ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿರುವ ತಾಲೂಕಿನಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಇಂಬು ನೀಡುವಂತೆ ತಾಲೂಕಿನಲ್ಲಿ ಆರಂಭಗೊಂಡಿರುವ ಇಂಗ್ಲಿಷ್ ಮಾಧ್ಯಮದ ಪಿಎಂಶ್ರೀ ಶಾಲೆಗಳಲ್ಲಿ ದಾಖಲಾತಿಗೆ ಬಾರಿ ಪೈಪೋಟಿ ಏರ್ಪಟ್ಟು ಒಂದೇ ಗಂಟೆಗೆ ಎಲ್ಲಾ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣ ಗೊಂಡಿರುವುದು ಸಾಕ್ಷಿಯನ್ನಾಗಿಸಿದೆ.ಕೇಂದ್ರ ಸರ್ಕಾರದ ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ)ಶಾಲೆ ಎಲ್ಕೆಜಿ ಯಿಂದ 8ನೇ ತರಗತಿಯವರೆಗೆ ನಡೆಯುತ್ತಿದೆ. ಇಂಗ್ಲಿಷ್ ಮಾಧ್ಯಮದ ಶಾಲೆ ಇದಾಗಿರುವ ಕಾರಣ ಇಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಪಟ್ಟಣ ಹೊರತು ಪಡಿಸಿ ಎಲ್ಲಾ ಕಡೆಯಲ್ಲೂ ಬಾರಿ ಪೈಪೋಟಿಯೇ ಏರ್ಪಟ್ಟಿತ್ತು. ಮೇ 30ಕ್ಕೆ ಆರಂಭಗೊಂಡ ದಾಖಲಾತಿ ಪ್ರಕ್ರಿಯೆ ಒಂದೇ ಗಂಟೆಯಲ್ಲಿ ಪೂರ್ಣಗೊಂಡಿದೆ. ಎಲ್ಕೆಜಿ ಅರ್ಜಿ ಪಡೆಯಲು ನಾ ಮುಂದು ತಾ ಮುಂದು ಎನ್ನುವಂತೆ ಪೋಷಕರು ದಾವಿಸುವುದು ಸಾಮಾನ್ಯವಾಗಿತ್ತು.
ಪಟ್ಟಣದ ಬಾಲಕಿಯರ ಶಾಲೆ ಸೇರಿದಂತೆ ಕೋನಾಪುರ, ಕೊಂಡ್ಲಹಳ್ಳಿ ಪ್ರಾಥಮಿಕ ಶಾಲೆ ಸೇರಿದಂತೆ ಒಟ್ಟು 3 ಪಿಎಂಶ್ರೀ ಶಾಲೆಗಳು ಇವೆ. ಪಟ್ಟಣದ ಶಾಲೆ ಹೊರತು ಪಡಿಸಿದರೆ. ಉಳಿದ ಶಾಲೆಗಳಲ್ಲಿ ದಾಖಲಾತಿಗೆ ಬಾರಿ ಬೇಡಿಕೆಯಾಗಿದೆ. ಅದರಲ್ಲೂ ಕೊಂಡ್ಲಹಳ್ಳಿ ಮತ್ತು ಬಿಜಿ ಕೆರೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹೆಚ್ಚು ಒತ್ತಡವಿದೆ. ಕೊಂಡ್ಲಹಳ್ಳಿಯಲ್ಲಿ ಮಧ್ಯರಾತ್ರಿಯಿಂದಲೇ ಅರ್ಜಿಗಾಗಿ ಕಾದು ಕುಳಿತಿದ್ದ ಘಟನೆಗಳು ಜರುಗಿದವು.ಎಲ್ಕೆಜಿಯಿಂದ ಆರಂಭವಾಗುವ ಈ ಶಾಲೆಗಳಲ್ಲಿ ಕೇವಲ 30 ಮಕ್ಕಳ ಪ್ರವೇಶಕ್ಕೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಇರುವ ಕಾರಣ ಪೋಷಕರು ತಮ್ಮ ಮಕ್ಕಳಿಗೆ ದಾಖಲಾತಿ ಕೊಡಿಸಲು ಬೆಳಗಿನ ಜಾವದಿಂದಲೇ ನಾ ಮುಂದು ತಾ ಮುಂದು ಎನ್ನುವಂತೆ ಕದ ತೆರೆಯುವ ಮುನ್ನವೇ ಶಾಲಾ ಆವರಣದಲ್ಲಿ ಕಾದು ಕುಳಿತಿದ್ದರು. ಒಂದೇ ಗಂಟೆಯಲ್ಲಿ ಅರ್ಜಿಗಳು ಪೂರ್ಣಗೊಂಡು ಬಾರಿ ನಿರೀಕ್ಷೆಯಲ್ಲಿ ಆಗಮಿಸಿದ್ದ ಕೆಲ ಪೋಷಕರು ಪ್ರವೇಶಾತಿ ಸಿಗದೆ ಅಸಮದಾನ ವ್ಯಕ್ತಪಡಿಸಿದ್ದು ಕಂಡುಬಂತು.
ಖಾಸಗಿ ಶಾಲೆಗೆ ಸೇರಿಸುವ ಶಕ್ತಿ ಇಲ್ಲದ ಪೋಷಕರು ತುಸು ದೂರವಾದರೂ ಸರಿ ಸರ್ಕಾರಿ ಶಾಲೆಯ ಇಂಗ್ಲಿಷ್ ಮಾಧ್ಯಮಕ್ಕೆ ಮಕ್ಕಳನ್ನು ದಾಖಲಿಕರಿಸಲು ಮುಂದಾಗುತ್ತಿದ್ದಾರೆ. ಸೀಮಿತ ಸೀಟುಗಳು ಪರಿಣಾಮ ಬಹುತೇಕ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ. ಬಡ ಮಕ್ಕಳ ನೆರವಿಗಾಗಿ ಇಲಾಖೆ ಸೀಟು ಹೆಚ್ಚಳಕ್ಕೆ ಮುಂದಾಗಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿದೆ.