ಕನ್ನಡಪ್ರಭ ವಾರ್ತೆ ಇಂಡಿ

ರಾಜ್ಯ ಸರ್ಕಾರ ಮಹಿಳೆಯರ ಹಾಗೂ ಬಡವರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಪಡೆಯುತ್ತಿದ್ದಾರೆ. ಯೋಜನೆಯಿಂದ ಯಾವುದೇ ಫಲಾನುಭವಿ ಹೊರಗುಳಿಯದಂತೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದು ಸಿಡಿಪಿಒ ಗೀತಾ ಗುತ್ತರಗಿಮಠ ಹೇಳಿದರು.

ನಗರದ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆ ಹಾಗೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗ್ಯಾರಂಟಿ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವೊಂದೇ ಸಾಲದು. ಅದರೊಂದಿಗೆ ಆರ್ಥಿಕ ಜ್ಞಾನ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಬೆಂಬಲ ಅತ್ಯಗತ್ಯ ಎಂದರು.ಮಹಿಳೆಯರ ಸಾಧನೆಯನ್ನು ಗುರುತಿಸಿ, ಗೌರವಿಸುವ ದಿನವಾಗಿದ್ದು, ಇದು ಕೇವಲ ಆಚರಣೆಯಲ್ಲ. ೨೦ನೇ ಶತಮಾನದ ಆರಂಭದಲ್ಲಿ ಮಹಿಳಾ ಕಾರ್ಮಿಕರು ಉತ್ತಮ ವೇತನ, ಕಡಿಮೆ ಕೆಲಸದ ಅವಧಿ ಮತ್ತು ಮತದಾನದ ಹಕ್ಕಿಗಾಗಿ ನಡೆಸಿದ ಬೃಹತ್ ಹೋರಾಟಗಳ ಫಲವಾಗಿದೆ. ಅನಾದಿ ಕಾಲದಿಂದಲೂ ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಿ ಕಡೆಗಣಿಸಲಾಗುತ್ತಿದೆ. ಆದರೂ ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಹಾಗೂ ಆರ್ಥಿಕ ಸ್ವಾತಂತ್ರ್ಯದಿಂದ ಸಬಲೀಕರಣಗೊಳ್ಳುತ್ತಿರುವುದು ಶ್ಲಾಘನೀಯ. ಮಹಿಳೆಯರು ಸಹ ಇಂದು ವೃತ್ತಿ ಜೀವನದಲ್ಲಾಗಲೀ, ಇತರ ರಂಗಗಳಲ್ಲಾಗಲೀ ಅವಕಾಶಗಳು ಬಂದಾಗ ಕೀಳರಿಮೆಯಿಂದ ಹಿಂದೆ ಸರಿಯದೆ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಬೇಕು ಎಂದರು.ತಾಪಂ ಇಒ ಡಾ.ಭೀಮಾಶಂಕರ ಕನ್ನೂರ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೆಯಾದ ಛಾಪು ಮೂಡಿಸುತ್ತಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿಶೇಷವಾಗಿ ಸ್ವಸಹಾಯ ಸಂಘಗಳ ಸಹಾಯದಿಂದ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದರು.ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ, ಎಲ್ಲಾ ರಂಗದಲ್ಲೂ ತೊಡಗಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಮಹಿಳೆಯರು ಮಗಳಾಗಿ, ಸಹೋದರಿಯಾಗಿ, ಬಾಳಸಂಗತಿಯಾಗಿ, ತಾಯಿಯಾಗಿ, ಅತ್ತೆ, ಅಜ್ಜಿಯಾಗಿ ಹಂತ ಹಂತವಾಗಿ ಈ ಎಲ್ಲಾ ಪಾತ್ರಗಳನ್ನು ಸಂತಸದಿಂದ ನಿರ್ವಹಿಸುತ್ತಾರೆ. ಇದರೊಂದಿಗೆ ತಮಗೆ ಎದುರಾಗುವ ಸವಾಲುಗಳನ್ನೂ ಎದುರಿಸಿ ಮುನ್ನುಗ್ಗಿದರೆ ಸಮೃದ್ಧಿ ಹಾಗೂ ಯಶಸ್ಸಿನ ಜೀವನ ನಡೆಸಬಹುದು. ಅಲ್ಲದೇ ಸಮಾಜಕ್ಕೆ ಉತ್ತಮ ದಾರಿದೀಪ ಆಗಬಹುದು ಎಂದು ಸಲಹೆ ನೀಡಿದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ, ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಯನ್ನು ಮೀಸಲಿಟ್ಟಿದೆ. ಯಾವುದೇ ಲೋಪದೋಷಗಳಿದ್ದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಮಹಿಳೆಯರಿಗೆ ಅವಕಾಶಗಳು, ಜ್ಞಾನ ಮತ್ತು ಬೆಂಬಲವನ್ನು ನೀಡುವ ಮೂಲಕ ಲಿಂಗ ಸಮಾನತೆಯನ್ನು ಬಲಪಡಿಸುವುದನ್ನು ಒತ್ತಿಹೇಳುತ್ತದೆ. ಮಹಿಳೆಯರು ಅಭಿವೃದ್ಧಿ ಹೊಂದಿದಾಗ ಇಡೀ ಸಮುದಾಯವು ಬೆಳೆಯುತ್ತದೆ. ಆದ್ದರಿಂದ ಮಹಿಳಾ ಸಬಲೀಕರಣವೇ ನಿಜವಾದ ಸಮಾಜದ ಪ್ರಗತಿ ಎಂದು ವಿವರಿಸಿದರು.ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಮಹಿಳೆಯರಿಗೆ ಅನೇಕ ಉನ್ನತ ಸ್ಥಾನಮಾನ ನೀಡಿದೆ. ಇಂದೂ ಉನ್ನತ ಮಟ್ಟದ ಸ್ಥಾನದಲ್ಲಿ ಮಹಿಳೆಯರಿದ್ದಾರೆ. ಎಲ್ಲಾ ಮಹಿಳೆಯರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಪ್ರತಿ ಕ್ಷೇತ್ರದಲ್ಲಿ ಸರ್ಕಾರ ಮಹಿಳೆಯರಿಗೆ ಮೀಸಲಾತಿ, ಅತಿ ಹೆಚ್ಚು ಸೌಲಭ್ಯ ನೀಡಿದೆ. ಗ್ಯಾರಂಟಿ ಯೋಜನೆಯಿಂದ ಅತಿ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೊರಾಮಣಿ ಮಾತನಾಡಿದರು. ಕಾರ್ಯಕ್ರಮದ ನಂತರ ಗೃಹ ಲಕ್ಷಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳು ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಸಮಿತಿಯ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಪಶು ಸಖಿ, ಮತ್ತು ಕೃಷಿ ಸಖಿ ಮೊದಲಾದವರು ಇದ್ದರು.ತಾಪಂ ಇಒ ಡಾ.ಕನ್ನೂರ ಸ್ವಾಗತಿಸಿದರು. ತಾಪಂ ಯೋಜನಾಧಿಕಾರಿ ನಂದೀಪ ರಾಠೋಡ ಕಾರ್ಯಕ್ರಮ ನಡೆಸಿಕೊಟ್ಟರು.