- ನಕ್ಸಲ್ ಚಟುವಟಿಕೆ ನಿಯಂತ್ರಣ, ಆರ್ಥಿಕ ಸಬಲೀಕರಣ ಮಾದರಿ । ಹೊಸಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮವಾಸ ಪಾದಯಾತ್ರೆ
ಸತತ ಮೂರನೇ ಬಾರಿಗೆ ಈ ದೇಶದ ಪ್ರದಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಅತ್ಯಂತ ಸುಭದ್ರವಾಗಿದ್ದು ಪ್ರಸ್ತುತ ಜಗತ್ತಿನ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶುಕ್ರವಾರ ಪಟ್ಟಣದ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೋದಿಯವರು ಪ್ರಧಾನಿಯಾಗಿ ಮಾಡಿರುವ ಬಡತನ ಮತ್ತು ನಿರುದ್ಯೋಗ ಸಮಸ್ಯೆ ನಿರ್ಮೂಲನೆ, ಭಯೋತ್ಪಾದಕ ಮತ್ತು ನಕ್ಸಲ್ ಚಟುವಟಿಕೆ ನಿಯಂತ್ರಣ ಮತ್ತು ಆರ್ಥಿಕ ಸಬಲೀಕರಣ ಮಾದರಿಯಾಗಿದೆ. ನೆಹರೂ ಇಂದಿರಾಗಾಂಧಿಯವರನ್ನು ಮೀರಿಸಿ ಮೋದಿ ಪ್ರಧಾನಿಯಾಗಿ ಸತತ 13 ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂಧರ್ಭದಲ್ಲಿ ಸಂಘಟನೆಯಿಂದ ಈ ದಿನ ಪಟ್ಟಣದಲ್ಲಿ ಹಿರಿಯರ ಭೇಟಿ, ಹೊಸಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮವಾಸ ಪಾದಯಾತ್ರೆ ಮತ್ತು ಮನೆ ಭೇಟಿ, ಕಾರ್ಯಕರ್ತರ ಸಭೆ ಹಾಗೂ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಜಗತ್ತಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಪ್ರದಾನಿಯಾಗಿ ಮೋದಿ ಮಾಡಿರುವ ಸಾಧನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ದೇಶದ ಬಗೆಗಿದ್ದ ಕೀಳರಿಮೆ ತೊಲಗಿಸಿ ಇಡೀ ಜಗತ್ತು ಭಾರತವನ್ನು ತಿರುಗಿ ನೋಡುವಂತೆ ಮಾಡಿರುವುದು ನರೇಂದ್ರ ಮೋದಿ ಸಾಧನೆ. ಮೋದಿಯವರು ಮಾಡಿದ ಸಾಧನೆಗೆ 500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮಮಂದಿರ ನಿರ್ಮಾಣ ಕಿರೀಟ ಪ್ರಾಯದಂತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಈ ತಾಲೂಕಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಸೇತುವೆ,ಕುಡಿಯುವ ನೀರಿನ ಯೋಜನೆಗೆ ನೂರಾರು ಕೋಟಿ ರೂ ಅನುದಾನ ಹರಿದು ಬಂದಿದೆ. ತಾಲೂಕಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಸಲುವಾಗಿ ಈಗಾಗಲೇ ಸರ್ವೇ ಕಾರ್ಯಕ್ಕೆ ಅನುಮತಿ ದೊರೆತಿದೆ. ಕೇಂದ್ರ ಸರ್ಕಾರದ ಅನುದಾನದ ಜನೌಷಧ ಕೇಂದ್ರಗಳನ್ನು ಸರ್ಕಾರಿ ಆಸ್ಪತ್ರೆ ಆವರಣದಿಂದ ಹೊರಗಿಡುವಂತೆ ತೆಗೆದುಕೊಂಡ ರಾಜ್ಯ ಸರ್ಕಾರದ ನಿರ್ಧಾರ ಬಡಜನರ ವಿರೋಧಿಯಾಗಿದೆ ಎಂದು ದೂರಿದರು.
ಗೃಹ ಸಚಿವ ಪ್ರಿಯಾಂಕ ಖರ್ಗೆಯವರು ಆರ್ಎಸ್ಎಸ್ ಬಗ್ಗೆ ಎತ್ತಿರುವ ವಿಚಾರದ ಬಗ್ಗೆ ಮಾತನಾಡಿ, ತಂದೆ ಸಾಧನೆಯ ಆಧಾರದಲ್ಲಿ ದೊರೆತ ಸ್ಥಾನದ ಹೊಣೆಗಾರಿಕೆ ನಿರ್ವಹಣೆ ಮಾಡುವುದನ್ನು ಬಿಟ್ಟು ಸುದ್ದಿಯಲ್ಲಿರುವ ಸಲುವಾಗಿ ಪ್ರಚಾರ ಖರ್ಗೆಯಾಗಿದ್ದಾರೆ ಎಂದು ಟೀಕಿಸಿದರು.
-
ಶಾಸಕ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ. ಬಿಜೆಪಿ ಮಂಡಲ ಅಧ್ಯಕ್ಷ ಹೆದ್ದೂರು ನವೀನ್ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಕುಣಜೆ ಕಿರಣ್ ಇದ್ದರು.