ಬೇಡಿಕೆ ಈಡೇರಿಕೆಗೆ ಒತ್ತಾಯ, ಪೌರಸೇವಾ ನೌಕರರ ಅನಿರ್ದಿಷ್ಟ ಮುಷ್ಕರ

KannadaprabhaNewsNetwork | Updated : May 28 2025, 12:03 AM IST
ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದವರು ಶಿರಹಟ್ಟಿ ಪಟ್ಟಣ ಪಂಚಾಯತ ಕಾರ್ಯಾಲಯದೆದುರು ಕಚೇರಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ.

ಶಿರಹಟ್ಟಿ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದವರು ಶಿರಹಟ್ಟಿ ಪಟ್ಟಣ ಪಂಚಾಯತ ಕಾರ್ಯಾಲಯದೆದುರು ಕಚೇರಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಈ ವೇಳೆ ಜಿಲ್ಲಾ ಸಂಘದ ಪದಾಧಿಕಾರಿ ಉಡಚಪ್ಪ ನೀಲಣ್ಣವರ, ತಾಲೂಕು ಘಟಕದ ಅಧ್ಯಕ್ಷ ಹುಚ್ಚಪ್ಪ ಗೋಡೆಣ್ಣವರ ಮಾತನಾಡಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಈ ಹಿಂದೆ ಮುಷ್ಕರ ಕೈಗೊಂಡಾಗ ಸರಕಾರದ ಪೌರಾಡಳಿತದ ಉನ್ನತ ಮಟ್ಟದ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಇದು ಹುಸಿಯಾಗಿದ್ದು, ಸರ್ಕಾರ ತಕ್ಷಣ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಅನಿರ್ದಿಷ್ಟ ಸತ್ಯಾಗ್ರಹ ನಡೆಸುತ್ತಿರುವ ಇವರು ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಘೋಷಿಸುವುದು. ರಾಜ್ಯ ಸರ್ಕಾರಿ ನೌಕರರಿಗೆ ದೊರಕುತ್ತಿರುವ ಸೌಲಭ್ಯಗಳಾದ ಕೆಜೆಐಡಿ, ಜಿಪಿಎಫ್ ಇತರ ಸವತ್ತುಗಳನ್ನು ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರಮೆನ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಬೀದಿ ದೀಪ ನಿರ್ವಹಣೆ ಕಾರ್ಮಿಕರು, ಕ್ಲೀನರ್, ಹೆಲ್ಪರ್, ಸ್ಯಾನಿಟರಿ ಸೂಪರವೈಜರ್ ಸೇರಿದಂತೆ ಇನ್ನು ಅನೇಕ ವೃಂದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಪದ್ದತಿಯಿಂದ ಮುಕ್ತಗೊಳಿಸಿ ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಯಡಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ನಮ್ಮ ನ್ಯಾಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಪೌರಾಡಳಿತ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಲೆಕ್ಕವಿಲ್ಲದಷ್ಟು ಸಲ ಮನವಿ ಸಲ್ಲಿಸಿದ್ದೇವೆ. ಆದರೂ, ಸರ್ಕಾರ ಸ್ಪಂದಿಸಿಲ್ಲ. ಪೌರ ನೌಕರರ ವಿಷಯದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಹಾಗೂ ನಡೆಸುತ್ತಿರುವ ಎಲ್ಲ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರ ಕಾಲಮಿತಿಯೊಳಗೆ ಬೇಡಿಕೆ ಈಡೇರಿಸದೇ ಇಲ್ಲದ್ದಲ್ಲಿ ಕಚೇರಿ ಕೆಲಸ, ನೈರ್ಮಲ್ಯದ ಜೊತೆಗೆ ಕುಡಿಯುವ ನೀರು ಸರಬರಾಜು, ಬೀದಿದೀಪ ನಿರ್ವಹಣೆ ಕೆಲಸ ಕೂಡ ಸ್ಥಗಿತಗೊಳಿಸಿ ಮುಷ್ಕರ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು. ಚನ್ನವೀರಯ್ಯ ಹಿರೇಮಠ, ಆನಂದ ಘಂಟಿ, ರಮೇಶ ಕಂಟೆಮ್ಮನವರ, ಉಡಚವ್ವ ಬಡೆಣ್ಣವರ, ಸಿದ್ದಪ್ಪ ಅಮರಾಪೂರ, ಫಕ್ಕಿರೇಶ ಬಂತಿ, ದುರ್ಗಪ್ಪ ಗುಡಿಮನಿ, ಮರಿಯಪ್ಪ ಪೂಜಾರ, ಉಮೇಶ ಬಡೆಣ್ಣವರ, ಮರಿಯಪ್ಪ ಗುಡಿಮನಿ, ನೀಲವ್ವ ಗುಡಿಮನಿ, ರತ್ನವ್ವ ಬಡೆಣ್ಣವರ, ಬಸವಣ್ಣೆವ್ವ ಗುಡಿಮನಿ, ಕರಿಯಪ್ಪ ಬಡ್ಡಪ್ಪನವರ, ಅಂದಾನೆಪ್ಪ ಬಿಡನಾಳ, ಯಲ್ಲವ್ವ ಗೋಡೆಣ್ಣವರ, ದ್ರಾಕ್ಷಾಯಣಿ ಕಂಟೆಮ್ಮನವರ, ಹನಮಂತ ಕೊಡ್ಲಿ, ನಾಗೇಶ ಕುಲಕರ್ಣಿ, ಅರುಣ ಪರಭತ, ಹಾಲಪ್ಪ ಬಡೆಣ್ಣವರ, ನಿಂಗವ್ವ ಮರಚಣ್ಣವರ, ಹನಮವ್ವ ಗುಡಿಮನಿ, ಸಾವಕ್ಕ ಗುಡಿಮನಿ, ಮಲ್ಲೇಶ ತಳವಾರ, ಲಕ್ಷ್ಮಣ ತಳವಾರ, ಲಕ್ಷ್ಮಣ ಮಳ್ಳಣ್ಣವರ ಇದ್ದರು.