ಭಾರತದ ಆರ್ಥಿಕತೆ 10 ಟ್ರಿಲಿಯನ್ ಡಾಲರ್‌ ಶೀಘ್ರ: ವಿ.ಮಹಾದೇಶ

KannadaprabhaNewsNetwork |  
Published : Aug 15, 2026, 02:30 AM IST
14ಕೆಡಿವಿಜಿ6, 7-ದಾವಣಗೆರೆ ಜಿಎಂ ವಿವಿಯಲ್ಲಿ ಸೋಮವಾರ ಎಚ್ಆರ್‌ ಕಾನ್‌ಕ್ಲೇವ್-2026 ಮಹಾ ಸಮಾವೇಶದಲ್ಲಿ ಬೆಂಗಳೂರಿನ ಎಸ್‌ಟಿಪಿಐ ನಿರ್ದೇಶಕ ವಿ.ಮಹಾದೇಶ, ಜಿಎಂವಿವಿ ಕುಲಾಧಿಪತಿ ಜಿ.ಎಂ.ಲಿಂಗರಾಜು, ದೇಶದ ವಿವಿಧ ಕಂಪನಿಗಳು ಎಚ್ಆರ್ ಪ್ರತಿನಿಧಿಗಳು. | Kannada Prabha

ಸಾರಾಂಶ

ದೇಶದ ಐಟಿ-ಬಿಪಿಎಂ ಕ್ಷೇತ್ರವು ಶೇ.8ರಿಂದ 10ರಷ್ಟು ಕೊಡುಗೆ ನೀಡುತ್ತಿದ್ದು, 2032ರ ವೇಳೆಗೆ ಭಾರತವು 10 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಲಿದೆ ಎಂದು ಬೆಂಗಳೂರಿನ ಎಸ್‌ಟಿಪಿಐ ನಿರ್ದೇಶಕ ವಿ.ಮಹಾದೇಶ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಐಟಿ-ಬಿಪಿಎಂ ಕ್ಷೇತ್ರವು ಶೇ.8ರಿಂದ 10ರಷ್ಟು ಕೊಡುಗೆ ನೀಡುತ್ತಿದ್ದು, 2032ರ ವೇಳೆಗೆ ಭಾರತವು 10 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಲಿದೆ ಎಂದು ಬೆಂಗಳೂರಿನ ಎಸ್‌ಟಿಪಿಐ ನಿರ್ದೇಶಕ ವಿ.ಮಹಾದೇಶ ತಿಳಿಸಿದರು.

ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಎಚ್ಆರ್‌ ಕಾನ್‌ಕ್ಲೇವ್-2026 ಮಹಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಭಾರತದ ಐಟಿ ಉದ್ಯಮವು ಸುಮಾರು 315 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಆದಾಯವನ್ನು ಪ್ರಸಕ್ತ ಸಾಲಿನಲ್ಲಿ ಗಳಿಸುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದರು.

ಇಡೀ ದೇಶದ ಎಸ್‌ಟಿಪಿಐ ಘಟಕಗಳಿಂದ ನಡೆಯುವ ಒಟ್ಟು ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.42.5ರಷ್ಟು ಇದ್ದು, ರಾಜ್ಯವು ಐಟಿ ಮತ್ತು ಸ್ಟಾರ್ಟಪ್‌ ಕ್ಷೇತ್ರದಲ್ಲಿ ಭಾರೀ ಮುನ್ನಡೆಯನ್ನು ಸಾಧಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. 2022ರಲ್ಲಿ ದಾವಣಗೆರೆಯಲ್ಲಿ ಸ್ಥಾಪಿತ ಎಸ್‌ಟಿಪಿಐ ಕೇಂದ್ರವು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಬೆಂಬಲದೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ದಾವಣಗೆರೆ ಎಸ್‌ಟಿಪಿಐ ಘಟಕಗಳಿಂದ ಸುಮಾರು 3.8 ಕೋಟಿ ರು. ಮೌಲ್ಯದ ರಫ್ತು ವಹಿವಾಟು ಆಗಿರುವುದು ಮಧ್ಯ ಕರ್ನಾಟಕ ಈ ಊರು ತಂತ್ರಜ್ಞಾನ ಕೇಂದ್ರವಾಗಿ ಬೆಳೆಯುವ ಮುನ್ಸೂಚನೆ ನೀಡುತ್ತಿದೆ. ಕರ್ನಾಟಕ ಐಟಿ ನೀತಿ 2025-2030 ಹಾಗೂ ಸ್ಟಾರ್ಟಪ್ ನೀತಿ ಮೂಲಕ ಬೆಂಗಳೂರು ಹೊರತಾದ ಜಿಲ್ಲೆಗಳಲ್ಲೂ 10 ಸಾವಿರಕ್ಕೂ ಅಧಿಕ ಹೊಸ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ. ಇದು ದಾವಣಗೆರೆ ಜಿಲ್ಲೆಯ ಯುವ ಜನರಿಗೂ ಸುವರ್ಣಾವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕೇವಲ ಸಾಂಪ್ರಾದಾಯಿಕ ಶಿಕ್ಷಣಕ್ಕೆ ಸೀಮಿತವಾಗದೇ, ಉದ್ಯಮ ಕ್ಷೇತ್ರದ ಹೊಸ ಬೇಡಿಕೆಗನುಗುಣವಾಗಿ ಸಜ್ಜಾಗಬೇಕು. ಕೃತಕ ಬುದ್ಧಿಮತ್ತೆ ಹಾಗೂ ಉದಯೋನ್ಮುಖ ತಂತ್ರಜ್ಞನಗಳ ಮೂಲಕ ಉನ್ನತ ಮಟ್ಟದ ಉದ್ಯೋಗ ಸೃಷ್ಟಿಸಲು ಇಂತಹ ಮಹಾ ಸಮ್ಮೇಳನಗಳು ಸಹ ಸೂಕ್ತ ವೇದಿಕೆಯಾಗಲಿವೆ. ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ರಂಗದ ಜಂಟಿ ಸಹಯೋಗದಲ್ಲಿ ದಾವಣಗೆರೆ ಜಿಲ್ಲೆಯು ಕರ್ನಾಟಕದ ರಾಜ್ಯದ ನಕ್ಷೆಯಲ್ಲಿ ಪ್ರಮುಖ ನಾವೀನ್ಯತೆಹಾಗೂ ಉದ್ಯಮಶೀಲತೆಯ ಕೇಂದ್ರವಾಗಿ ಹೊರ ಹೊಮ್ಮಲಿದೆ ಎಂದು ಭವಿಷ್ಯ ನುಡಿದರು.

ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕೃತಕ ಬುದ್ಧಿ ಮತ್ತೆ ಬಂದ ಮೇಲೆ ಕೆಲಸಗಳೆಲ್ಲಾ ಹೋಗುತ್ತವೆಂಬ ವದಂತಿ ಹರಡಿತ್ತು. ಅಂತಹ ವದಂತಿಗಳಿಗೆ ತೆರೆ ಎಳೆದು, ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬುವ ಉದ್ದೇಶ‍ದಿಂದ ಜಿಎಂ ವಿವಿ ಮಹಾ ಸಮ್ಮೇಳನವನ್ನು ಆಯೋಜಿಸಿದೆ ಎಂದರು.

ಜಿಎಂ ವಿವಿ ಕುಲಾಧಿಪತಿ ಜಿ.ಎಂ.ಲಿಂಗರಾಜು ಮಾತನಾಡಿ, ದಾವಣಗೆರೆಯಲ್ಲಿ ಏರ್‌ಪೋರ್ಟ್ ಇಲ್ಲದಿದ್ದರೂ ಬೆಂಗಳೂರು, ಹುಬ್ಬಳ್ಳಿ ಮೂಲಕ ದೆಹಲಿಯಿಂದಲೂ ಎಚ್ಆರ್ ಮುಖ್ಯಸ್ಥರು ಮಹಾ ಸಮ್ಮೇಳನದಲ್ಲಿ ಆಗಮಿಸಿದ್ದು ಸಂತಸ ತಂದಿದೆ. ಗ್ರಾಮೀಣ, ದಾವಣಗೆರೆ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಸಿಗಬೇಕೆಂಬುದೇ ನಮ್ಮ ಮುಖ್ಯ ಉದ್ದೇಶ‍ವಾಗಿದೆ ಎಂದರು.

ಇನ್ಫೋಸಿಸ್‌ ಫಿನಾಕಲ್ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ ಗ್ಲೋಬಲ್ ಹೆಡ್ ಕೃಷ್ಣಸ್ವಾಮಿ ಸುಬ್ಬರಾವ್, ಸಂಕೇತ್ ರಾಮ ಕೃಷ್ಣಮೂರ್ತಿ ಪ್ರಮುಖ ಭಾಷಣ ಮಾಡಿದರು. ಕುಲಪತಿ ಡಾ.ಎಸ್.ಆರ್. ಶಂಕಪಾಲ್, ಉಪ ಕುಲಪತಿ ಡಾ.ಎಂ.ವೇಣುಗೋಪಾಲರಾವ್, ಕುಲ ಸಚಿವ ಡಾ.ಬಿ.ಎಸ್.ಸುನಿಲಕುಮಾರ, ಪ್ರಾಚಾರ್ಯರು, ಡೀನ್, ನಿರ್ದೇಶಕರು, ಮುಖ್ಯಸ್ಥರು, ಜಿಎಂ ಶೈಕ್ಷಣಿಕ ಸಮೂಹದವರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ರೋಬೋಟಿಕ್ಸ್, ಸೈಬರ್ ಸೆಕ್ಯುರಿಟಿ ಹಾಗೂ 5ಜಿ/6ಜಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸೂಕ್ತ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ನೀಡುವುದು ಇಂದಿನ ಅಗತ್ಯವಾಗಿದೆ.

ವಿ.ಮಹಾದೇಶ ನಿರ್ದೇಶಕ, ಎಸ್‌ಟಿಪಿಐ ಬೆಂಗಳೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೀಲ್ಸ್ ಕಾಲದಲ್ಲೂ ಚಿತ್ರಮಂದಿರ ನಿರ್ಮಾಣ ಧೈರ್ಯದ ಕೆಲಸ
ಆಟೋ ನಿಲ್ದಾಣ ನಿರ್ಮಾಣ ಸಾಮಗ್ರಿಗಳ ತೆರವು: ಆಟೋ ಚಾಲಕರ ಸಂಘ ಆಕ್ರೋಶ