- ವಜಾ ಪ್ರಶ್ನಿಸಿದ್ದಕ್ಕೆ ಸಿಪಿಐನಿಂದಲೇ ಹೊರಗಟ್ಟಿದ್ದಾರೆ: ವಿಶಾಲಾಕ್ಷಿ ಆರೋಪ
- - - ಕನ್ನಡಪ್ರಭ ವಾರ್ತೆ ದಾವಣಗೆರೆಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ನೂತನವಾದ ಎಚ್ಕೆಆರ್ ಬಣದ ಉದ್ಘಾಟನೆ ಸಮಾರಂಭ ಡಿ.28ರಂದು ಮಧ್ಯಾಹ್ನ 1 ಗಂಟೆಗೆ ನಗರದ ಪಾಲಿಕೆ ಆವರಣದ ಚನ್ನಗಿರಿ ರಾಧಮ್ಮ ರಂಗಪ್ಪ ಸ್ಮಾರಕ ವೇದಿಕೆಯಲ್ಲಿ ನಡೆಯಲಿದೆ ಎಂದು ಬಣದ ಮುಖಂಡರಾದ ವಿಶಾಲಾಕ್ಷಿ ಮೃತ್ಯುಂಜಯ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ನಾಲ್ಕು ದಶಕಗಳಿಂದ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘವನ್ನು ಸ್ಥಾಪಿಸಿ, ಕಾರ್ಯಕರ್ತೆಯರು, ಸಹಾಯಕಿಯರ ₹100 ಗೌರವಧನ ನೀಡುತ್ತಿದ್ದ ಕಾಲದಿಂದಲೂ ಹೋರಾಟ ನಡೆಸಿಕೊಂಡು ಬಂದವರು ನಾವು ಎಂದರು.ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ನೇತೃತ್ವದಲ್ಲಿ 4 ದಶಕದಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಹಳ್ಳಿಹಳ್ಳಿಗಳಲ್ಲಿ ಸುತ್ತಾಡಿ, ಕಾರ್ಯಕರ್ತೆಯರು, ಸಹಾಯಕಿಯರನ್ನು ಸಂಘಟಿಸಿದ್ದೇವೆ. 1982ರಿಂದಲೂ ಹಳ್ಳಿ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದವರೆಗೆ ಹೋರಾಟ, ಪ್ರತಿಭಟನೆ ಮಾಡಿ, ಅಂಗನವಾಡಿ ನೌಕರರ ಧ್ವನಿಯಾಗಿದ್ದೆವು ಎಂದ ಅವರು, ಈಗ ಎಚ್ಕೆಆರ್ ಬಣ ಸ್ಥಾಪಿಸುತ್ತಿದ್ದೇವೆ ಎಂದರು.
ಹಳ್ಳಿಯಿಂದ ದಿಲ್ಲಿವರೆಗೂ ಅಂಗನವಾಡಿ ನೌಕರರ ಪರ ಹೋರಾಟ ಮಾಡಿದ್ದೇವೆ. ಬೆಂಗಳೂರು ಚಲೋ, ದೆಹಲಿ ಚಲೋ ಮೂಲಕ ರಾಜ್ಯ, ಕೇಂದ್ರ ಸರ್ಕಾರಗಳ ಗಮನ ಸೆಳೆಯುವಂತೆ ಅಂಗನವಾಡಿ ನೌಕರರ ಪರ ಹೋರಾಟ ಮಾಡಿ, ಸಾಕಷ್ಟು ಸೌಲಭ್ಯ ಸಿಗಲು ಕಾರಣರಾಗಿದ್ದೇವೆ. ನಮ್ಮೆಲ್ಲರ ಸಂಘಟಿತ ಹೋರಾಟದ ಫಲವಾಗಿ ರಾಜ್ಯವ್ಯಾಪಿ ಸಂಘಟನೆ ಬಲವಾಗಿ ಬೇರೂರಿದ್ದಲ್ಲದೇ, ಅಂಗನವಾಡಿ ನೌಕರರ ಸಾಕಷ್ಟು ಬೇಡಿಕೆಗಳಿಗೆ ಸರ್ಕಾರಗಳೂ ಸ್ಪಂದಿಸಿದ್ದವು ಎಂದು ತಿಳಿಸಿದರು.ಎಚ್.ಕೆ. ರಾಮಚಂದ್ರಪ್ಪ ಅವರ ಹೆಸರು ಚಿರಾಯುವಾಗಿರಬೇಕು. ಅದಕ್ಕಾಗಿ ಎಚ್ಕೆಆರ್ ಹೆಸರಿನಲ್ಲಿ ಎಚ್ಕೆಆರ್ ಬಣವೆಂದು ನಾಮಕರಣ ಮಾಡಿ, ಎಚ್ಕೆಆರ್ ಅವರು ಹಾಕಿಕೊಟ್ಟ ಧ್ಯೇಯೋದ್ದೇಶಗಳನ್ನು, ಆದರ್ಶಗಳನ್ನು ಮುಂದುವರಿಸಿಕೊಂಡು ಬಂದಿದ್ದೇವೆ ಎಂದರು.
