ಬ್ಯಾಡಗಿ: ಇತ್ತೀಚೇಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಿಗೆ ಹೋಲಿಸಿದರೆ ಕನ್ನಡ ಭಾಷೆಯಲ್ಲೇ ಅತೀಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣವಾಗುತ್ತಿರುವುದು ಬೇಸರದ ವಿಷಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಆತಂಕ ವ್ಯಕ್ತಪಡಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭವನದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ.100 ಅಂಕಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಓದುವ ಹಾಗೂ ಬರೆಯುವ ಆಸಕ್ತಿ ಕಡಿಮೆಯಾಗುತ್ತಿದೆ, ಇದರಿಂದಾಗಿ ಕನ್ನಡ ಭಾಷೆಯಲ್ಲಿನ ಅನುತ್ತೀರ್ಣ ಪ್ರಮಾಣವೂ ಸಹ ಹೆಚ್ಚಳವಾಗುತ್ತಿರುವುದು ಕನ್ನಡಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಭಾಷೆ ಉಳಿಯಲು ಹಾಗೂ ಬೆಳೆಯಲು ಬ್ಯಾಡಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವಿಶೇಷ ಪ್ರಯತ್ನ ಮಾಡುತ್ತಿದೆ, ಕನ್ನಡದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬ್ಯಾಡಗಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ತಾಲೂಕಿನ 40 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಸಾಹಿತಿಗಳಾದ ಜೀವರಾಜ ಛತ್ರದ ಹಾಗೂ ಮಾಲತೇಶ ಚಳಗೇರಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ, ಇನ್ನರ್ವೀಲ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ, ಲಕ್ಷ್ಮೀ ಉಪ್ಪಾರ, ನಿವೃತ್ತ ಪ್ರಾಚಾರ್ಯ ಆನಂದ ಮುದುಕಮ್ಮನವರ, ಎಸ್.ಬಿ. ಇಮ್ಮಡಿ, ಮಾಲತೇಶ ಅರಳೀಮಟ್ಟಿ, ಮಂಜುನಾಥ ಉಪ್ಪಾರ, ವಿರೇಂದ್ರ ಶೆಟ್ಟರ, ಜಿತೇಂದ್ರ ಸುಣಗಾರ, ರಾಜಣ್ಣ ಹೊಸಳ್ಳಿ, ಪರುಶರಾಮ ಮೇಲಗಿರಿ, ಬಿ.ಎಸ್. ಹೊಸಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.