ಕನ್ನಡಪ್ರಭ ವಾರ್ತೆ ಮಂಗಳೂರು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ನಂದಿನಿ) ಇದರ ಉಡುಪಿ ಡೈರಿ ಆಡಳಿತ ಕಚೇರಿ ಶಂಕುಸ್ಥಾಪನೆ ಹಾಗೂ ನೂತನ ಉಪಹಾರ ಗೃಹದ ಉದ್ಘಾಟನೆ ಜ. 21ರಂದು ನಡೆಯಲಿದೆ. ಜ. 24ರಂದು ಮಂಗಳೂರು ಡೈರಿ ಉಗ್ರಾಹಣದ ಶಂಕುಸ್ಥಾಪನೆ ಹಾಗೂ ಸಿಬ್ಬಂದಿಯ ವಸತಿ ಸಮುಚ್ಛಯ ಉದ್ಘಾಟನೆ ನೆರವೇರಲಿದೆ. ಗುರುವಾರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಜ.24ರಂದು ಬೆಳಗ್ಗೆ 11.30ಕ್ಕೆ ಮಂಗಳೂರು ಡೈರಿ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್ ಉದ್ಘಾಟಿಸಲಿದ್ದು, ವಸತಿ ಸಮುಚ್ಚಯ ಉದ್ಘಾಟನೆ ಹಾಗೂ ಉಗ್ರಾಣದ ಶಂಕು ಸ್ಥಾಪನೆಯನ್ನು ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ನೆರವೇರಿಸುವರು ಎಂದರು.
ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ನಿರ್ದೇಶಕರಾದ ನರಸಿಂಹ ಕಾಮತ್, ಬಿ. ಸುಧಾಕರ ರೈ, ಸ್ಮಿತಾ ಆರ್.ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಮಾರುಕಟ್ಟೆ ವ್ಯವಸ್ಥಾಪಕ ರವಿರಾಜ್ ಉಡುಪ ಮತ್ತಿತರರು ಇದ್ದರು.609.85 ಲಕ್ಷ ರು. ಲಾಭ: 2022-23ನೇ ಸಾಲಿನಲ್ಲಿ ಹಾಲು ಒಕ್ಕೂಟ ಸರಾಸರಿ 1,04,448 ಲಕ್ಷ ರು. ವ್ಯವಹಾರ ನಡೆಸಿದ್ದು, 609.85 ಲಕ್ಷ ರು. ಲಾಭ ಗಳಿಸಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ. ಮಾಹಿತಿ ನೀಡಿದರು.ನಂದಿನಿ ಹಾಲಿನ ವಿತರಣಾ ಮಾರ್ಗದ ವಾಹನಗಳಿಗೆ ಶೇ. 100ರಷ್ಟುಜಿಪಿಎಸ್ ಅಳವಡಿಸಲಾಗಿದೆ. ಇದರಿಂದ ಡೀಲರ್ಗಳಿಗೆ ಒಕ್ಕೂಟದ ವಾಹನಗಳ ಸಂಚಾರ ಮಾಹಿತಿ ನಿರಂತರ ಲಭ್ಯವಾಗುವಂತೆ ಮಾಡಲಾಗಿದೆ. ನಗದು ರಹಿತ ಪದ್ಧತಿ ಪ್ರೋತ್ಸಾಹಿಸಲು ಒಕ್ಕೂಟ ನಂದಿನಿ ಅಧಿಕೃತ ಡೀಲರುಗಳಿಗೆ ಡೈಲಿ ಆರ್ಡರ್ ಆ್ಯಪ್ ಅಳವಡಿಸಿದೆ. 2023ರ ಫೆಬ್ರವರಿ 26ರಿಂದ ನಗದು ರಹಿತ ವ್ಯವಸ್ಥೆಯನ್ನು ಆರಂಭಿಸುವ ಮೂಲಕ ಸಹಕಾರಿ ವ್ಯವಸ್ಥೆಯಲ್ಲಿ ರಾಷ್ಟ್ರದಲ್ಲಿಯೇ ಪ್ರಥಮವಾಗಿ ನಗದು ರಹಿತ ವ್ಯವಹಾರವನ್ನು ಆರಂಭಿಸಿದ ಪ್ರಥಮ ಒಕ್ಕೂಟವಾಗಿ ನಂದಿನಿ ಮೂಡಿ ಬಂದಿದೆ ಎಂದರು.