ಮುಳಬಾಗಿಲು: ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಕೃಷಿಯಲ್ಲಿ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಜವೀದಾ ನಸೀಮ ಖಾನಮ್ ಆತಂಕ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನಗಳ ಆಹಾರ ಪದಾರ್ಥಗಳಲ್ಲಿ ಕೀಟನಾಶಕ ಶೇಷಾಂಕ ಹೆಚ್ಚಿನ ಪ್ರಮಾಣ ಇರುವುದು ಇಲಾಖೆಯಿಂದ ಕೈಗೊಂಡ ಕೃಷಿ ಆಹಾರ ಪದಾರ್ಥಗಳ ವಿಶ್ಲೇಷಣಾ ವರದಿಯಲ್ಲಿ ಬಯಲಾಗಿದೆ ಎಂದು ಹೇಳಿದರು.
ಈ ಬೆಳವಣಿಗೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚಾಗುವುದಕ್ಕೆ ಇದೂ ಒಂದು ಕಾರಣ ಎಂದು ತಿಳಿಸಿದರು.ರೈತರು ಯಾವುದೇ ಪರಿಕರಗಳನ್ನು ಪಡೆದುಕೊಳ್ಳಲು ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಮೊದಲು ಭೇಟಿ ನೀಡುತ್ತಿದ್ದು, ಈ ಕುರಿತು ಹೆಚ್ಚು ತಿಳಿವಳಿಕೆಯನ್ನು ನೀಡಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಗೊಬ್ಬರ ಬಳಕೆ ಮಾಡುವಂತೆ ಅರಿವು ಮೂಡಿಸಲು ಕರೆ ನೀಡಿದರು.
ಅವಶ್ಯಕತೆಗೆ ಅನುಗುಣವಾಗಿ ಕೀಟನಾಶಕಗಳ ಬಳಕೆ ಮಾಡುವ ಮತ್ತು ಬೆಳೆ ಕಟಾವು ಮಾಡುವ ೧೫ ದಿನಗಳ ಮುಂಚೆ ಯಾವುದೇ ಕೀಟನಾಶಕಗಳನ್ನು ಬಳಕೆ ಮಾಡಬಾರದು ಎಂದರಲ್ಲದೆ, ಮುಂದಿನ ದಿನಗಳಲ್ಲಿ ಮಣ್ಣಿನ ಸೂಕ್ಷ್ಮ ಜೀವಿಗಳ ಸಂರಕ್ಷಣೆಯ ಜೊತೆಗೆ ಆಹಾರ ಪದಾರ್ಥಗಳಲ್ಲಿನ ಕೀಟನಾಶಕ ಶೇಷಾಂಶವನ್ನು ತಗ್ಗಿಸಲು ಮುಂದಾಗಬೇಕೆಂದರು.ಕೃಷಿ ಉಪ ನಿರ್ದೇಶಕ ನಾಗರಾಜ್, ಸಹಾಯಕ ಕೃಷಿ ನಿರ್ದೇಶಕ ಕೆ. ಪ್ರಮೋದ್ ಬಾಬು, ಸಂಪನ್ಮೂಲ ವ್ಯಕ್ತಿ, ಕೃಷಿ ವಿಜ್ಞಾನಿ ಶ್ವೇತ, ತಾಂತ್ರಿಕ ಅಧಿಕಾರಿ ಶುಭ, ವ್ಯವಸ್ಥಾಪಕಿ ನಿರ್ಮಲ ಇದ್ದರು.