9 ಮಿತ್ರರಾಷ್ಟ್ರ ಸಾರ್ವಭೌಮತ್ವ ರಕ್ಷಿಸಲು ಭಾರತ ಬದ್ಧ: ಸಿಂಗ್‌

KannadaprabhaNewsNetwork |  
Published : Apr 06, 2025, 01:48 AM IST
ರಾಜನಾಥ್‌ ಸಿಂಗ್‌  | Kannada Prabha

ಸಾರಾಂಶ

ಯಾವುದೇ ರಾಷ್ಟ್ರ ಅತಿಯಾದ ಸಂಪತ್ತು, ಸೇನಾಬಲದಿಂದ ಬೇರೆ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ ಎಂದಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭಾರತ ತನ್ನ ಮಿತ್ರ ರಾಷ್ಟ್ರಗಳ ಹಿತಾಸಕ್ತಿ, ಸಾರ್ವಭೌಮತ್ವ ರಕ್ಷಿಸಲು ಬದ್ಧವಿದೆ ಎಂದು ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ಯಾವುದೇ ರಾಷ್ಟ್ರ ಅತಿಯಾದ ಸಂಪತ್ತು, ಸೇನಾಬಲದಿಂದ ಬೇರೆ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ ಎಂದಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭಾರತ ತನ್ನ ಮಿತ್ರ ರಾಷ್ಟ್ರಗಳ ಹಿತಾಸಕ್ತಿ, ಸಾರ್ವಭೌಮತ್ವ ರಕ್ಷಿಸಲು ಬದ್ಧವಿದೆ ಎಂದು ಭರವಸೆ ನೀಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ಹಿಂದೂ ಮಹಾಸಾಗರದಲ್ಲಿ ಚೀನಾ ಪ್ರಾಬಲ್ಯ ಸಾಧಿಸುತ್ತಿರುವ ಸಂದರ್ಭದಲ್ಲಿ ಮಿತ್ರ ರಾಷ್ಟ್ರಗಳೊಂದಿಗೆ ಸೇರಿ ಬಲಿಷ್ಠವಾದ ಅಸ್ತಿತ್ವ ಸ್ಥಾಪಿಸುವ ಸುಳಿವು ನೀಡಿದ್ದಾರೆ.

ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ 9 ರಾಷ್ಟ್ರಗಳ ಪ್ರತಿನಿಧಿಗಳು ಇರುವ ಐಒಎಸ್ ಸಾಗರ ಪರಿಕ್ರಮಕ್ಕೆ ಶನಿವಾರ ಚಾಲನೆ ನೀಡಿ, ಬಳಿಕ, ನೌಕಾನೆಲೆಯಲ್ಲಿ ₹20 ಸಾವಿರ ಕೋಟಿ ವೆಚ್ಚದ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಾಬಲ್ಯ ಸಾಧಿಸುತ್ತಿದ್ದು, ಇದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ಜೊತೆಗೆ ನಮ್ಮ ಮಿತ್ರ ರಾಷ್ಟ್ರಗಳ ಸುರಕ್ಷತೆಗೂ ನೆರವು ನೀಡಲಿದೆ ಎಂದರು.

ಬಾಕ್ಸ್:

9 ದೇಶಗಳ ಸುರಕ್ಷತೆ

ಕೀನ್ಯಾ, ಮಡಗಾಸ್ಕರ್, ಕೊಮರೋಸ್, ಮಾಲ್ಡೀವ್ಸ್, ಮಾರಿಷಸ್, ಮೊಜಾಂಬಿಕ್, ಸೇಶೆಲ್ಸ್, ಶ್ರೀಲಂಕಾ ಹಾಗೂ ತಾಂಜಾನಿಯಾ ದೇಶಗಳ ನೌಕಾಪಡೆಯ 44 ಪ್ರತಿನಿಧಿಗಳು ಇರುವ ಐಒಎಸ್ ಸಾಗರ ಪರಿಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಿದರು. ಐಎನ್ಎಸ್ ಸುನಯನ ಹೆಸರಿನ ಈ ನೌಕೆ ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳ ಶಾಂತಿ, ಸುರಕ್ಷತೆಯ ಉಸ್ತುವಾರಿ ವಹಿಸಲಿದೆ.ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾಪಡೆಯ ಆದ್ಯತೆ ಕೇವಲ ಸುರಕ್ಷತೆಗಷ್ಟೇ ಅಲ್ಲ, ಸಂಸ್ಕೃತಿ, ವ್ಯಾಪಾರ ವಹಿವಾಟು, ಪ್ರವಾಸೋದ್ಯಮದ ಮೂಲಕ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಪ್ರಾಮುಖ್ಯತೆ ನೀಡಲಾಗುತ್ತದೆ. ಭಾರತವು ಹಿಂದೂ ಮಹಾಸಾಗರದ ಬಳಕೆ ರಾಷ್ಟ್ರಗಳ ಜೊತೆ ಸದಾ ಸಹಕಾರ ಮನೋಭಾವದಿಂದ ನಡೆದುಕೊಂಡಿದೆ. ಇದರಿಂದಾಗಿ ಹಿಂದೂ ಮಹಾಸಾಗರದಲ್ಲಿ ಶಾಂತಿಯುತ ಮತ್ತು ಸಹಬಾಳ್ವೆಗೆ ಸಹಕಾರಿಯಾಗಿದೆ ಎಂದರು.

