ನಾಡಗೀತೆಯಲ್ಲಿ ಬೌದ್ದರುಧ್ಯಾನ ಪದ ಸೇರಿಸಿ

KannadaprabhaNewsNetwork |  
Published : Jul 23, 2026, 02:00 AM IST
ನಾಡಗೀತೆಯಲ್ಲಿ ಬೌದ್ದರುಧ್ಯಾನ ಪದ ಸೇರಿಸಲು ಒತ್ತಾಯಿಸಿ ಭಾರತೀಯ ಮೂಲ ನಿವಾಸಿ ದ್ರಾವಿಡ ಒಕ್ಕೂಟದಿಂದ ಹುಬ್ಬಳ್ಳಿಯಲ್ಲಿ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಬುದ್ಧರ ಇತಿಹಾಸ ತಿಳಿಯದ ಕೆಲವು ತಿಳಿಗೇಡಿಗಳು ಇದನ್ನು ವಿರೋಧಿಸುತ್ತಿದ್ದಾರೆ. ದೇಶಕ್ಕೆ ಶಾಂತಿ, ಅಹಿಂಸೆ, ಸಮಾನತೆ, ಸಹೋದರತೆಯನ್ನು ಜಗತ್ತಿಗೆ ಸಾರಿದ ಮಹಾನ್‌ ಚೇತನರ ಹೆಸರಿನ ಬಗ್ಗೆ ವಿರೋಧಿಸುತ್ತಿರುವುದು ಖಂಡನಾರ್ಹ.

ಹುಬ್ಬಳ್ಳಿ:

ನಾಡಗೀತೆಯಲ್ಲಿ "ಬೌದ್ದರುದ್ಯಾನ " ಪದ ಸೇರಿಸಲು ಒತ್ತಾಯಿಸಿ ಬುಧವಾರ ಭಾರತೀಯ ಮೂಲ ನಿವಾಸಿ ದ್ರಾವಿಡ ಒಕ್ಕೂಟದಿಂದ ನಗರದ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯಲ್ಲಿ ಮೊದಲು "ಬೌದ್ದರುಧ್ಯಾನ " ಪದವಿತ್ತು. ಈ ಗೀತೆಯನ್ನು ಯಾವಾಗ ನಾಡಗೀತೆಯನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿತೋ ಅಂದಿನಿಂದ ಈ ಗೀತೆಯಲ್ಲಿ ಬೌದ್ದರುಧ್ಯಾನ ಪದವನ್ನು ತೆಗೆದು ಹಾಕಲಾಯಿತು. ಈ ಪದವನ್ನು ಏಕೆ, ಯಾವಾಗ, ಯಾರು ತೆಗೆದರು ಎಂಬುದನ್ನು ಸರ್ಕಾರ ಗಮನಿಸಲಿಲ್ಲ. ಇಂತಹ ಹೀನ ಕೃತ್ಯ ಮಾಡಿದವರನ್ನು ಸರ್ಕಾರ ಪತ್ತೆ ಹಚ್ಚಿ ಅವರಿಗೆ ಉಗ್ರವಾದ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೈಸೂರಿನಲ್ಲಿ ನಡೆದ ಬೌದ್ಧ ಧರ್ಮ ಸಮ್ಮೇಳನದಲ್ಲಿ ಲಕ್ಷಾಂತರ ಬುದ್ಧ ಹಾಗೂ ಬಾಬಾಸಾಹೇಬ್‌ ಅಂಬೇಡ್ಕರ್‌ ಅನುಯಾಯಿಗಳು ಬೌದ್ದರುಧ್ಯಾನ ಪದ ಸೇರ್ಪಡೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈ ಪದ ಮರು ಸೇರ್ಪಡೆಗೆ ನಾಡಿನ ಹೆಸರಾಂತ ಕವಿಗಳು, ಸಾಹಿತಿಗಳು, ಬುದ್ಧಿಜೀವಿಗಳು, ಚಿಂತಕರನ್ನೊಳಗೊಂಡ ಸಮಿತಿ ರಚಿಸಿತು. ಆ ಸಮಿತಿಯು ಪಾರಸಿಕಜೈನರುದ್ಯಾನ ಎಂದು ಮಾರ್ಪಾಡು ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರದಿ ಸಲ್ಲಿಸಿದೆ. ಆದರೆ, ಬುದ್ಧರ ಇತಿಹಾಸ ತಿಳಿಯದ ಕೆಲವು ತಿಳಿಗೇಡಿಗಳು ಇದನ್ನು ವಿರೋಧಿಸುತ್ತಿದ್ದಾರೆ. ದೇಶಕ್ಕೆ ಶಾಂತಿ, ಅಹಿಂಸೆ, ಸಮಾನತೆ, ಸಹೋದರತೆಯನ್ನು ಜಗತ್ತಿಗೆ ಸಾರಿದ ಮಹಾನ್‌ ಚೇತನರ ಹೆಸರಿನ ಬಗ್ಗೆ ವಿರೋಧಿಸುತ್ತಿರುವುದು ಖಂಡನಾರ್ಹ. ಕೆಲವು ಮನುವಾದಿಗಳು ಭಗವಾನ್‌ ಬುದ್ಧನ ಚರಿತ್ರೆ ಮರೆಮಾಚುವ ಪ್ರಯತ್ನದಲ್ಲಿ ಸೋತಿದ್ದಾರೆ. ಸರ್ಕಾರ ಯಾರ ಒತ್ತಡಕ್ಕೂ ಮಣಿಯದೇ ಬೌದ್ದರುಧ್ಯಾನ ಒಳಗೊಂಡ ನಾಡಗೀತೆಯನ್ನು ಅಂತಿಮಗೊಳಿಸಿ ಬಹುತ್ವದ ಭಾರತದ ಆಶೆಯದಂತೆ ನಡೆದುಕೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ರಾಜ್ಯ ಸಂಚಾಲಕ ಶಂಕರ ಅಜಮನಿ, ಮೇಘರಾಜ ಹಿರೇಮನಿ, ಬಾಬು ಬೋಜಗಾರ, ಸುಭಾಷ ಸಾವಳಗಿ, ಪರಶುರಾಮ ಹಂಜಗಿ, ಅರವಿಂದ ದೊಡ್ಡಮನಿ, ಬಸವರಾಜ ದೊಡ್ಡಮನಿ, ರವಿ ಹರಿಜನ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಪೊಲೀಸ್‌ ಇಲಾಖೆ ಹದ್ದಿನಕಣ್ಣು
ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ಸರ್ವರ್‌ ಕಿರಿಕಿರಿ!