ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಸಿಬ್ಬಂದಿಯ ಗೌರವಧನ ಹೆಚ್ಚಳ ಮತ್ತು ಸಾಮಾಜಿಕ ಭದ್ರತೆ ವಿಷಯ ಕುರಿತು ಸಂಸದ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಸಿಬ್ಬಂದಿ ಧರಣಿ ನಡೆಸುತ್ತಿರುವ ಸಮಯದಲ್ಲೇ ಸಂಸದ ಡಾ.ಕೆ.ಸುಧಾಕರ್ ಗುರುವಾರ ನವ ದೆಹಲಿಯಲ್ಲಿ ಲೋಕಸಭೆಯ ಕಲಾಪದ ಶೂನ್ಯವೇಳೆಯಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿ ಮಾತನಾಡಿದರು.ಬಹುತೇಕ ಸಿಬ್ಬಂದಿ ಬಡವರು
ಅಂಗನವಾಡಿ ಕಾರ್ಯಕರ್ತರು ಹಾಗೂ ಬಿಸಿಯೂಟ ಸಿಬ್ಬಂದಿಯಲ್ಲಿ ಬಹುತೇಕ ಬಡ ಕುಟುಂಬದ ಮಹಿಳೆಯರೇ ಆಗಿದ್ದಾರೆ. ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಕೆ, ಅಪೌಷ್ಟಿಕತೆ ನಿವಾರಣೆ, ಗರ್ಭಿಣಿಯರು ಹಾಗೂ ತಾಯಂದಿರಿಗೆ ಸರ್ಕಾರಿ ಯೋಜನೆಗಳ ನೆರವು ಸೇರಿದಂತೆ ಹಲವಾರು ವಿಧದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಈ ಮಹಿಳೆಯರು ಅತಿ ಕಡಿಮೆ ಗೌರವಧನ ಪಡೆಯುತ್ತಿದ್ದು, ಆರ್ಥಿಕವಾಗಿ ತೀರಾ ದುರ್ಬಲರಾಗಿದ್ದಾರೆ ಎಂಬುದು ಬೇಸರದ ಸಂಗತಿ. ಆದ್ದರಿಂದ ಹೋರಾಟ ಮಾಡುತ್ತಿರುವ ಮಹಿಳೆಯರ ಅಹವಾಲುಗಳನ್ನು ಕೇಂದ್ರ ಸರ್ಕಾರ ಆಲಿಸಬೇಕು ಎಂದು ಮನವಿ ಮಾಡಿದ ಸಂಸದರು, ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದರು.ಗೌರವಧನದ ಪರಿಷ್ಕರಣೆ
ಬೆಲೆ ಏರಿಕೆಯನ್ನು ಗಮನದಲ್ಲಿರಿಸಿಕೊಂಡು ಗೌರವಧನದ ಪರಿಷ್ಕರಣೆ, ಪಿಂಚಣಿ, ವಿಮೆ ಸೇರಿದಂತೆ ಸಾಮಾಜಿಕ ಭದ್ರತೆ ಕಲ್ಪಿಸುವುದು,ಕಾರ್ಯಕರ್ತೆಯರ ಕೆಲಸವನ್ನು ʼಅಗತ್ಯ ಸೇವೆಗಳುʼ ಎಂದು ಅಧಿಕೃತವಾಗಿ ಗುರುತಿಸುವುದು.ದೇಶದಾದ್ಯಂತ ಕಾರ್ಯಕರ್ತೆಯರಿಗೆ ಏಕರೂಪದ ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸ ಬೇಕೆಂದು ಮನವಿ ಮಾಡಿದರು.ಆರೋಗ್ಯ ವ್ಯವಸ್ಥೆ ಬಲಪಡಿಸಿದೇಶದ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಕ್ಕಾಗಿ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಸಿಬ್ಬಂದಿಗೆ ಸೂಕ್ತವಾದ ಗೌರವ ನೀಡುವುದು ಅವಶ್ಯಕವಾಗಿದೆ. ನಮ್ಮ ಮಕ್ಕಳು ಹಾಗೂ ತಾಯಂದಿರ ಆರೋಗ್ಯ ಕಾಪಾಡುವ ಈ ಸಿಬ್ಬಂದಿಗೆ ಭದ್ರತೆ, ಘನತೆ ಹಾಗೂ ಗೌರವ ನೀಡುವುದು ಅಗತ್ಯ ಎಂದು ಸಂಸದ ಡಾ.ಕೆ.ಸುಧಾಕರ್ ಒತ್ತಿ ಹೇಳಿದರು.