ಕನ್ನಡಪ್ರಭ ವಾರ್ತೆ ನಾಯಕನಹಟ್ಟಿಅರಿವು ಕೊರತೆ, ಅನಕ್ಷರತೆ ಕಾರಣದಿಂದ ಹೆಚ್ಚಾಗಿ ಬಾಲ್ಯ ವಿವಾಹಗಳು ಕಂಡುಬರುತ್ತಿವೆ. ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅಧಿಕಾರಿಗಳು ಅಂತಹ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ಮುಟ್ಟಿಸಿ ಅರಿವು ಮೂಡಿಸುವ ಕಾರ್ಯ ಅಗತ್ಯವಾಗಿ ಮಾಡಬೇಕಿದೆ ಎಂದು ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಮಂಜುಳಾ ಶ್ರೀಕಾಂತ ಹೇಳಿದರು.ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಕಪಿಲೆಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಅಲ್ಲಿನ ಮಹಿಳೆಯರು ರಕ್ತಹೀನತೆಯಿಂದ ಹೆರಿಗೆ ಸಂದರ್ಭದಲ್ಲಿ ಸಾವನ್ನಪ್ಪುತ್ತಿದ್ದಾರೆ. ಅಂತಹ ಮಹಿಳೆಯರಿಗೆ ರಕ್ತ ಹೀನತೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷೆ ಸರ್ವಮಂಗಳಾ ಉಮಾಪತಿ ಮಾತನಾಡಿ, ಗರ್ಭೀಣಿಯರು ಉತ್ತಮ ಆಹಾರವನ್ನು ಸೇವಿಸಿದರೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮನೆ ಅಕ್ಕ-ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು. ಪರಿಸರವನ್ನು ಉಳಿಸಬೇಕಾದರೆ ಹೆಚ್ಚು ಗಿಡ, ಮರಗಳನ್ನು ಬೆಳೆಸಬೇಕು. ಕಾಡನ್ನು ಉಳಿಸಿ, ನಾಡು ಉಳಿಸಿ ಎಂದು ಕರೆ ನೀಡಿದರು.
ಗಿಡ, ಮರಗಳನ್ನು ಬೆಳೆದರೆ ಮಳೆ-ಬೆಳೆ, ಶುದ್ಧವಾದ ಗಾಳಿ ಸಿಗುತ್ತವೆ. ಶುದ್ಧ ವಾತಾವರಣ ಕೂಡ ಗರ್ಭಿಣಿ ಬಾಣಂತಿಯರಿಗೆ ಅಗತ್ಯ ಎಂದರು.ಪ.ಪಂ ಸದಸ್ಯೆ ಸುನಿತಾ ಮುದಿಯಪ್ಪ ಮಾತನಾಡಿ, ಮನುಷ್ಯನಿಗೆ, ಪ್ರಾಣಿಗಳಿಗೆ ಬೇಕಾಗಿರುವುದು ಆಹಾರ, ನೀರು. ಮುಖ್ಯವಾಗಿ ಆಮ್ಲಜನಕದ ಅಗತ್ಯವೂ ಇದೆ. ಆದರೆ ಮನುಷ್ಯರು ಆಸೆ ಅಮಿಷಕ್ಕೆ ಒಳಗಾಗಿ ಗಿಡ, ಮರಗಳನ್ನು ಕಡಿಯುತ್ತಿದ್ದಾರೆ. ಕೆಟ್ಟ ವಾತಾವಣ ಗರ್ಭಿಣಿಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.