ಪರಿಸರದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪದಿಂದ ಜಲಕ್ಷಾಮ ಹೆಚ್ಚಳ: ಡಾ.ರವಿಶಂಕರ ಅತೃಪ್ತಿ

KannadaprabhaNewsNetwork | Published : Apr 6, 2024 12:46 AM

ಸಾರಾಂಶ

ಅಂತರ್ಜಲದ ಅತಿ ಬಳಕೆಯಿಂದ ನೀರಿನ ಮರು ಬಳಕೆ ಮಾಡದೇ ಇರುವುದರಿಂದ ಪ್ರಸ್ತುತ ದಿನಗಳಲ್ಲಿ ತಾಪಮಾನದ ಜೊತೆಗೆ ಅತಿಯಾದ ಜಲಕ್ಷಾಮವನ್ನು ಅನುಭವಿಸುತ್ತೇವೆ. ವಿಪರೀತ ಮರಗಳ ಹನನದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಕೆರೆ, ಕಟ್ಟೆಗಳು, ನದಿಗಳ ಸ್ವರೂಪವನ್ನೇ ಹಾಳು ಮಾಡಿದ್ದು, ನೀರನ್ನು ಹಿತವಾಗಿ ಬಳಕೆ ಮಾಡದಿದ್ದರಿಂದ ಇಂದು ಭೀಕರ ಜಲಕ್ಷಾಮಕ್ಕೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪರಿಸರದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪದಿಂದ ಪ್ರಸ್ತುತ ಜಲಕ್ಷಾಮ ಹೆಚ್ಚಾಗಿದೆ ಎಂದು ತಾಲೂಕು ಗುರು ಶಾಂತಮಲ್ಲಪ್ಪ ಸರ್ಕಾರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ವೈದ್ಯ ಡಾ.ರವಿಶಂಕರ ಅತೃಪ್ತಿ ವ್ಯಕ್ತಪಡಿಸಿದರು.

ಪಟ್ಟಣದ ವಜ್ರಕಾಯ ಪ್ಯಾರಾ ಮೆಡಿಕಲ್ ಕಾಲೇಜಿನ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮದ್ದೂರು ವತಿಯಿಂದ ಜಿಲ್ಲಾ ಕಸಾಪ ಅಧ್ಯಕ್ಷ ದಿ.ಸಿ.ಕೆ.ರವಿಕುಮಾರ ಚಾಮಲಾಪುರ ರವರ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ನೀರಿನ ಸದ್ಬಳಕೆ- ಅಂತರ್ಜಲ ವೃದ್ಧಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಮಿತಿಗೊಳಿಸಿ ಪರಿಸರದಲ್ಲಿ ಉಂಟಾಗಿರುವ ಏರುಪೇರುಗಳನ್ನು ತಡೆಯಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ತೊರೆಶೆಟ್ಟಹಳ್ಳಿ ಎಸ್.ಪ್ರಸನ್ನಕುಮಾರ ಮಾತನಾಡಿ, ಅಂತರ್ಜಲದ ಅತಿ ಬಳಕೆಯಿಂದ ನೀರಿನ ಮರು ಬಳಕೆ ಮಾಡದೇ ಇರುವುದರಿಂದ ಪ್ರಸ್ತುತ ದಿನಗಳಲ್ಲಿ ತಾಪಮಾನದ ಜೊತೆಗೆ ಅತಿಯಾದ ಜಲಕ್ಷಾಮವನ್ನು ಅನುಭವಿಸುತ್ತೇವೆ ಎಂದರು.

ರೈತ ಮುಖಂಡ ಕುದುರೆಗಂಡಿ ನಾಗರಾಜು ಮಾತನಾಡಿ, ವಿಪರೀತ ಮರಗಳ ಹನನದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಕೆರೆ, ಕಟ್ಟೆಗಳು, ನದಿಗಳ ಸ್ವರೂಪವನ್ನೇ ಹಾಳು ಮಾಡಿದ್ದು, ನೀರನ್ನು ಹಿತವಾಗಿ ಬಳಕೆ ಮಾಡದಿದ್ದರಿಂದ ಇಂದು ಭೀಕರ ಜಲಕ್ಷಾಮಕ್ಕೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಜ್ರಕಾಯ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸೊ.ರಾ.ಶಿವರಾಮ ಮಾತನಾಡಿ, ವಿದ್ಯಾರ್ಥಿಗಳು ನೀರಿನ ಮೌಲ್ಯದ ಬಗ್ಗೆ ಅರಿತು ಹಾಗೂ ಮಿತ ಬಳಕೆ ಮಾಡುವುದರಿಂದ ಸಂಕಷ್ಟ ಸಮಯದಿಂದ ಪಾರಾಗಬಹುದು ಎಂದು ಅಭಿಪ್ರಾಯಪಟ್ಟರು. ಜನಪದ ಗಾಯಕ ಚಾಮನಹಳ್ಳಿ ಮಂಜು ಪರಿಸರ ಗೀತೆಗಳು ಹಾಡಿದರು.

ವಿಚಾರ ಸಂಕಿರಣದಲ್ಲಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೂರು ಮನು, ರೈತ ಮುಖಂಡರಾದ ಎಚ್.ಜಿ.ಪ್ರಭುಲಿಂಗ, ಕೆ.ಜಿ.ಉಮೇಶ್, ಪಟೇಲ್ ಹರೀಶ್, ಎಂ.ವೀರಪ್ಪ, ಚಾಮನಹಳ್ಳಿ ರಾಮಯ್ಯ, ಸೀನಪ್ಪನ ದೊಡ್ಡಿ ಶ್ರೀನಿವಾಸ್ ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ವಿ.ಸಿ.ಉಮಾಶಂಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಉಪಾಧ್ಯಕ್ಷ ತಿಪ್ಪೂರು ರಾಜೇಶ್ ನಿರೂಪಿಸಿ ವಂದಿಸಿದರು.

Share this article