ಸಂಸ್ಕೃತಿ ಅರ್ಥೈಸುವಲ್ಲಿ ಶಿಲ್ಪ ಕಲೆಗಳ ಪಾತ್ರ ಮಹತ್ವದ್ದು

KannadaprabhaNewsNetwork | Published : Sep 24, 2024 1:53 AM

ಸಾರಾಂಶ

ದೇಶ ಕಂಡಂತಹ ಅಮರ ಶಿಲ್ಪಿ ಜಕಣಚಾರಿ ಅವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಇತಿಹಾಸದ ನಾಗರೀಕತೆ ಹಾಗೂ ಸಂಸ್ಕೃತಿಯನ್ನು ಕಣ್ಣು ಕಟ್ಟುವಂತೆ ಕೆತ್ತನೆ ಮಾಡುವುದರ ಮೂಲಕ ಜನರು ನಾಗರೀಕತೆ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವಲ್ಲಿ ಶಿಲ್ಪ ಕಲೆಗಳ ಪಾತ್ರ ಮಹತ್ವವಾದದ್ದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಸಿದ್ದಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ (ಕಾವಾ) ಆವರಣದಲ್ಲಿ ದಸರಾ ಲಲಿತಕಲಾ ಮತ್ತು ಕರಕುಶಲ ಉಪ ಸಮಿತಿಯು ಕರ್ನಾಟಕ ಶಿಲ್ಪಕಲಾ ಶಿಬಿರ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಿರುವ ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರವನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಚರಿತ್ರೆ ಗೊತ್ತಿಲ್ಲದವರು ಚರಿತ್ರೆಯನ್ನು ಸೃಷ್ಟಿಸಲಾರರು ಎಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾತಿನಂತೆ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಸಂಪೂರ್ಣವಾಗಿ ಅರಿಯದವರು ಶಿಲ್ಪಕಲೆ ಮತ್ತು ಕರಕುಶಲಕಲೆಗಳನ್ನು ರಚಿಸಲು ಸಾಧ್ಯವಿಲ್ಲ. ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಯೇ ಶಿಲ್ಪಕಲೆಯಾಗಿರುವಾಗ, ಮೊದಲು ಅದರ ಇತಿಹಾಸವನ್ನು ತಿಳಿದು ನಂತರ ರಚಿಸುವ ಕೆಲಸ ಪ್ರತಿಯೊಬ್ಬ ಕಲಾವಿದನದ್ದಾಗಿರುತ್ತದೆ ಎಂದು ಅವರು ಹೇಳಿದರು.

ದೇಶ ಕಂಡಂತಹ ಅಮರ ಶಿಲ್ಪಿ ಜಕಣಚಾರಿ ಅವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ಅಲ್ಲದೆ, ಸೋಮನಾಥಪುರ, ಬೇಲೂರು ಮತ್ತು ಹಳೇಬೀಡಿನ ದೇವಾಯಗಳ ಒಂದೊಂದು ಕೆತ್ತನೆಗಳು ಒಂದೊಂದು ಕಥೆಯನ್ನು ಅದರ ಇತಿಹಾಸವನ್ನು ತಿಳಿಸುತ್ತವೆ. ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ-ತೊಡುಗೆ ಒಟ್ಟಾರೆಯಾಗಿ ಇತಿಹಾಸವನ್ನು ವಿವರವಾಗಿ ತಿಳಿಸುವಂತಹ ಮಹಾನ್ ಕೆಲಸವನ್ನು ಶಿಲ್ಪಕಲೆಗಳು ಮಾಡುತ್ತಿವೆ ಎಂದರು.

ಜೀವಂತ ಕಲಾಕೃತಿ ರಚಿಸಿ

ಅಧ್ಯಕ್ಷತೆ ವಹಿಸಿದ್ದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಅತ್ಯಂತ ವಿಶಾಲ ಮತ್ತು ಸುದೀರ್ಘವಾಗಿರುವ ಶಿಲ್ಪಕಲೆಯ ಪ್ರತಿಯೊಂದು ಕಲಾಕೃತಿಗಳು ನೋಡುಗರೊಂದಿಗೆ ತಾವೇ ಮಾತನಾಡುವಂತಿರಬೇಕು. ಅಂತಹ ಜೀವಂತ ಕಲಾಕೃತಿಗಳನ್ನು ಕಲಾವಿದರು ರಚಿಸಬೇಕು ಎಂದು ಹೇಳಿದರು.

