ಭಾರತ ವಿಶ್ವ ಗುರು ಪ್ರಾಬಲ್ಯ ಸಾಧಿಸುವುದಕ್ಕಾಗಿ ಅಲ್ಲ: ಸಿ.ಟಿ.ರವಿ

KannadaprabhaNewsNetwork |  
Published : Jun 09, 2026, 01:15 AM IST
ಅಅಅ | Kannada Prabha

ಸಾರಾಂಶ

ಚಿಕ್ಕಮಗಳೂರುಭಾರತ ವಿಶ್ವಗುರು ಆಗಬೇಕು ಎನ್ನುವುದು ಜಗತ್ತಿನ ಮೇಲೆ ಪ್ರಾಬಲ್ಯ ಸಾಧಿಸುವುದಕ್ಕಾಗಿ ಅಲ್ಲ. ಜಗತ್ತಿನ ಕಲ್ಯಾಣಕ್ಕಾಗಿ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಜಿಲ್ಲಾ ಮಟ್ಟದ ಸಂಘಟನಾ ಕಾರ್ಯ ದರ್ಶಿಗಳ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭಾರತ ವಿಶ್ವಗುರು ಆಗಬೇಕು ಎನ್ನುವುದು ಜಗತ್ತಿನ ಮೇಲೆ ಪ್ರಾಬಲ್ಯ ಸಾಧಿಸುವುದಕ್ಕಾಗಿ ಅಲ್ಲ. ಜಗತ್ತಿನ ಕಲ್ಯಾಣಕ್ಕಾಗಿ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಶೃಂಗೇರಿಯಲ್ಲಿ ಸಹಕಾರ ಭಾರತಿ ಕರ್ನಾಟಕ ದಿಂದ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯ ದರ್ಶಿಗಳ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಗುರಿ ತಾಯಿ ಭಾರತಿಯನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವುದಾಗಿದೆ. ಭಾರತ ವಿಶ್ವಗುರು ಆಗಬೇಕು ಎನ್ನುವುದು ಜಗತ್ತಿನ ಮೇಲೆ ಪ್ರಾಬಲ್ಯ ಸಾಧಿಸುವುದಕ್ಕಾಗಿ ಅಲ್ಲ. ಜಗತ್ತಿನ ಕಲ್ಯಾಣವನ್ನು ಬಯಸುವ ಭಾರತೀಯ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಮುನ್ನಡೆಸಿದಾಗ ವಿಶ್ವಕ್ಕೆ ಒಳಿತಾಗುತ್ತದೆ ಎಂದು ಹೇಳಿದರು.

ಭಾರತದಲ್ಲಿ ಸಹಕಾರಿ ಚಳುವಳಿಗೆ ಶತಮಾನದ ಇತಿಹಾಸವಿದ್ದರೂ, ಅದರ ಮೂಲ ತತ್ವ ಭಾರತೀಯ ಜೀವನ ಪದ್ಧತಿಯಲ್ಲೇ ಅಡಗಿದೆ. ವೇದಗಳಲ್ಲೇ ‘ಸಂಘಚ್ಛಧ್ವಂ, ಸಂವದಧ್ವಂ’ ಎಂಬ ಸಂದೇಶದ ಮೂಲಕ ಒಟ್ಟಾಗಿ ನಡೆಯುವ ಜೀವನದ ಪರಿಕಲ್ಪನೆ ನೀಡಲಾಗಿದೆ. ಸಹಕಾರಿ ಚಳುವಳಿ ಎಂಬ ಹೆಸರು ಇರಲಿಲ್ಲ ಅಷ್ಟೇ, ಆದರೆ, ಅದರ ತತ್ವಗಳು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜೀವಂತವಾಗಿದ್ದವು ಎಂದು ಹೇಳಿದರು.

ಗ್ರಾಮೀಣ ಸಮಾಜದಲ್ಲಿ ಕೃಷಿ ಉತ್ಪನ್ನಗಳಲ್ಲಿ ವಿವಿಧ ವೃತ್ತಿ ಸಮುದಾಯಗಳಿಗೆ ಪಾಲು ಮೀಸಲಿಡುವ ಪದ್ಧತಿ, ದೇವಸ್ಥಾನಗಳ ಜಾತ್ರೆ ಹಾಗೂ ಉತ್ಸವಗಳ ನಿರ್ವಹಣೆ, ಕೆರೆ-ಕಟ್ಟೆ, ಶಾಲೆ, ದೇವಾಲಯಗಳ ನಿರ್ಮಾಣ ಮತ್ತು ನಿರ್ವಹಣೆ ಎಲ್ಲವೂ ಸಹಕಾರಿ ಮನೋಭಾವದ ಆಧಾರದ ಮೇಲೆ ನಡೆಯುತ್ತಿದ್ದವು ಎಂದು ವಿವರಿಸಿದರು.

ಸಮಾರಂಭದಲ್ಲಿ ಸಹಕಾರ ಭಾರತಿ ಕರ್ನಾಟಕದ ರಾಜ್ಯಾಧ್ಯಕ್ಷ ಪ್ರಭುದೇವ್ ಆರ್ ಮಾಗನೂರ್, ಮಾಜಿ ರಾಜ್ಯಾಧ್ಯಕ್ಷ ಸತೀಶ್ ಚಂದ್ರ, ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ್ ಪಾಚ್ಪೂರ್, ಸಹಕಾರ ಭಾರತಿ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಆರ್.ಎಸ್ ನಯನಾ, ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯಕ್ಉ ಪಸ್ಥಿತರಿದ್ದರು.

-- ಕೋಟ್‌---

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ವ್ಯಕ್ತಿಗಳು ಇರುವುದರಲ್ಲಿ ತಪ್ಪಿಲ್ಲ. ಆದರೆ, ಸಹಕಾರಿ ಸಂಸ್ಥೆಗಳು ರಾಜಕೀಯದ ದುರುಪಯೋಗಕ್ಕೆ ವೇದಿಕೆಯಾಗಬಾರದು.

- ಸಿ.ಟಿ.ರವಿ, ಸದಸ್ಯ, ವಿಧಾನಪರಿಷತ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ
2028ಕ್ಕೆ ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿಯೇ ಎಂಎಲ್‌ಎ: ಸೀಕಲ್