ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಸಿಎ ಎಕ್ಸ್ಪೋ ಉದ್ಘಾಟನೆ

KannadaprabhaNewsNetwork | Published : Nov 27, 2024 1:01 AM

ಸಾರಾಂಶ

ಕೃತಕ ಬುದ್ಧಿಮತ್ತೆಯು ನಮ್ಮ ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ. ಬದಲಿಗೆ ಅದನ್ನು ಕಲಿಯುವುದರಿಂದ ನಮ್ಮ ಕೆಲಸವನ್ನು ಇನ್ನೂ ಉತ್ತಮವಾಗಿ ಸುಲಭವಾಗಿಸಬಹುದು ಎಂದು ಡಾ. ಗೋಪಾಲ್‌ ಮುಗೇರಾಯ ಹೇಳಿದರು.

ಕನ್ನಡಪ್ರಭ ವಾರ್ತೆ ನಿಟ್ಟೆ

ಕೃತಕ ಬುದ್ಧಿಮತ್ತೆಯು ನಮ್ಮ ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ, ಬದಲಿಗೆ ಅದನ್ನು ಕಲಿಯುವುದರಿಂದ ನಮ್ಮ ಕೆಲಸವನ್ನು ಇನ್ನೂ ಉತ್ತಮವಾಗಿ ಸುಲಭವಾಗಿಸಬಹುದು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಗೋಪಾಲ್ ಮುಗೇರಾಯ ಹೇಳಿದರು.

ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗವು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ - ವೆನಮಿತಾದ ಸಹಯೋಗದೊಂದಿಗೆ ಆಯೋಜಿಸಿದ್ದ ಎಂಸಿಎ ಎಕ್ಸ್ಪೋ-2024 ನ್ನು ನ. 25 ರಂದು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆಯ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅವರು ವಿದ್ಯಾರ್ಥಿಗಳು ಪ್ರಾಜೆಕ್ಟ್ ನ್ನು ಮಾಡುವ ಅಗತ್ಯತೆ ಮತ್ತು ಅದರಿಂದ ಆಗುವ ಪ್ರಯೋಜನವನ್ನು ತಿಳಿಸಿದರು.

ಎಂಸಿಎ ವಿಭಾಗದ ಹಳೆವಿದ್ಯಾರ್ಥಿಗಳಾಗಿದ್ದು ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಟೈಟೊ ಎವ್ರಿ ಇಂಡಿಯಾದಲ್ಲಿ ಟೀಮ್ ಲೀಡ್ ರಚನಾ ಮಿಥುನ್, ಬೆಂಗಳೂರಿನ ಐ ಡ್ರೈವ್ ನಲ್ಲಿ ಪ್ರೋಗ್ರಾಂ ಎನಾಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಹೆರೋಲಿನ್ ವಾಝ್, ರೋಬೋಸಾಫ್ಟ್ ಟೆಕ್ನಾಲಜೀಸ್ ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಝೀಟಾ ಅಂದ್ರಾದೆ, ಮಂಗಳೂರಿನ ಸ್ಕೈಲ್ರಾ ಕಂಪೆನಿಯಲ್ಲಿ ಅಸೋಸಿಯೇಟ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರು ಪ್ರಣೀತ ಜೆ. ಶೆಟ್ಟಿ, ಬೆಂಗಳೂರಿನ ಪೇಚೆಕ್ಸ್ ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಡೆನ್ಸನ್ ಮಸ್ಕರೇನಸ್ ಅವರು ಮಾತನಾಡಿ ವಿದ್ಯಾರ್ಥಿಗಳು ಐಟಿ ಉದ್ಯೋಗ ಪಡೆಯಲು ತಮ್ಮನ್ನು ತಾವು ಯಾವ ರೀತಿ ಅಣಿಗೊಳಿಸಬೇಕು ಎಂದು ಸಲಹೆ ಸೂಚನೆ ನೀಡಿದರು.

ಇನ್ಫಾರ್ಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪ್ರೊಫೆಸರ್ ಡಾ. ಕರುಣಾ ಪಂಡಿತ್ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪ್ರೊಫೆಸರ್ ಡಾ. ಸಾರಿಕಾ ಹೆಗ್ಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಬಲಿಪ ಸ್ವಾಗತಿಸಿದರು. ವಿಭಾಗದ ಪ್ರಾಜೆಕ್ಟ್ ಕೋರ್ಡಿನೇಟರ್ ಡಾ. ಸ್ಪೂರ್ತಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ವಿಶ್ವರೂಪ ಕಾರ್ಯಕ್ರಮ ನಿರೂಪಿಸಿದರು. 56 ಪ್ರಾಜೆಕ್ಟ್ ಈ ಪ್ರದರ್ಶನದಲ್ಲಿ ಪಾಲ್ಗೊಂಡವು.

Share this article