ಕಳೆದ 3 ತಿಂಗಳಿಂದ ಬಾಕಿ ಇರುವ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ದಾವಣಗೆರೆ ತಾಲೂಕು ಸಮಿತಿ ಗುರುವಾರ ನಗರದ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ದಾವಣಗೆರೆ: ಕಳೆದ 3 ತಿಂಗಳಿಂದ ಬಾಕಿ ಇರುವ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ದಾವಣಗೆರೆ ತಾಲೂಕು ಸಮಿತಿ ಗುರುವಾರ ನಗರದ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.ಉಪ ವಿಭಾಗಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಫೆಡರೇಶನ್ ರಾಜ್ಯಾಧ್ಯಕ್ಷ ಆವರಗೆರೆ ಚಂದ್ರು ಮಾತನಾಡಿ, ಬಿಸಿಯೂಟ ತಯಾರಕರಿಗೆ ವೇತನ ನೀಡಲು ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಅನುದಾನದ ಹಣ ಜಮಾಗೊಂಡಿದ್ದು, ಇವರಿಗೆ ವೇತನ ನೀಡಲು ಹಣದ ಕೊರತೆ ಇರುವುದಿಲ. ಕಾರಣ ಮಧ್ಯಾಹ್ನ ಉಪಹಾರ, ಯೋಜನೆ ರಾಜ್ಯ ಕಚೇರಿ ಅಧಿಕಾರಿಗಳು ಸರಿಯಾಗಿ ತಮ್ಮ ಕೆಲಸ ನಿರ್ವಹಿಸದೆ ನಿರ್ಲಕ್ಷ್ಯ ತೋರಿರುವುದೇ ಇದಕ್ಕೆಲ್ಲ ಕಾರಣ. ಶಿಕ್ಷಣ ಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಿರುವುದೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಯೂಟ ತಯಾರಕರ ಸಮಸ್ಯೆಗಳು ಅನೇಕ ಇದ್ದು, ಅವುಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲು ಹಲವು ಬಾರಿ ಶಿಕ್ಷಣ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಮಂತ್ರಿಗಳು ನಿರ್ಲಕ್ಷ್ಯ ಮಾಡಿದ್ದು, ಈ ಹಿನ್ನೆಲೆ ಇಂದು ಹೋರಾಟ ಹಮ್ಮಿಕೊಳ್ಳಲಾಗಿದೆ. ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಚೇರಿ ಒಳಗೆ ಕುಳಿತು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷೆ ಮಳಲ್ಕೆರೆ ಜಯಮ್ಮ, ರಮೇಶ್ ಸಿ.ದಾಸರ, ಜಿ.ಎಲ್ಲಪ್ಪ, ನಾಗರತ್ನಮ್ಮ, ನರೇಗಾ ರಂಗನಾಥ್, ಎ.ತಿಪ್ಪೇಶ್, ಸರೋಜಾ, ಕರೂರು ಮಂಜುಳಾ, ಬಿಸಿಯೂಟ ತಯಾರಕರು ಇತರರು ಇದ್ದರು.