ಕನ್ನಡಪ್ರಭ ವಾರ್ತೆ ಸಾವಳಗಿ

ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಸಾವಳಗಿಯ ಸುದೀಪ ಬಸಪ್ಪ ಪಾಂಗೆ (19) ಥಳಿತಕ್ಕೆ ಒಳಗಾಗಿ ಮೃತಪಟ್ಟಿರುವ ಯುವಕ. ಅದೇ ಗ್ರಾಮದ ರಾಜು ಭೀಮಪ್ಪ ಮಾಳಿ, ವಿಜಯ ರಾಮಚಂದ್ರ ಸಾವಳಗಿ (ಲಮಾಣಿ), ಮಲ್ಲಿಕಾರ್ಜುನ ನಿಂಗಪ್ಪ ಮಾಳಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಘಟನೆ?:

ಸಾವಳಗಿ ಗ್ರಾಮ ಪಂಚಾಯಿತಿ ಮುಂಭಾಗ ಬುಧವಾರ ಸಂಜೆ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಕ್ಕಳ ಮನರಂಜನೆ ಕಾರ್ಯಕ್ರಮಗಳು ನಡೆದಿತ್ತು. ಗ್ರಾಮಸ್ಥರು ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದ ವೇಳೆ ಪಂಚಾಯಿತಿ ಕಟ್ಟಡದ ಛಾವಣಿ ಮೇಲೆ ಕುಳಿತ ಕೆಲವು ಯುವಕರಲ್ಲಿ ಯಾರೋ ಒಬ್ಬ ಕೆಳಗೆ ಕುಳಿತವರ ಮೇಲೆ ಚಿಕ್ಕ ಕಲ್ಲು (ಹಳ್ಳು) ಎಸೆದಿದ್ದಾರೆ.

ಇದರಿಂದ ಆಕ್ರೋಶಗೊಂದ ಆರೋಪಿತರಾದ ರಾಜು ಮಾಳಿ, ವಿಜಯ ಸಾವಳಗಿ, ಮಲ್ಲಿಕಾರ್ಜುನ ಮಾಳಿ ಸೇರಿಕೊಂಡು ಯಾರು ಕಲ್ಲು ಎಸೆದಿದ್ದಾರೆ ಎಂದು ಸರಿಯಾಗಿ ವಿಚಾರಣೆ ಕೂಡ ಮಾಡದೇ ನೀನೇ ಹಳ್ಳ ಎಸೆದಿದ್ಧೀಯಾ ಎಂದು ಸುದೀಪನೊಂದಿಗೆ ಜಗಳ ತೆಗೆದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಲೆ ಆತನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಸುದೀಪನನ್ನು ತಕ್ಷಣ ಜಮಖಂಡಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ. ಈ ಕುರಿತು ಮೃತನ ಸಹೋದರ ಕುಮಾರ ಬಸಪ್ಪ ಪಾಂಗೆ ಸಾವಳಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.