- ಅಂಚೆ ತರಬೇತಿ ಕೇಂದ್ರದಲ್ಲಿ ಹಂಸ- ಮಹಿಳಾ ವಸತಿನಿಲಯ ಕಟ್ಟಡ ಸಂಕೀರ್ಣ ಉದ್ಘಾಟನೆ----
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅಂಚೆ ಇಲಾಖೆ ವಿನಾಶದ ಅಂಚಿನಲ್ಲಿತ್ತು.ಅನುದಾನ ನೀಡುವ ಕೆಲಸವನ್ನೂ ಆಗ ಮಾಡಿರಲಿಲ್ಲ. ಆದರೆ, ನಮ್ಮ ಸರ್ಕಾರವು ಅಂಚೆ ಇಲಾಖೆಯನ್ನು ಮೇಲ್ದರ್ಜೆಗೇರಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಜರ್ ಬಾದ್ ನಲ್ಲಿರುವ ಅಂಚೆ ತರಬೇತಿ ಕೇಂದ್ರದ (ಪಿಟಿಸಿ) ಆವರಣದಲ್ಲಿ 4.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಂಸ- ಮಹಿಳಾ ವಸತಿನಿಲಯ ಕಟ್ಟಡ ಸಂಕೀರ್ಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಇನ್ನೂ 4- 5 ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.ಹೀಗಾಗಿ, ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇವೆ ಎಂದರು.ನಾನು ಸಂಸದನಾಗುವ ಮುನ್ನ ಮೈಸೂರಿಗೆ ಸಮರ್ಪಕವಾದ ಸಂಪರ್ಕದ ಕೊರತೆ ಇತ್ತು. ಇದರಿಂದಾಗಿ ಕೈಗಾರಿಕೆಗಳು ಬರುವುದಕ್ಕೆ ತೊಡಕಾಗಿತ್ತು. ಹೀಗಾಗಿ, ನಾನು ಹೆದ್ದಾರಿ, ರೈಲು ಹಾಗೂ ವಿಮಾನ ಸಂಪರ್ಕ ವ್ಯವಸ್ಥೆ ವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ಅವರು ಹೇಳಿದರು.
ಅಂಚೆ ಸೇವೆಗಳ ದಕ್ಷಿಣ ಕರ್ನಾಟಕ ವಲಯದ ನಿರ್ದೇಶಕ ಟಿ.ಎಸ್. ಅಶ್ವತ್ಥನಾರಾಯಣ, ಪಿಟಿಸಿ ನಿರ್ದೇಶಕ ಆಶಿಶ್ ಸಿಂಗ್ ಠಾಕೂರ್, ಉಪ ನಿರ್ದೇಶಕ ಕೆ.ವಿ.ಎಲ್.ಎನ್. ಮೂರ್ತಿ ಮೊದಲಾದವರು ಇದ್ದರು.
-- ಬಾಕ್ಸ್--
ಏಕಕಾಲದಲ್ಲಿ 100 ಮಹಿಳೆಯರಿಗೆ ವಾಸ್ತವ್ಯಕ್ಕೆ ಅವಕಾಶಹಂಸ- ಮಹಿಳಾ ವಸತಿನಿಲಯ ಕಟ್ಟಡ ಸಂಕೀರ್ಣ ಕಾಮಗಾರಿಗೆ 2018ರ ನ.30 ರಂದು ಸಚಿವ ಮನೋಜ್ಸಿಂಹ ಭೂಮಿಪೂಜೆ ನೆರವೇರಿಸಿದ್ದರು. ಈ ಕಟ್ಟಡದಲ್ಲಿ 36 ಕೊಠಡಿಗಳಿದ್ದು, ಏಕಕಾಲಕ್ಕೆ 100 ಮಹಿಳೆಯರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬಹುದಾಗಿದೆ.
ದಕ್ಷಿಣ ಭಾರತದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿಂದ ತರಬೇತಿಗೆ ಬರುವ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು. ಪಠ್ಯ ಕಲಿಕೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಅತ್ಯಾಧುನಿಕವಾಗಿ ನಿರ್ಮಿಸಲಾಗಿದ್ದು, ಭದ್ರತೆ ಸಹ ಒದಗಿಸಲಾಗಿದೆ.