ಕನ್ನಡಪ್ರಭ ವಾರ್ತೆ ಆಲೂರು
ಕಿತಬೂರು ಹಾಲು ಉತ್ಪಾದಕರ ಸಂಘದ ನೂತನ ಸಭಾಂಗಣ ಉದ್ಘಾಟನೆಯನ್ನು ಮಾಜಿ ಶಾಸಕ ಎಚ್. ಕೆ. ಕುಮಾರಸ್ವಾಮಿ ಇತ್ತೀಚೆಗೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಆರ್ಥಿಕವಾಗಿ ಮೇಲೆ ಬರಬೇಕಾದರೆ ಸಿಲ್ಕ್ ಮತ್ತು ಮಿಲ್ಕ್ ಕಾರಣ. ರೈತರಿಗೆ ಅವೇ ಆಧಾರಸ್ತಂಭ. ಹಾಲು ಸರಬರಾಜು ಮಾಡಿ ಎಷ್ಟೋ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹಾಲು ಸರಬರಾಜು ಮಾಡುವ ರೈತರು ತಮ್ಮ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಪ್ರಮಾಣದ ಹಾಲನ್ನು ಮನೆ ಬಳಕೆಗೆ ಉಪಯೋಗಿಸಿಕೊಂಡು ರೈತರು ತಮ್ಮ ಅರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ ಮಾತನಾಡಿ, ನಮ್ಮ ಭಾಗದಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈತರ ಉಪ ಕಸುಬಾದ ಪಶುಪಾಲನೆ ಹಾಗೂ ಹಾಲಿನ ಉತ್ಪಾದನೆಯಿಂದ ಜೀವನಕ್ಕೆ ತುಂಬ ಅನುಕೂಲವಾಗುತ್ತಿದೆ. ಹಾಲಿನ ಮಾರಾಟದಿಂದ ರೈತರಿಗೆ ಆದಾಯ ಬರುತ್ತಿದ್ದು, ಇದರಿಂದ ಅನೇಕ ರೈತ ಕುಟುಂಬಗಳು ಅಭಿವೃದ್ಧಿ ಹೊಂದಿವೆ. ರೈತರು ಗುಣಮಟ್ಟದ ಹಾಲಿನ ಉತ್ಪಾದನೆಗೆ ಹೆಚ್ಚಿನ ಗಮನಹರಿಸಬೇಕು. ಹಾಲಿನ ಉತ್ಪಾದನೆ ಹೆಚ್ಚಳದಿಂದ ರೈತರಿಗೆ ಲಾಭವಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗಿ ಈ ಭಾಗದ ರೈತರು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬುದು ನಮ್ಮ ಆಶಯವಾಗಿದೆ. ತಾಲೂಕಿನ ಹಾಗೂ ಜಿಲ್ಲೆಯ ಹೈನೋದ್ಯಮ ಉತ್ತಮ ಪ್ರಗತಿ ಕಾಣಲು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ರೇವಣ್ಣರವರ ಪರಿಶ್ರಮ ಬಹಳ ದೊಡ್ಡದು ಎಂದರು.ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಪಿ ಎಲ್ ನಿಂಗರಾಜು ಹಾಗೂ ಅಧಿಕಾರಿಗಳಾದ ಭವ್ಯ, ಹೆಚ್ ಎನ್, ಯೋಗೇಶ್ ದರ್ಮೇಶ್ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ರಂಗನಾಥ್, ಕಾಂತರಾಜು, ರಂಗೇಗೌಡ ಹಾಗೂ ಜನಪ್ರತಿನಿಧಿಗಳು ಹಾಗೂ ಸಂಘದ ಸಿಬ್ಬಂದಿ ವರ್ಗದವರು ಹಾಜರಿದ್ದರು..