ವಿದ್ಯಾಸಂಸ್ಥೆಗಳು ಶಿಲ್ಪಕಲೆಯನ್ನು ಕಲಿಯಲು ಆಸಕ್ತಿಯಿಂದ ಬರುವಂತಹ ವಿದ್ಯಾರ್ಥಿಗಳ ಜೊತೆ ಆಟವಾಡದೆ ಅವರಿಗೆ ಉತ್ತಮ ಶಿಕ್ಷಣ ನೀಡಿ, ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಲು ಜೊತೆಯಾಗಬೇಕು. ಇದಕ್ಕೆ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ಸಹಕರಿಸಿ ಆಸಕ್ತಿಯಿಂದ ಕಲಿತು, ಶಿಲ್ಪಕಲೆ ಹಾಗೂ ಕರಕುಶಲ ಕಲೆಗಳಂತಹ ಅದ್ಬುತ ಕಲೆಗಳನ್ನು ಉಳಿಸಿ ಬೆಳಸಬೇಕು ಎಂದು ಅವರು ಸಲಹೆ ನೀಡಿದರು.

ದಸರಾ ಸಂದರ್ಭದಲ್ಲಿ ಕಲಾ ವಿದ್ಯಾರ್ಥಿಗಳು ರಚಿಸುವ ಉತ್ಪನ್ನಗಳನ್ನು ನೆನಪಿಣ ಕಾಣಿಕೆಯಾಗಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು. ದಸರಾ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಶಿಲ್ಪಕಲೆ, ಕರಕುಶಲ ಕಲೆ ಹಾಗೂ ಇತ್ಯಾದಿ ವಿಷಯಗಳ ಮೇಲೆ ಸ್ಪರ್ಧೆಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸುವಂತೆ ಮಾಡಬೇಕು. ಇದರಿಂದ ಅವರಲ್ಲಿ ಹೆಚ್ಚಿನ ಆಸಕ್ತಿ ಹಾಗೂ ವಿಷಯದ ಮೇಲಿನ ಜ್ಞಾನ ವೃದ್ಧಿಸುತ್ತದೆ ಎಂದರು.

ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿಯ ಉಪ ವಿಶೇಷಾಧಿಕಾರಿಯಾದ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜು ಮಾತನಾಡಿ, ಈ ವರ್ಷ ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರವು ಭಾರತ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಚಳವಳಿ ಮತ್ತು ಸಂವಿಧಾನದ ಮಹತ್ವ ಕುರಿತು 10 ದಿನ ನಡೆಯಲಿದ್ದು, ರಾಜ್ಯದ ವಿವಿಧ ಭಾಗದಿಂದ ಪ್ರಸಿದ್ಧ ಕಲಾವಿದರು ಆಗಮಿಸಿ, ಶಿಬಿರಾರ್ಥಿಗಳಿಗೆ ಉಪಯುಕ್ತವಾದ ಸಲಹೆ ನೀಡಲಿದ್ದಾರೆ ಎಂದು ತಿಳಿಸಿದರು.

10 ಶಿಲ್ಪಕಲಾವಿದರು ಭಾಗಿ

ಈ ಶಿಲ್ಪಕಲಾ ಶಿಬಿರದಲ್ಲಿ ಹಿರಿಯ ಶಿಲ್ಪಿಗಳಾದ ದಾನಯ್ಯ ಎಸ್. ಚೌಕಿಮಠ, ಮಹಾಂತೇಶ್ ಎಂ. ಪೆಲದಿನ್ನಿ, ನರೇಶ್ ನಾಯ್ಕ, ಬಿ.ಸಿ. ಸುಕೇಶ್, ಪಿ. ಜ್ಯೋತಿ ಭಾರತಿ, ಕಿರಿಯ ಶಿಲ್ಪಿಗಳಾದ ಗಿರೀಶ್, ಪ್ರಮೋದ್ ಆಚಾರ್, ಎಲ್. ಬಸವರಾಜ್, ಪ್ರಶಾಂತ್ ಕುಮಾರ್, ಮತ್ತು ಆರ್. ಸಂಗೀತಾ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಸಿ. ರಮೇಶ್, ಶಿಬಿರದ ಸಂಚಾಲಕ ಎಸ್. ಶಿವಪ್ರಸಾದ್ ಮೊದಲಾದವರು ಇದ್ದರು. ಡಾ. ನವೀನ್ ಸ್ವಾಗತಿಸಿದರು.

