ಭೂಹಕ್ಕಿಗಾಗಿ ಸಾಗರದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಶುರು

KannadaprabhaNewsNetwork | Published : Oct 22, 2024 12:12 AM

ಸಾರಾಂಶ

ಮಲೆನಾಡು ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಡಾ. ಎಚ್. ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ ಮತ್ತು ಮಲೆನಾಡು ರೈತರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಅನಿರ್ದಿಷ್ಟಾವಧಿಯ ಪ್ರತಿಭಟನೆ ಸೋಮವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಆರಂಭಗೊಂಡಿತು. ಇದಕ್ಕೂ ಮೊದಲು ಪಟ್ಟಣದ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಜನಾಂದೋಲನ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಹಾದು ಬಂದು ಎಸಿ ಕಚೇರಿ ಎದುರು ಸಮಾವೇಶಗೊಂಡಿತು.

ಕನ್ನಡಪ್ರಭವಾರ್ತೆ ಸಾಗರ

ಮಲೆನಾಡು ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಡಾ. ಎಚ್. ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ ಮತ್ತು ಮಲೆನಾಡು ರೈತರ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಅನಿರ್ದಿಷ್ಟಾವಧಿಯ ಪ್ರತಿಭಟನೆ ಸೋಮವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಆರಂಭಗೊಂಡಿತು. ಇದಕ್ಕೂ ಮೊದಲು ಪಟ್ಟಣದ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಜನಾಂದೋಲನ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಹಾದು ಬಂದು ಎಸಿ ಕಚೇರಿ ಎದುರು ಸಮಾವೇಶಗೊಂಡಿತು.

ಜನಾಂದೋಲನ ಜಾಥಾಕ್ಕೆ ಚಾಲನೆ ನೀಡಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಹೋರಾಟದ ಮೂಲಕ ಭೂಮಿಯ ಹಕ್ಕು ದಕ್ಕಿಸಿಕೊಳ್ಳುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೋರಾಟ, ಜೈಲು, ಅನ್ಯಾಯ ಬಯಲು ಎನ್ನುವುದೇ ನಮ್ಮ ಹೋರಾಟದ ಬದುಕಿನ ಘೋಷವಾಕ್ಯವಾಗಿತ್ತು. ಭೂ ಮಂಜೂರಾತಿಗಾಗಿ ಈ ನೆಲದಲ್ಲಿ ಅನೇಕ ಹೋರಾಟಗಳು ನಡೆದಿವೆ. ರೈತರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಧ್ವನಿ ಎತ್ತುವ ರೈತರಿಗೆ ತಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ಹೇಳಿದರು.

ಸಿಗಂಧೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, ರೈತರು ಭೂಮಿಯ ಹಕ್ಕು ದೊರಕಿಸಿಕೊಳ್ಳಲು ಪಕ್ಷಾತೀತ ಹೋರಾಟ ಅಗತ್ಯ. ಇದು ನಮ್ಮ ಜೀವನದ ಹೋರಾಟ, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈಗಾಗಲೆ ಚಳವಳಿ ಮೂಲಕ ಗೇಣಿಹಕ್ಕು ಪಡೆದಿದ್ದೇವೆ. ಬಗರ್‌ಹುಕುಂ ಭೂಮಿ ಪಡೆಯಲು ಇನ್ನೊಂದು ದೊಡ್ಡಮಟ್ಟದ ಹೋರಾಟದ ಅಗತ್ಯವಿದ್ದು, ಅದಕ್ಕೆ ಶೀಘ್ರ ಚಾಲನೆ ಸಿಗಲಿದೆ ಎಂದು ತಿಳಿಸಿದರು.

