ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಭವಿಷ್ಯದಲ್ಲಿ ಭಾರತವು ಜಾಗತಿಕ ಉತ್ಪಾದನಾ ಹಬ್‌

KannadaprabhaNewsNetwork | Published : Jun 9, 2025 3:15 AM

ಜಗತ್ತಿನಲ್ಲಿ ಜಲ ಸಾರಿಗೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಆದರೆ, ಭಾರತ ಇದಕ್ಕೆ ತದ್ವಿರುದ್ಧವಾಗಿದೆ. ಮೊದಲು ರಸ್ತೆ, ರೈಲು ನಂತರ ಜಲ ಸಾರಿಗೆಗೆ ಒತ್ತು ನೀಡಿದೆ. ಒಟ್ಟಾರೆ ಲಾಜಿಸ್ಟಿಕ್‌ ವ್ಯವಸ್ಥೆಗೆ ಪ್ರಧಾನಿ ಮೋದಿ ಸರ್ಕಾರ ವೇಗ ನೀಡಿದ್ದು, ಅದರಲ್ಲೂ ರೈಲ್ವೆ ವಲಯಕ್ಕೆ ವಿಶೇಷ ಒತ್ತು ನೀಡಿದೆ.

ಧಾರವಾಡ: ಭಾರತದಲ್ಲಿ ಉತ್ಪಾದನಾ ವಲಯಕ್ಕೆ ಪೂರಕ ಪರಿಸರ, ಸಂಪನ್ಮೂಲ ಮತ್ತು ಸಶಕ್ತ ಯುವ ಸಮೂಹವಿದ್ದು, ಭವಿಷ್ಯದಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್‌ ಆಗಿ ಪರಿವರ್ತನೆ ಹೊಂದಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಹೊಡೆಕ್ ವೈಬ್ರೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದ 3ನೇ ಗ್ರೀನ್‌ಫೀಲ್ಡ್ ಘಟಕ ಹಾಗೂ ಶ್ರೀರಾಮ ದೇವಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇಂದು ಉತ್ಪಾದನಾ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆ ಸಾಧಿಸುತ್ತಿದೆ ಎಂದರು.

ಜಗತ್ತಿನಲ್ಲಿ ಜಲ ಸಾರಿಗೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಆದರೆ, ಭಾರತ ಇದಕ್ಕೆ ತದ್ವಿರುದ್ಧವಾಗಿದೆ. ಮೊದಲು ರಸ್ತೆ, ರೈಲು ನಂತರ ಜಲ ಸಾರಿಗೆಗೆ ಒತ್ತು ನೀಡಿದೆ. ಒಟ್ಟಾರೆ ಲಾಜಿಸ್ಟಿಕ್‌ ವ್ಯವಸ್ಥೆಗೆ ಪ್ರಧಾನಿ ಮೋದಿ ಸರ್ಕಾರ ವೇಗ ನೀಡಿದ್ದು, ಅದರಲ್ಲೂ ರೈಲ್ವೆ ವಲಯಕ್ಕೆ ವಿಶೇಷ ಒತ್ತು ನೀಡಿದೆ ಎಂದರು.

ಭಾರತದಲ್ಲಿ 2014ರ ವರೆಗೆ 60 ವರ್ಷದಲ್ಲಿ 23000 ಕಿ.ಮೀ. ರೈಲು ಮಾರ್ಗ ವಿದ್ಯುದ್ದೀಕರಣವಾಗಿತ್ತು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಹತ್ತೇ ವರ್ಷದಲ್ಲಿ 63000 ಕಿ.ಮೀ. ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ದೇಶದ ಕ್ರೂಡ್‌ ಆಯಿಲ್‌ ಆಮದು ತಗ್ಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಸಾಧ್ಯವಾಗಿದೆ ಎಂದು ಹೇಳಿದರು.

460 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ:

ಭಾರತದಲ್ಲಿ 1947ರಿಂದ 2014ರ ವರೆಗೆ 240 ಗಿಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿತ್ತು. ಮೋದಿ ಸರ್ಕಾರ ಬಂದ ಮೇಲೆ ವಿದ್ಯುತ್‌ ಸ್ವಾವಲಂಬನೆಗೆ ಒತ್ತು ನೀಡಿದೆ. 2014-2024ರ ಅವಧಿಯಲ್ಲಿ ಅದನ್ನು 460 ಗಿಗಾವ್ಯಾಟ್‌ಗೆ ಹೆಚ್ಚಿಸಿದೆ. ಈಗಂತೂ ಸೌರ ವಿದ್ಯುತ್‌ ಉತ್ಪಾದನೆ ಮೂಲಕ ಜಗತ್ತನ್ನೇ ತನ್ನತ್ತ ಸೆಳೆಯುತ್ತಿದೆ ಎಂದ ಜೋಶಿ, ಉತ್ಪಾದನಾ ವಲಯಕ್ಕೆ ಧಾರವಾಡ ಜಿಲ್ಲೆಯಲ್ಲೂ ಪೂರಕ ಪರಿಸರವಿದೆ. ಉನ್ನತ ಶಿಕ್ಷಣ ಹೊಂದಿದ ಯುವ ಸಮೂಹವಿದೆ. ಇಲ್ಲಿ ನಾಲ್ಕೈದು ವಿಶ್ವವಿದ್ಯಾಲಯಗಳಿವೆ. ಏಳು ಎಂಜಿನಿಯರಿಂಗ್‌ ಕಾಲೇಜ್‌, ಐಐಟಿ, ಐಐಐಟಿ, ಕೃಷಿ ವಿವಿಯಿದೆ. ಕೈಗಾರೀಕರಣ, ಉತ್ಪಾದನೆ ವಲಯಕ್ಕೆ ತಕ್ಕಂತೆ ಯುವ ಶಕ್ತಿಯನ್ನು ರೂಪಿಸುವ ಅನುಕೂಲಕರ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಹೊಡೆಕ್ ವೈಬ್ರೇಶನ್ ಟೆಕ್ನಾಲಜೀಸ್‌ ಕಂಪನಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಆರ್ಥಿಕ ವೃದ್ಧಿಗೆ ಕೊಡುಗೆ ನೀಡಲಿದೆ ಎಂಬ ಭರವಸೆ ಇದೆ ಎಂದು ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್‌, ಮಾಜಿ ಶಾಸಕ ಅಮೃತ್‌ ದೇಸಾಯಿ, ವಿಪ ಮಾಜಿ ಸದಸ್ಯ ನಾಗರಾಜ್ ಛಬ್ಬಿ ಮತ್ತಿತರರು ಇದ್ದರು.