ಸಂಘಟನೆಯ ಮುಖಂಡರಾದ ಎಂ.ಸರ್ವಮ್ಮ, ಜೆ.ಎಂ.ಉಮಾ, ಜಿ.ರೇಣುಕಾ, ಕೆ.ಸುಧಾ, ಚೌಡಮ್ಮ, ಡಿ.ಎಂ.ರೇಣುಕಾ, ಕಾಳಮ್ಮ ಇತರರು ಇದ್ದರು.- - - ಬಾಕ್ಸ್ * ರಾಮಚಂದ್ರಪ್ಪ ನಿಧನ ಬಳಿಕ ಭರವಸೆ ನಾಯಕರೇ ಸಿಗಲಿಲ್ಲ ರಾಮಚಂದ್ರಪ್ಪ ಅವರ ನಿಧನದ ನಂತರ ಅಂಗನವಾಡಿ ನೌಕರರಿಗೆ ಭರವಸೆಯ ನಾಯಕರು ಸಿಗಲಿಲ್ಲ. ಈ ಮಧ್ಯೆ ನಮ್ಮ ಸಂಘಟನೆ ಜಿಲ್ಲಾಧ್ಯಕ್ಷರು, ರಾಜ್ಯ ಸಂಚಾಲಕರು, ಟ್ರಸ್ಟ್ ಅಧ್ಯಕ್ಷರನ್ನೇ ಕಮ್ಯುನಿಷ್ಟ್ ಪಕ್ಷದಿಂದ ವಜಾ ಮಾಡಲಾಗಿದೆ. ಪಕ್ಷದ ನಿಯಮದ ಪ್ರಕಾರ ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮನ್ನು ಹೊರಗಿಟ್ಟಿದ್ದಾರೆ ಎಂದು ವಿಶಾಲಾಕ್ಷಿ ಮೃತ್ಯುಂಜಯ ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಯಲ್ಲಿ ಕೆಲವರು ಹಸ್ತಕ್ಷೇಪ ಮಾಡಿ, ನಮ್ಮ ನಮ್ಮವರಲ್ಲೇ ವೈಮನಸ್ಸು ಬಿತ್ತುವ ಕೆಲಸ ಮಾಡಿದ್ದಾರೆ. ಇದರಿಂದ ನಾವು ಎಚ್.ಕೆ. ರಾಮಚಂದ್ರಪ್ಪ ಅವರ ಆದರ್ಶಗಳನ್ನು ಇಟ್ಟುಕೊಂಡು, ಜಿಲ್ಲಾಮಟ್ಟ, ರಾಜ್ಯ ಮಟ್ಟದಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ಮಾಡಲಿದ್ದೇವೆ. ಜೊತೆಗೆ ಎಚ್ಕೆಆರ್ ಆದರ್ಶ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.- - - -26ಕೆಡಿವಿಜಿ61.ಜೆಪಿಜಿ:
ದಾವಣಗೆರೆಯಲ್ಲಿ ಗುರುವಾರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೂತನ ಎಚ್ಕೆಆರ್ ಬಣದ ಮುಖಂಡರಾದ ವಿಶಾಲಾಕ್ಷಿ ಮೃತ್ಯುಂಜಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.