ಹಿಂದೂ ಮಹಾಸಾಗರದಲ್ಲಿ ಈಚಿನ ವರ್ಷಗಳಲ್ಲಿ ವ್ಯಾಪಾರಿ ಹಡಗುಗಳ ಒತ್ತೆ, ಕಡಲ್ಗಳ್ಳರ ಹಾವಳಿ ಸಂದರ್ಭದಲ್ಲಿ ಭಾರತದ ನೌಕಾಸೇನೆ ರಕ್ಷಣೆಗೆ ಮೊದಲು ಧಾವಿಸುತ್ತದೆ. ಕಡಲುಗಳ್ಳರ ಹಾವಳಿ ಸಂದರ್ಭದಲ್ಲಿ ಕೇವಲ ಭಾರತೀಯ ಹಡಗುಗಳ ರಕ್ಷಣೆಗಲ್ಲದೆ ವಿದೇಶಿ ಹಡಗುಗಳ ರಕ್ಷಣೆಗೂ ಭಾರತೀಯ ನೌಕಾಪಡೆ ಮುನ್ನುಗ್ಗುತ್ತದೆ. ಕಡಲುಗಳ್ಳರ ಹಾವಳಿ ತಡೆಗಟ್ಟಿ, ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ಹಿಂದೂ ಮಹಾಸಾಗರವನ್ನು ಸುರಕ್ಷಿತ ವಲಯವಾಗಿಸುವುದು ನಮ್ಮ ಪ್ರಮುಖ ಉದ್ದೇಶ ಎಂದರು.

ಹಿಂದೂ ಮಹಾಸಾಗರವನ್ನು ಮಿತ್ರ ರಾಷ್ಟ್ರಗಳ ಮಧ್ಯೆ ವ್ಯಾಪಾರ ವಹಿವಾಟಿಗೆ ಸುಭದ್ರ ನೆಲೆಯಾಗಿಸಲು ಅಗತ್ಯ ಶಸ್ತ್ರಾಸ್ತ್ರ ಮತ್ತು ಅತ್ಯಾಧುನಿಕ ಉಪಕರಣಗಳ ಮೂಲಕ ಭಾರತೀಯ ನೌಕಾಪಡೆ ಸುಸಜ್ಜಿತವಾಗಿದೆ ಎಂದು ತಿಳಿಸಿದರು.

ಈಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾರಿಷಸ್ ಗೆ ತೆರಳಿದ ಸಂದರ್ಭದಲ್ಲಿ ಸಾಗರಕ್ಕಿಂತ ಮುಂದೆ ಮಹಾಸಾಗರದ ಸಂರಕ್ಷಣೆ ಕಲ್ಪನೆ ಬಿತ್ತಿದ್ದರಿಂದ ಐಒಎಸ್ ಸಾಗರ ನೌಕೆ ಮೂಲಕ ಭಾರತೀಯ ನೌಕಾಪಡೆ ನೆರೆಯ 9 ರಾಷ್ಟ್ರಗಳ 44 ಪ್ರತಿನಿಧಿಗಳ ಜೊತೆ ಸಾಗರ ಪರಿಕ್ರಮಕ್ಕೆ ಹೊರಟಿದ್ದು ಭದ್ರತೆ ಮತ್ತು ಆ ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

1919ರ ಏ.5ರಂದು ಮುಂಬಯಿಯಿಂದ ಲಂಡನ್ ಗೆ ಭಾರತದ ಮೊದಲ ಸರಕು ಹಡಗು ತೆರಳಿತ್ತು. ಅದರ ನೆನಪಿಗೆ 1964ರಿಂದ ಪ್ರತಿ ವರ್ಷ ಏ.5ರಂದು ಮೆರಿಟೈಮ್ ಡೇ ಆಚರಿಸುತ್ತಿದ್ದೇವೆ. ಹಿಂದೂ ಮಹಾಸಾಗರದಲ್ಲಿ ಬಳಕೆದಾರ ರಾಷ್ಟ್ರಗಳ ಹಿತರಕ್ಷಣೆಗೆ ಭಾರತ ಮುಂದಡಿ ಇಟ್ಟಿದ್ದರ ದಶಮಾನೋತ್ಸವ ಅಂಗವಾಗಿ ಈಗ ಐಒಎಸ್ ಸಾಗರ ಪರಿಕ್ರಮವನ್ನು ಭಾರತದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌
ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು