ್ಯ ಬೆಲೆ ಒದಗಿಸುವುದು, ಸಮಾಜಕ್ಕೆ ಪೌಷ್ಟಿಕಯುತ ಆಹಾರ ಒದಗಿಸುವ ಮೂಲಕ ಆರೋಗ್ಯ ಭದ್ರತೆ ಒದಗಿಸುವುದಾಗಿದೆ ಎಂದರು.
ರೋಟರಿ ಸೋಶಿಯಲ್ ಕಲ್ಚರ್ ಅಧ್ಯಕ್ಷ ವಿ.ಕೆ. ಗುರುಮಠ ಮಾತನಾಡಿ, ಸಿರಿಧಾನ್ಯ ಬಳಕೆಯಿಂದ ರೋಗದಿಂದ ಮುಕ್ತರಾಗಬಹುದು. ಈ ಕಾರ್ಯಕ್ರಮ ಮಾನವರಿಗೆ ಬೇಕಾಗಿದೆ. ಇದೊಂದು ಭವಿಷ್ಯದ ಆಹಾರ ಎಂದು ನಾವೆಲ್ಲರೂ ಪ್ರತಿದಿನ ಸಿರಿಧಾನ್ಯ ಬಳಕೆ ಮಾಡಬೇಕು ಎಂದು ಹೇಳಿದರು.ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ. ಮಾತನಾಡಿ, ಸಿರಿಧಾನ್ಯ ಉತ್ಪನ್ನ ಬಳಕೆ ಮಾಡಿ, ಮಕ್ಕಳ ಭವಿಷ್ಯ ರೂಪಿಸಿ, ಪಂಚ ಸಿರಿಧಾನ್ಯ ಬಳಕೆ ಮಾಡಿ, ನಿಮ್ಮ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯಕ್ರಮ ಸಿರಿಮನೆಯಿಂದ ಆಗುತ್ತಿದೆ ಎಂದು ಹೇಳಿದರು.