ನಾವು 64 ವರ್ಷಗಳಿಂದ ಉಳಿಸಿಕೊಂಡು ಬಂದ ಜಮೀನು ವಜಾ ಮಾಡುತ್ತಾರೆ ಎಂದರೆ ಸರ್ಕಾರದವರಿಗೆ ತಲೆ ಇದೆಯಾ ಎಂದು ಪ್ರಶ್ನಿಸಬೇಕಾಗುತ್ತದೆ. ನಾವೇನು ಬ್ರಿಟಿಷರ ಸರ್ಕಾರದಲ್ಲಿ ಇಲ್ಲ. ನಮ್ಮವರದ್ದೇ ಸರ್ಕಾರವಾಗಿದ್ದು, ರೈತರ ಭೂಹಕ್ಕು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಚ್. ಹಾಲಪ್ಪ ಮಾತನಾಡಿ, ರೈತರ ಭೂಮಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದರೆ ಕಾಗೋಡು ಚಳವಳಿ ಮಾದರಿ ಇನ್ನೊಂದು ಹೋರಾಟದ ಅಗತ್ಯವಿದೆ. ರೈತರ ವಿವಿಧ ಭೂಹಕ್ಕು ಸಮಸ್ಯೆಗೆ ಎಲ್ಲಾ ಸರ್ಕಾರಗಳು ಕಾರಣವಾಗಿದೆ. ಮಲೆನಾಡು ರೈತರು ಭೂಮಿಯನ್ನು ಸಂರಕ್ಷಣೆ ಮಾಡಿಕೊಂಡು ಬಂದವರು. ತಲತಲಾಂತರದಿಂದ ಭೂಮಿ ಸಾಗುವಳಿ ಮಾಡಿಕೊಂಡು ಬಂದ ರೈತರನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡುವ ಕ್ರಮ ಸರಿಯಲ್ಲ. ರೈತ ಸಂಘ ಅತ್ಯಂತ ವ್ಯವಸ್ಥಿತವಾಗಿ ಹೋರಾಟ ಸಂಘಟಿಸಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಮಲೆನಾಡಿನ ರೈತರು ಸಂಕಷ್ಟದ ನಡುವೆ ಸಂಘರ್ಷದ ಬದುಕು ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರು ಸೇರಿದಂತೆ ಜಿಲ್ಲೆಯ ಅನೇಕ ವಿದ್ಯುತ್ ಯೋಜನೆಗಳಿಗೆ ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಬಗರ್‌ಹುಕುಂಗೆ ಅರ್ಜಿ ಸಲ್ಲಿಸಿದ್ದರೂ ಈ ತನಕ ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ರೈತರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದೆ. ತಕ್ಷಣ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಂದಾಯ, ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ, ರೈತರ ಸಮಸ್ಯೆಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ನವೆಂಬರ್ 1ರಂದು ಪ್ರತ್ಯೇಕ ರಾಜ್ಯ ಘೋಷಣೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸೊರಬ ತಾಲೂಕು ಶೀಗೆಹಳ್ಳಿ ಗ್ರಾಮದ 1000ಕ್ಕೂ ಹೆಚ್ಚು ಕುಟುಂಬಗಳಿಗೆ ಒಕ್ಕಲೆಬ್ಬಿಸಲು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ರೈತರು ಬಾರುಕೋಲು ಬಾರಿಸಿಕೊಳ್ಳತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ತೀ.ನ. ಶ್ರೀನಿವಾಸ್, ಟಿ.ಡಿ. ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಡಾ. ರಾಜನಂದಿನಿ ಕಾಗೋಡು, ರವಿ ಕುಗ್ವೆ, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಶ್ರೀಕರ್, ಪರಶುರಾಮ ಸೀಗೆಹಳ್ಳಿ, ಡಾ. ರಾಮಚಂದ್ರಪ್ಪ, ಭರ್ಮಪ್ಪ ಅಂದಾಸುರ, ಶಿವಾನಂದ ಕುಗ್ವೆ, ಎನ್.ಡಿ. ವಸಂತ ಕುಮಾರ್, ರೇವಪ್ಪ ಕೆ. ಹೊಸಕೊಪ್ಪ ಇನ್ನಿತರರು ಹಾಜರಿದ್ದರು.ಮೈಕ್ ಎಸೆದ ಡಾ. ರಾಮಪ್ಪ ಸಿಗಂದೂರು

ಗಣಪತಿ ದೇವಸ್ಥಾನ ಆವರಣದಲ್ಲಿ ರೈತ ಜಾಥಾಕ್ಕೆ ಕಾಗೋಡು ತಿಮ್ಮಪ್ಪ ಚಾಲನೆ ನೀಡಿ ಮಾತನಾಡಿದರು. ನಂತರ ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿದರು. ಸಂಘಟಕರು ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಭಾಷಣ ಮಾಡಲು ಮೈಕ್ ಕೊಟ್ಟಾಗ ಸಿಗಂದೂರು ರಾಮಪ್ಪ ಸಿಡಿದು ನಿಂತರು. ಸಂಘಟಕರ ಕೈಯಿಂದ ಮೈಕ್ ಕಿತ್ತುಕೊಂಡು ಎಸೆದು ಮೆರವಣಿಗೆ ಪ್ರಾರಂಭ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘಟಕರು ಎಲ್ಲರನ್ನೂ ಶಾಂತಗೊಳಿಸಿ ಮೆರವಣಿಗೆಯಲ್ಲಿ ಕರೆದೊಯ್ದ ಘಟನೆ ನಡೆಯಿತು.

Share this article