----

ಕೋಟ್...

ಕಲಾವಿದರು ನಮ್ಮ ಪುರಾತನ ಚರಿತ್ರೆ, ಸಂಸ್ಕೃತಿ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ, ಯುವ ಪೀಳಿಗೆಗೆ ಹಾಗೂ ಮುಂದಿನ ಪೀಳಿಗೆಗೆ ಇತಿಹಾಸದ ಸತ್ಯವನ್ನು ತಿಳಿಸುವ ಶಿಲ್ಪಕಲೆಗಳನ್ನು ರಚಿಸಿ, ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು.

- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು----

ಬಾಕ್ಸ್...

ಕಾವಾ ಕರಕುಶಲ ವಿವಿ ಆಗಲಿ

ರಾಜ್ಯದಲ್ಲಿ ಕರಕುಶಲ ವಿಶ್ವವಿದ್ಯಾನಿಲಯವೊಂದನ್ನು ಸ್ಥಾಪಿಸಬೇಕು. ಮೈಸೂರಿನಲ್ಲಿರುವ ಕಾವಾವನ್ನು ಕರಕುಶಲ ವಿವಿ ಆಗಿ ಮಾಡಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಚನ್ನಪಟ್ಟಣದ ಗೊಂಬೆಗಳು, ಕುಂಬಾರರ ಮಡಿಕೆಗಳು, ಕಲ್ಲು ಕೆತ್ತನೆಗಳು ಹಾಗೂ ಇತ್ಯಾದಿಗಳನ್ನು ತಂದು ಅದಕ್ಕೆ ವಿಭಿನ್ನ ರೂಪ ಕೊಟ್ಟು ವಿಶೇಷ ಕಲಾಕೃತಿಗಳ ರಚಿಸಬೇಕು. ಕರಕುಶಲ ಕಲೆಗಳ ಉತ್ತೇಜನಕ್ಕಾಗಿ ವಿಶ್ವವಿದ್ಯಾನಿಲಯ ಸ್ಥಾಪನೆ ಆಗಬೇಕು ಎಂದು ಅವರು ಆಶಿಸಿದರು.

----

ಬಾಕ್ಸ್...

ಒಂದೂವರೆ ಗಂಟೆ ತಡವಾಗಿ ಬಂದ ಸಚಿವ

ಮೈಸೂರಿನ ಕಾವಾ ಆವರಣದಲ್ಲಿ ದಸರಾ ಅಂಗವಾಗಿ ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರದ ಉದ್ಘಾಟನಾ ಸಮಾರಂಭವು ಬೆಳಗ್ಗೆ 10ಕ್ಕೆ ನಿಗದಿಯಾಗಿತ್ತು. ಆದರೆ, ಉದ್ಘಾಟಕರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ಬೆಳಗ್ಗೆ 11.30 ಆಗಿತ್ತು. ಒಂದೂವರೆ ಗಂಟೆ ತಡವಾಗಿ ಆಗಮಿಸಿದ್ದರೂ ಸಣ್ಣ ವಿಷಾದ ಕೂಡ ವ್ಯಕ್ತಪಡಿಸದೇ ಭಾಷಣ ಮಾಡಿದರು.

ಹೊರಾವರಣದಲ್ಲಿ ಓಪನ್ ಸ್ಟೇಜ್ ಹಾಕಿದ್ದರಿಂದ ಶಿಲ್ಪ ಕಲಾವಿದರು, ಕಾವಾ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಬಿಸಿಲಿನಲ್ಲೇ ಸಚಿವರಿಗಾಗಿ ಕಾಯುವ ಪರಿಸ್ಥಿತಿ ಇತ್ತು.

Share this article